ಮಂಡ್ಯ: ಐಸೋಲೇಷನ್ ವಾರ್ಡ್ ನಿಂದ ಕೊರೊನಾ ಶಂಕಿತ ಪರಾರಿ
ಮಂಡ್ಯ, ಏಪ್ರಿಲ್ 06: ಕೊರೊನಾ ವೈರಸ್ ಶಂಕಿತ ವ್ಯಕ್ತಿಯೊಬ್ಬ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಿಂದ ಪರಾರಿಯಾಗಿ ಬಳಿಕ ಪೊಲೀಸರಿಗೆ ಸೆರೆಸಿಕ್ಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಳವಳ್ಳಿ ತಾಲೂಕಿನ ಇಮ್ರಾನ್ ಪಾಷ (೩೫) ಪರಾರಿಯಾಗಲು ಯತ್ನಿಸಿದ್ದ ವ್ಯಕ್ತಿ. ಈತ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದು, ೧೦ ಮಂದಿ ಧರ್ಮಗುರುಗಳ ಸಂಪರ್ಕದಲ್ಲಿದ್ದನು. ಈ ಹಿನ್ನೆಲೆಯಲ್ಲಿ ಮಿಮ್ಸ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ಆತನನ್ನು ದಾಖಲಿಸಲಾಗಿತ್ತು.
ಮಳವಳ್ಳಿ ಜನರನ್ನು ಬೆಚ್ಚಿ ಬೀಳಿಸಿದೆ ಕೊರೊನಾ ಕುರಿತ ಈ ಒಂದು ಸಂಗತಿ...
ಸೋಮವಾರ ಬೆಳಗ್ಗೆ ಇಮ್ರಾನ್ ಪಾಷಾ ಆಸ್ಪತ್ರೆಯ ವೈದ್ಯರು ಹಾಗೂ ವಾರ್ಡ್ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದನು. ಇದು ಕೆಲ ಗಂಟೆಗಳ
ಕಾಲ ಆತಂಕ ಮೂಡಿಸುವಂತೆ ಮಾಡಿತ್ತು. ವಿಷಯ ತಿಳಿದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಇಡೀ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತನಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಯಿತು.
ತಕ್ಷಣ ಮಿಮ್ಸ್ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಪರಶುರಾಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಆಸ್ಪತ್ರೆ ಸಿಬ್ಬಂದಿಯ ವಿಚಾರಣೆ ನಡೆಸಿದರಲ್ಲದೆ, ಆಸ್ಪತ್ರೆಯೊಳಗಿನ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ.
ಆ ನಂತರ ಪೊಲೀಸರು ತನಿಖೆ ನಡೆಸಿದಾಗ ಪರಾರಿಯಾಗಿದ್ದ ಕೊರೊನಾ ಶಂಕಿತ ವ್ಯಕ್ತಿ ಇಮ್ರಾನ್ ಪಾಷಾ ಮಂಡ್ಯದ ಶಂಕರಪುರ ಬಡಾವಣೆಯಲ್ಲಿರುವ ಉರ್ದು ಶಾಲೆ ಬಳಿ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಕೂಡಲೇ ಪೊಲೀಸರು, ವೈದ್ಯ ಸಿಬ್ಬಂದಿ ಆತನನ್ನು ಮತ್ತೆ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.