ಕೊರೊನಾ ಭಯದಿಂದ ರಸ್ತೆಯಲ್ಲಿ ಅನಾಥವಾದ 3 ಸಾವಿರ ರೂಪಾಯಿ!
ಮಂಡ್ಯ, ಏಪ್ರಿಲ್ 22: ಕಾಸು ಅಂದ್ರೆ ಹೆಣನೂ ಬಾಯಿ ಬಿಡುತ್ತೆ ಎಂಬ ಮಾತಿದೆ. ಆದರೆ, ಈ ಮಾತನ್ನೀಗ ಕೊರೊನಾ ಬದಲಾಯಿಸಿಬಿಟ್ಟಿದೆ.
Recommended Video
ಕೊರೊನಾ ಅನ್ನೋ ಮಹಾಮಾರಿ ಜಗತ್ತಿನ ಮೇಲೆ ಅದ್ಯಾವ ಮಟ್ಟಿಗೆ ಪರಿಣಾಮ ಬೀರಿದೆ ಅಂದ್ರೆ ಮನುಷ್ಯರ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗಳೇ ಬದಲಾಗುತ್ತಿದೆ. ದುಡ್ಡೇ ಸರ್ವಸ್ವ ಎಂದು ನಂಬಿಕೊಂಡು ಬಂದಿದ್ದ ಯುವ ಪೀಳಿಗೆ ಅದೇ ದುಡ್ಡನ್ನ ಕಂಡ್ರೆ ಗಾಬರಿ ಆಗುವ ಸನ್ನಿವೇಶವನ್ನು ಕೊರೊನಾ ವೈರಸ್ ಸೃಷ್ಟಿಸಿದೆ.
ನೋಟು ನೆಕ್ಕಿ ಕೊರೊನಾವೈರಸ್ ಹರಡಿಸಿ ಎಂದಿದ್ದ ವ್ಯಕ್ತಿ ಬಂಧನ
ರೋಡ್ ನಲ್ಲಿ 1 ರೂಪಾಯಿ ಕಾಯಿನ್ ಬಿದ್ದಿದ್ದನ್ನ ಕಂಡರೆ, ಗಾಡಿಯನ್ನು ನಿಲ್ಲಿಸಿ ಅದನ್ನೇ ಜೇಬಿಗೆ ಹಾಕಿಕೊಳ್ಳುವ ಕಾಲವೊಂದಿತ್ತು. ಆದ್ರೀಗ, ಕೊರೊನಾ ಆ ಕಾಲವನ್ನು ಬದಲಾಯಿಸಿದೆ. ಎಷ್ಟರ ಮಟ್ಟಿಗೆ ಅಂದ್ರೆ, ಬೀದಿಯಲ್ಲಿ 500 ರೂಪಾಯಿ ನೋಟು ಬಿದ್ದಿದ್ದರೂ, ಅದನ್ನ ತೆಗೆದುಕೊಳ್ಳಲು ಜನ ಭಯ ಪಡುತ್ತಿದ್ದಾರೆ. ಅದಕ್ಕೊಂದು ಉತ್ತಮ ನಿದರ್ಶನ ಇಲ್ಲಿದೆ, ಓದಿರಿ...
ಮಂಡ್ಯದಲ್ಲಿ ಹೀಗೊಂದು ಘಟನೆ
ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಗಾಣಿಗರ ಬೀದಿಯಲ್ಲಿ 500 ರೂಪಾಯಿ ಮುಖಬೆಲೆಯ 6 ನೋಟುಗಳು (ಮೂರು ಸಾವಿರ ರೂಪಾಯಿ) ಬಿದ್ದಿದ್ದವು. ಇದನ್ನ ಕಂಡ ಜನ, ನೋಟುಗಳನ್ನು ಮುಟ್ಟಲು ಮುಂದಾಗಲಿಲ್ಲ. ಬದಲಾಗಿ ಆತಂಕಕ್ಕೊಳಗಾದರು.
ಕೊರೊನಾ ವೈರಸ್ ಭಯ
ಕೊರೊನಾ ವೈರಸ್ ಭಯದಿಂದಾಗಿ 500 ರೂಪಾಯಿ ಮುಖಬೆಲೆಯ 6 ನೋಟುಗಳನ್ನು ಜನ ಮುಟ್ಟಲಿಲ್ಲ. ರಸ್ತೆ ಮೇಲೆ ಗಂಟೆಗಳ ಕಾಲ ಮೂರು ಸಾವಿರ ರೂಪಾಯಿ ಅನಾಥವಾಗಿ ಬಿದ್ದಿತ್ತು.
ಪೊಲೀಸರಿಗೆ ಮಾಹಿತಿ
ಭಯಭೀತಗೊಂಡ ಜನರು ರಸ್ತೆಯಲ್ಲಿ ನೋಟು ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೆ ಸ್ಥಳಕ್ಕೆ ಬಂದ ಪೊಲೀಸರು, ಬಿದ್ದಿದ್ದ ನೋಟುಗಳನ್ನು ಪರಿಶೀಲಿಸಿ, ನೋಟಿನ ಮೇಲೆ ಸ್ಯಾನಿಟೈಸರ್ ಸಿಂಪಡಿಸಿ, ಗ್ಲೌಸ್ ಧರಿಸಿ ನೋಟುಗಳನ್ನು ತೆಗೆದುಕೊಂಡರು. ಜೊತೆಗೆ ಹಣ ಕಳೆದುಕೊಂಡವರು ಯಾರಾದರು ಇದ್ದರೆ ಠಾಣೆಗೆ ಬಂದು ಪಡೆಯುವಂತೆ ಸೂಚನೆ ನೀಡಿದರು.
ಹಲವರಲ್ಲಿ ಭಯ
''ಕೊರೊನಾ ವೈರಸ್ ಎಂಬುದು ಅಲ್ಲಾಹ್ ನೀಡಿದ ಒಂದು ಶಿಕ್ಷೆ, ಇದಕ್ಕೆ ಮದ್ದು ಇಲ್ಲ'' ಎನ್ನುತ್ತಾ ಕರೆನ್ಸಿ ನೋಟು ನೆಕ್ಕಿ, ಮೂಗು ಒರೆಸಿಕೊಂಡು ಓರ್ವ ಟಿಕ್ ಟಾಕ್ ವಿಡಿಯೋ ಮಾಡಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು. ನೋಟು ವಿನಿಮಯ ಆಗುವುದರಿಂದಲೂ ಕೊರೊನಾ ಹರಡುತ್ತೇನೋ ಎಂಬ ಭೀತಿ ಹಲವರಲ್ಲಿ ಕಾಡುತ್ತಿದೆ.