ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ: ಸುಮಲತಾ ಅಭಿಮತ
Recommended Video
ಮಂಡ್ಯ, ಮಾರ್ಚ್ 15:ಮಂಡ್ಯದಲ್ಲಿ ಚುನಾವಣಾ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ಸುಮಲತಾ ಅಂಬರೀಶ್ ಅವರು ಜಿಲ್ಲೆಯಾದ್ಯಂತ ಸಂಚಾರ ನಡೆಸುತ್ತಿದ್ದು, ಹಿರಿಯ ನಾಯಕರು, ಕಾರ್ಯಕರ್ತರು, ಅಭಿಮಾನಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡುತ್ತಿರುವುದಲ್ಲದೆ, ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಈ ನಡುವೆ ವೈರಮುಡಿ ಜಾತ್ರಾಮಹೋತ್ಸವದ ಆರಂಭದ ದಿನವಾದ ಗುರುವಾರ ಧ್ವಜಾರೋಹಣ ಕಾರ್ಯಕ್ರಮದಂದು ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಡ್ಯದ ಬಗ್ಗೆ ಗುಪ್ತಚರ ವರದಿ, ಜೆಡಿಎಸ್ ಹಾದಿ ಸುಲಭವಲ್ಲ!
ಮಧ್ಯಾಹ್ನ ಮೇಲುಕೋಟೆಗೆ ತೆರಳಿದ ಅವರು, ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿ, ಮತದಾರರ ಗಮನ ಸೆಳೆದರು. ಬಳಿಕ ಪ್ರಸಿದ್ಧ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಆಗಮಿಸಿ ತಿರುನಾರಾಯಣ ಸ್ವಾಮಿ ಹಾಗೂ ಮಹಾಲಕ್ಷ್ಮೀ ಅಮ್ಮನವರ ಗುಡಿಗೆ ತೆರಳಿ ವಿಶೇಷ ಪೂಜೆ ನೇರೆವೇರಿಸಿ ಚುನಾವಣೆಯ ಗೆಲುವಿಗೆ ವಿಶೇಷ ಪ್ರಾರ್ಥನೆ ಮಾಡಿದರು.
ಮೇಲುಕೋಟೆಗೆ ಆಗಮಿಸಿದ ಸುಮತಾ ಅವರಿಗೆ ಅಂಬರೀಶ್ ಅಭಿಮಾನಿಗಳು ಹಾಗೂ ರೈತಸಂಘ, ಕಾಂಗ್ರೆಸ್ ಪಕ್ಷದ ಮುಖಂಡರು, ಭವ್ಯಸ್ವಾಗತ ನೀಡಿದರು. ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು. ಮುಂದೆ ಓದಿ..
ಕಾಂಗ್ರೆಸ್ ನನಗೆ ಮೋಸ ಮಾಡಿಲ್ಲ
ಅಂಬಿಗೆ ಜೈ...ಎಂದು ಪದೇ ಪದೇ ಕೂಗುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿ ಜನರು ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಸುಮಲತಾ ಅಂಬರೀಶ್ ಅವರು, ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ. ಆದರೆ ನಾಯಕರ ನಿರ್ಧಾರಗಳಿಂದ ಮಂಡ್ಯದಲ್ಲಿ ಪಕ್ಷಕ್ಕೆ ಮೋಸವಾಗುತ್ತಿದೆ. ನನ್ನ ಜೊತೆ ಮಂಡ್ಯದ ಅಂಬಿ ಸಂಪಾದಿಸಿದ ಜನರ ಪ್ರೀತಿ ಇದೆ. ನನ್ನ ಬೆಂಬಲಕ್ಕೆ ಜನರಿದ್ದಾರೆ ಎಂದರು.
ಜೆಡಿಎಸ್ ನಿಂದ ಆಹ್ವಾನ ನೀಡಿಲ್ಲ
ಸಚಿವ ಡಿ.ಸಿ ತಮ್ಮಣ್ಣ ಹೇಳಿಕೆಯ ಬಗ್ಗೆ ಉತ್ತರಿಸಿದ ಸುಮಲತಾ ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಯಾಗುವಂತೆ ನನಗೆ ಆಹ್ವಾನ ನೀಡಿಲ್ಲ. ಮಂಡ್ಯ ಲೋಕಸಭಾ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸುಮಲತಾ ಬೇಸರ ವ್ಯಕ್ತಪಡಿಸಿದರು.
ಸುಮಲತಾ ಗೆಲ್ಲುವ ಆಸೆಯನ್ನು ಹೊಸಕಿ ಹಾಕಿದರೇ ಡಿಕೆ ಶಿವಕುಮಾರ್?
ಇತರೆ ಪಕ್ಷಗಳಿಗೆ ಅನುಕೂಲ
ಮಂಡ್ಯದಲ್ಲಿ ನಡೆಯುವ ಬಹುತೇಕ ಎಲ್ಲಾ ಚುನಾವಣೆಗಳ ಮತಗಳಿಕೆಯ ಶೇಕಡ ಪ್ರಮಾಣದಲ್ಲಿ ನಮ್ಮ ಪಕ್ಷವೇ ಮುಂದೆ ಇದೆ ಎಂದ ಸುಮಲತಾ, ನಾಯಕರ ನಿರ್ಲಕ್ಷ್ಯದಿಂದ ಇತರೆ ಪಕ್ಷಗಳು ಅನುಕೂಲ ಪಡೆಯುವಂತಾಗಿದೆ ಎಂದು ಆರೋಪಿಸಿದರು.
ನಿಖಿಲ್ ಅಭ್ಯರ್ಥಿ ಎಂದು ಘೋಷಣೆ
ನಿನ್ನೆಯಷ್ಟೇ (ಮಾ.14) ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗುರುವಾರ ಜೆಡಿಎಸ್ ನ ಬೃಹತ್ ಸಮಾವೇಶ ನಡೆದಿದ್ದು, 2019ರ ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಸಮಾರಂಭದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಮುಂತಾದವರು ಪಾಲ್ಗೊಂಡಿದ್ದಾರೆ.