ಸುಮಲತಾಗೆ ಕೊರೊನಾ: ಮಂಡ್ಯ ಅಧಿಕಾರಿ, ಜನಪ್ರತಿನಿಧಿಗಳಿಗೆ ಭೀತಿ!
ಮಂಡ್ಯ, ಜುಲೈ 7: ಮಂಡ್ಯ ಸಂಸದೆ ಸುಮಲತಾಗೆ ಸೋಮವಾರ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಪಾಸಿಟಿವ್ ಎಂದು ತಿಳಿದ ತಕ್ಷಣ ಹೋಮ್ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ.
ಸುಮಲತಾಗೆ ಕೊವಿಡ್ ದೃಢವಾಗುತ್ತಿದ್ದಂತೆ ಆ ಕಡೆ ಮಂಡ್ಯ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಆತಂಕ ಹೆಚ್ಚಾಗಿದೆ. ಸೋಂಕಿತೆ ಸುಮಲತಾ ಅವರ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವೇದಿಕೆ ಹಂಚಿಕೊಂಡಿದ್ದವರಿಗೆ ಈಗ ಭೀತಿ ಆವರಿಸಿದೆ.
ಮಂಡ್ಯ ಸಂಸದೆ ಸುಮಲತಾಗೆ ಕೊರೊನಾ ವೈರಸ್ ಸೋಂಕು
ಸುಮಲತಾ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಸಚಿವ ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಶಾಸಕ ಎಂ.ಶ್ರೀನಿವಾಸ್, ಮಂಡ್ಯ ಡಿಸಿ ಸೇರಿ ಹಲವರು ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಅವರಿಗೂ ಸೋಂಕು ಅಂಟಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮುಂದೆ ಓದಿ...
ಮಾಸ್ಕ್ ಧರಿಸದೆ ವೇದಿಕೆಯಲ್ಲಿದ್ದ ಸಂಸದೆ
ಜುಲೈ 4ರಂದು ಮಂಡ್ಯದ ರೈತ ಸಭಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸುಮಲತಾ ಭಾಗವಹಿಸಿದ್ದರು. ಈ ವೇಳೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಣೆ ಮಾಡಲಾಯಿತು. ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಶಾಸಕ ಎಂ.ಶ್ರೀನಿವಾಸ್, ಮಂಡ್ಯ ಡಿಸಿ ಈ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಸುಮಲತಾ ಅವರು ಮಾಸ್ಕ್ ಧರಿಸದೆ ವೇದಿಕೆಯಲ್ಲಿ ಕುಳಿತಿದ್ದರು.
ಮಂಡ್ಯ ಡಿಸಿ, ಸಿಬ್ಬಂದಿಗೂ ಕೊರೋನಾ ಭೀತಿ
ಜಿಲ್ಲೆಯಲ್ಲಿ ಸೋಂಕು ಹೆಚ್ಚಳ ಹಾಗೂ ಸುಮಲತಾ ಅವರ ಸಂಪರ್ಕ ಹಿನ್ನೆಲೆ ಮಂಡ್ಯ ಡಿಸಿ ಕಚೇರಿ ಸ್ಯಾನಿಟೈಸ್ ಮಾಡಲಾಗಿದೆ. ಕಚೇರಿಯ ಒಳ ಮತ್ತು ಹೊರಾವರಣ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ನಗರಸಭೆ ವತಿಯಿಂದ ಡಿಸಿ ಹಾಗೂ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ಕಚೇರಿಗೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಂಸದೆ
ಸುಮಲತಾ ಅವರನ್ನು ಭೇಟಿಯಾದ ವ್ಯಕ್ತಿಗಳ ವಿವರವನ್ನು ಈಗಾಗಲೇ ಸರಕಾರಿ ಅಧಿಕಾರಿಗಳಿಗೆ ನೀಡಲಾಗಿದೆ. ಸಾರ್ವಜನಿಕ ಸಭೆ ಹಾಗೈ ವೈಯಕ್ತಿಕವಾಗಿ ಭೇಟಿ ಮಾಡಿರುವ ಕಾರ್ಯಕರ್ತರು ಹಾಗು ಜನಪ್ರತಿನಿಧಿ, ಅಧಿಕಾರಿಗಳ ವಿವರವನ್ನು ಪಡೆಯಲಾಗಿದೆ. ಈಗ ಅವರನ್ನು ಸಹ ಹೋಮ್ ಕ್ವಾರಂಟೈನ್ಗೆ ಸೂಚಿಸುವ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಇದೆ.
ಕ್ವಾರಂಟೈನ್ಗೆ ಒಳಗಾಗ್ತಾರಾ ಜನಪ್ರತಿನಿಧಿಗಳು?
ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಮಂಡ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿಸಿ, ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಸಚಿವ ನಾರಾಯಣ ಗೌಡ, ಶಾಸಕ ಶ್ರೀನಿವಾಸ್ ಅವರು ಕ್ವಾರಂಟೈನ್ಗೆ ಒಳಪಡಲಿದ್ದಾರಾ ಎಂಬ ಕುತೂಹಲ ಕಾಡ್ತಿದೆ. ಈ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.