ಕೆಆರ್ಎಸ್ ನ ದಸರಾ ವಿದ್ಯುದ್ದೀಪ ಅಲಂಕಾರದಲ್ಲಿ ಅಕ್ರಮದ ವಾಸನೆ
ಮಂಡ್ಯ, ಅಕ್ಟೋಬರ್ 6: ದಸರಾ ವೇಳೆ ಕೃಷ್ಣರಾಜಸಾಗರ ಜಲಾಶಯ ವಿದ್ಯುದ್ದೀಪಗಳಿಂದ ಜಗಮಗಿಸಿತ್ತು. ಇದನ್ನು ನೋಡಿ ಜನ ಖುಷಿ ಪಟ್ಟಿದ್ದರು. ಆದರೆ ಇದಕ್ಕೆ ಖರ್ಚು ಆಗಿದ್ದು ಬರೋಬ್ಬರಿ 84ಲಕ್ಷ ರೂ.ಗಳಂತೆ.
ಅಕ್ಟೋಬರ್ 8 ರವರೆಗೂ ಝಗಮಗಿಸಲಿದೆ ಮೈಸೂರಿನ ರಸ್ತೆಗಳು
ಇದೀಗ ಇಷ್ಟೊಂದು ಹಣ ಖರ್ಚು ಮಾಡುವ ಅಗತ್ಯವಿತ್ತೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಇದರ ಜತೆ ಜತೆಯಲ್ಲೇ ಅಕ್ರಮ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿಬಣ) ಅಧ್ಯಕ್ಷ ಎಚ್.ಡಿ. ಜಯರಾಂ ಈ ಕುರಿತು ಆರೋಪ ಮಾಡಿದ್ದು, ಅಷ್ಟೊಂದು ಖರ್ಚು ಮಾಡಿ ಅಲಂಕಾರ ಮಾಡಬೇಕಿತ್ತೆ? ಎಂದು ಪ್ರಶ್ನಿಸಿದ್ದಾರೆ. ಇಷ್ಟೊಂದು ಹಣ ಖರ್ಚಾಗಿಲ್ಲ. ಅಧಿಕಾರಿಗಳು ಅಲಂಕಾರ ಮಾಡುವ ನೆಪದಲ್ಲಿ ಹಣ ಲೂಟಿ ಮಾಡಿದ್ದು, ಕೂಡಲೇ ತನಿಖೆ ನಡೆಸುವಂತೆಯೂ ಅವರು ಒತ್ತಾಯಿಸಿದ್ದಾರೆ.
ಚಿತ್ರ ಕೃಪೆ : ಫೇಸ್ ಬುಕ್
ಕಾವೇರಿ ನೀರಾವರಿ ನಿಗಮದಿಂದ ದೀಪಾಲಂಕಾರ
'ಕಾವೇರಿ ನೀರಾವರಿ ನಿಗಮ ನಿಯಮಿತ'ವು ನವರಾತ್ರಿ ವೇಳೆ ದೀಪಾಲಂಕಾರವನ್ನು ಜಲಾಶಯಕ್ಕೆ ಮಾಡಿತ್ತು. ಇದರಿಂದ ಕೃಷ್ಣರಾಜ ಸಾಗರ ಮತ್ತು ಬೃಂದಾವನದ ಪ್ರದೇಶಗಳು ವಿದ್ಯುದ್ದೀಪಗಳಿಂದ ಜಗಮಗಿಸುತ್ತಾ ಎಲ್ಲರ ಗಮನ ಸೆಳೆದಿದ್ದವು. ಕನ್ನಂಬಾಡಿಯ ಕಟ್ಟೆಗೆ ಒಂದಷ್ಟು ಫ್ಲಡ್ ಲೈಟ್ಗಳ ವ್ಯವಸ್ಥೆ ಮಾಡಿ ಮುಖ್ಯ ದ್ವಾರಕ್ಕೂ ಬೆಳಕಿನ ದೀಪಗಳನ್ನು ಹಾಕಲಾಗಿತ್ತು.
ಲೈಟಿಂಗ್ಸ್ ಗೆ 84 ಲಕ್ಷ ಖರ್ಚು!
ಕೇವಲ ನವರಾತ್ರಿ ವೇಳೆ ಮಾಡಿದ ಈ ದೀಪಾಲಂಕಾರಕ್ಕೆ ಬರೋಬ್ಬರಿ 84ಲಕ್ಷ ರೂ. ಖರ್ಚಾಗಿರುವುದಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೇಲ್ನೋಟಕ್ಕೆ ಅಕ್ರಮದ ವಾಸನೆ
ಏಕೆಂದರೆ ಈಗಾಗಲೇ ಇಲ್ಲಿ ಶಾಶ್ವತ ಬೆಳಕಿನ ವ್ಯವಸ್ಥೆಯಿದೆ. ಹೀಗಿರುವಾಗ ಕೆಲವೇ ಕೆಲವು ವಿದ್ಯುದ್ದೀಪಗಳನ್ನು ಅಳವಡಿಸಿ 84 ಲಕ್ಷ ರೂ. ಖರ್ಚಾಗಿರುವುದಾಗಿ ಹೇಳುತ್ತಿರುವುದೆಷ್ಟು ಸರಿ? ಇದರಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ತನಿಖೆ ನಡೆಸುವಂತೆಯೂಜನರು ಆಗ್ರಹಿಸುತ್ತಿದ್ದಾರೆ.
ವಿದ್ಯುದ್ದೀಪ ಅಲಂಕಾರ ಮಾಡುವ ಜರೂರತ್ತೇನಿತ್ತು ?
ಜಿಲ್ಲೆಯಲ್ಲಿ 2012ರಿಂದ ರೈತರು ನಿರಂತರವಾಗಿ ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ಬೆಳೆ ನಷ್ಟ ಹಾಗೂ ಸಾಲಗಾರರ ಕಿರುಕುಳ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಸರ್ಕಾರವಾಗಲಿ, ಕಾವೇರಿ ನೀರಾವರಿ ನಿಗಮವಾಗಲೀ ರೈತರ ಪರ ನಿಂತಿಲ್ಲ. ಅವರಿಗೆ ಪರಿಹಾರವನ್ನೂ ಸಮರ್ಪಕವಾಗಿ ನೀಡಿಲ್ಲ. ಆದರೆ ಇದೀಗ ಲಕ್ಷಾಂತರ ರೂ. ವ್ಯಯಿಸಿ ವಿದ್ಯುದ್ದೀಪದ ಅಲಂಕಾರ ಮಾಡುವ ಜರೂರತ್ತೇನಿತ್ತು ಎಂಬುದು ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆಯಾಗಿದೆ.
ಅಕ್ರಮದ ಬಗ್ಗೆ ತನಿಖೆ ನಡೆಯಲಿ
ಈಗಾಗಲೇ ರಾಜ್ಯ ಸರ್ಕಾರವು ಕೆ.ಆರ್.ಎಸ್.ನ. ಅಭಿವೃದ್ಧಿಗೆ ಅಪಾರ ಹಣ ಬಿಡುಗಡೆ ಮಾಡಿದೆ. ಕಾಲುವೆಗಳ ಆಧುನೀಕರಣಕ್ಕೆ ನೂರಾರು ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ ಮತ್ತು ವಿಶ್ವ ಬ್ಯಾಂಕ್ ನೆರವೂ ಸಹ ಒದಗಿ ಬರುತ್ತಿದೆ. ಹೀಗಾಗಿ ಕಾಮಗಾರಿಗಳ ಅನುಷ್ಠಾನದಲ್ಲಿ ಕಮೀಷನ್ ದಂಧೆ ನಡೆಸುತ್ತಾ ಕೃಷ್ಣ, ರಾಮನ ಲೆಕ್ಕ ತೋರಿಸಿ ಹಣ ದೋಚಲಾಗುತ್ತಿದೆ ಎಂಬುದು ಸಂಘಟನೆಗಳ ಆರೋಪ.
ಈ ಕುರಿತಂತೆ ಸಂಬಂಧಿಸಿದವರು ಸ್ಪಷ್ಟನೆ ನೀಡಬೇಕಾಗಿದೆ. ಅಷ್ಟೇ ಅಲ್ಲ ಸರ್ಕಾರವೂ ಇತ್ತ ಗಮನಹರಿಸಿ ಸತ್ಯಾಸತ್ಯತೆಗಳ ಬಗ್ಗೆ ತನಿಖೆ ನಡೆಸಬೇಕಿದೆ. ಆದರೆ ಅದೆಲ್ಲ ಆಗುತ್ತಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.