ರಮ್ಯಾ-ಅಂಬರೀಶ್ ಜಗಳದಲಿ ಮಂಡ್ಯ ಕಾಂಗ್ರೆಸ್ ಮಟಾಷ್!
ಮಂಡ್ಯ, ಸೆಪ್ಟೆಂಬರ್ 4: ಸಕ್ಕರೆನಾಡು ಮಂಡ್ಯದಲ್ಲಿ ತನಗಿದ್ದ ಪ್ರಾಬಲ್ಯವನ್ನು ಸ್ವತಃ ಕಾಂಗ್ರೆಸ್ ತನ್ನ ತಪ್ಪು ನಿರ್ಧಾರಗಳಿಂದ ಕಳೆದುಕೊಳ್ಳುತ್ತಿದೆಯೇ? ವಿಧಾನಸಭೆ ಚುನಾವಣೆಯ ಫಲಿತಾಂಶ ಮತ್ತು ಲೋಕಸಭೆ ಚುನಾವಣೆಗೆ ಅದು ನಡೆಸಿರುವ ತಯಾರಿ ಈ ಅನುಮಾನ ನಿಜ ಎನ್ನುವಂತಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಶತಾಯತಾಯ ಉರುಳಿಸಿ ಮತ್ತೆ ಅಧಿಕಾರಕ್ಕೆ ಬರುವ ಕನಸಿನೊಂದಿಗೆ ಕಾಂಗ್ರೆಸ್ ವಿರೋಧ ಪಕ್ಷಗಳೊಂದಿಗೆ ಈಗಲೇ ಮೈತ್ರಿಯ ಹಸ್ತ ಚಾಚುತ್ತಿದೆ.
'ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ'
ಕರ್ನಾಟಕದಲ್ಲಿ ಈಗಾಗಲೇ ದೋಸ್ತಿ ಸರ್ಕಾರವಿದೆ. ಲೋಕಸಭೆ ಚುನಾವಣೆಗೂ ಇದೇ ಮೈತ್ರಿ ಮುಂದುವರಿಸುವ ಮಾತು ಕೇಳಿಬರುತ್ತಿವೆ. ಆದರೆ, ಅದರ ಬೆನ್ನಲ್ಲೇ ಅಪಸ್ವರಗಳೂ ಇವೆ.
ಮಂಡ್ಯದಿಂದ ದೇವೇಗೌಡರ ಸ್ಪರ್ಧೆ, ಹೊಸ ಸುದ್ದಿಯೊಂದು ಬಂತು!
ಅಧಿಕಾರದಲ್ಲಿ ಇರುವ ಅನಿವಾರ್ಯತೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಜತೆ ಕೈಜೋಡಿಸಿದೆ. ಈ ಮೈತ್ರಿ ಕಾಂಗ್ರೆಸ್ ವರ್ಚಸ್ಸನ್ನು ಮತ್ತಷ್ಟು ಕುಂದಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮುಖ್ಯವಾಗಿ ಒಂದು ಕಾಲದಲ್ಲಿ ಮಂಡ್ಯದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಕಾಂಗ್ರೆಸ್, ಈಗ ಅಲ್ಲಿ ದಿಕ್ಕೆಟ್ಟಿದೆ. ಮಂಡ್ಯದ ಸೋಲಿನ ಬಗ್ಗೆ ಕಾಂಗ್ರೆಸ್ ಅಷ್ಟೊಂದು ಗಂಭೀರವಾಗಿ ಮಂಥನ ನಡೆಸಿದಂತಿಲ್ಲ.
ಬಡವಾದ ಕಾಂಗ್ರೆಸ್
ಮಂಡ್ಯದಲ್ಲಿ ಕಾಂಗ್ರೆಸ್ ಬಹುತೇಕ ಬಡವಾಗಿದೆ. ಕಾಂಗ್ರೆಸ್ನಲ್ಲಿ ಅಲ್ಲಿ ಪ್ರಭಾವಿ ಮುಖಂಡರೇ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಇದ್ದರೂ ಎಸ್.ಎಂ. ಕೃಷ್ಣ ಮಂಡ್ಯದಲ್ಲಿ ಪ್ರಭಾವಳಿ ಹೊಂದಿದ್ದರು. ಆದರೆ, ಯುಪಿಎ ಸರ್ಕಾರದ ಸಚಿವರಾಗಿದ್ದ ಅವಧಿಯಲ್ಲಿಯೇ ಕೃಷ್ಣ ಅವರ ವರ್ಚಸ್ಸು ಸಾಕಷ್ಟು ಕುಂದಿತ್ತು. ಈಗ ಅವರು ಕಾಂಗ್ರೆಸ್ನಲ್ಲಿಯೂ ಇಲ್ಲ. ಬಿಜೆಪಿಯಲ್ಲಿಯೂ ಸಕ್ರಿಯರಾಗಿಲ್ಲ. ಅಲ್ಲದೆ, ರಾಜಕೀಯ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುಳಿವು ಕೂಡ ಸಿಕ್ಕಿದೆ.
ಇನ್ನು, ನಟ ಅಂಬರೀಷ್ ಕೂಡ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ಅವರು ಸ್ಪರ್ಧಿಸಿರಲಿಲ್ಲ.
ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು?, ನಾಲ್ವರಲ್ಲಿ ಪೈಪೋಟಿ!
ಮಂಡ್ಯದಿಂದ ವಿಮುಖರಾದ ರಮ್ಯಾ
ಕಳೆದ ಲೋಕಸಭೆ ಚುನಾವಣೆ ವೇಳೆ ರಮ್ಯಾ ಮಂಡ್ಯದ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದರು. ಚುರುಕಾಗಿ ಓಡಾಟ ನಡೆಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಪುಟ್ಟರಾಜು ವಿರುದ್ಧ ಸೋಲು ಕಂಡಿದ್ದರು. ಬಳಿಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಅವರು ಪ್ರಚಾರ, ಪಕ್ಷ ಸಂಘಟನೆಯ ಬಹಿರಂಗ ಚಟುವಟಿಕೆಗಳಲ್ಲಿ ಅಷ್ಟಾಗಿ ತೊಡಗಿಸಿಕೊಂಡಿರಲಿಲ್ಲ.
ಸಾಮಾಜಿಕ ಜಾಲತಾಣದ ಪ್ರಚಾರದ ಹೊಣೆಗಾರಿಕೆ ಹೊತ್ತುಕೊಂಡಿದ್ದ ಅವರು, ಅದರಿಂದಾಚೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ, ಮುಖಂಡರಿಗೆ ಕೂಡ ಸಿಗುತ್ತಿರಲಿಲ್ಲ ಎಂಬ ಆರೋಪವಿದೆ. ಈ ಬಾರಿಯೂ ರಮ್ಯಾ ಲೋಕಸಭೆ ಚುನಾವಣೆಯ ಪ್ರಚಾರ ಸಮಿತಿಯಲ್ಲಿದ್ದಾರೆ. ಆದರೆ, ಮಂಡ್ಯದ ಗಲ್ಲಿಗಳಲ್ಲಿ ಅವರ ಓಡಾಟವಿಲ್ಲ. ಇದರೊಂದಿಗೆ ಲೋಕಸಭೆಗೆ ಒಮ್ಮೆ ಆಯ್ಕೆಯಾಗಿದ್ದ ರಮ್ಯಾ, ಮಂಡ್ಯದಲ್ಲಿ ಸಕ್ರಿಯರಾಗಿಲ್ಲ. ಇದರಿಂದ ಕಾಂಗ್ರೆಸ್ಗೆ ಇದ್ದ ಮತ್ತೊಂದು 'ತಾರಾ ವರ್ಚಸ್ಸು' ಕೂಡ ಕಳೆದುಕೊಂಡಿದೆ.
ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲ್ಲ : ಚೆಲುವರಾಯಸ್ವಾಮಿ
ಮುಖಂಡರಲ್ಲಿಯೇ ಹೊಂದಾಣಿಕೆಯಿಲ್ಲ
ರಮ್ಯಾ ಕಾಂಗ್ರೆಸ್ನಲ್ಲಿ ಬೆಳೆಯಲು ಹೆಚ್ಚು ನೆರವಾಗಿದ್ದು ಅಂಬರೀಷ್. ಆದರೆ, ಮುಂದೆ ರಮ್ಯಾ, ಅಂಬರೀಷ್ ಅವರನ್ನೇ ಕಡೆಗಣಿಸಿದ್ದರು ಎಂದು ಅಲ್ಲಿನ ಕಾರ್ಯಕರ್ತರು ಆರೋಪಿಸಿದ್ದರು. ರಮ್ಯಾ ವಿರುದ್ಧವೇ ಅನೇಕ ಮುಖಂಡರು ಕೆಲಸ ಮಾಡಿದ್ದರು. ಇದನ್ನು ಕಾಂಗ್ರೆಸ್ನ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಸ್ವತಃ ಒಪ್ಪಿಕೊಂಡಿದ್ದರು.
ಸ್ಥಳೀಯ ಮುಖಂಡರಿಗೆ ಗೌರವ ಕೊಡುತ್ತಿರಲಿಲ್ಲ. ಕಾರ್ಯಕರ್ತರ ಕೈಗೆ ಸಿಗುತ್ತಿರಲಿಲ್ಲ. ನಮ್ಮ ಮನವಿಗಳಿಗೆ ಸ್ಪಂದಿಸುತ್ತಿರಲಿಲ್ಲ. ಒಂದು ಪತ್ರಕ್ಕಾಗಿ ಬೆಂಗಳೂರಿಗೆ ತೆರಳಿ ಅವರ ಮನೆಯೆದುರು ಕಾಯಬೇಕಾಗಿತ್ತು. ಹೀಗಾಗಿ ರಮ್ಯಾ ಅವರನ್ನು ಸೋಲಿಸುವಂತೆ ಕಾರ್ಯಕರ್ತರ ಸಭೆ ಕರೆದು ಮನವಿ ಮಾಡಿದ್ದೆ. ಅದರಿಂದ ರಮ್ಯಾ ಸೋಲು ಅನುಭವಿಸಿದ್ದರು ಎಂದು ಶಿವರಾಮೇಗೌಡ ಹೇಳಿದ್ದರು. ಈಗಲೂ ಈ ಪರಿಸ್ಥಿತಿ ಬದಲಾಗಿಲ್ಲ.
ಈಗ ಶಿವರಾಮೇಗೌಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಎಲ್ಲವೂ ಜೆಡಿಎಸ್ ಮಯ
ಮಂಡ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲೆ ಕಳೆದುಕೊಂಡಿದೆ. ಅಲ್ಲಿನ ಏಳೂ ಕ್ಷೇತ್ರಗಳು ಜೆಡಿಎಸ್ ತೆಕ್ಕೆಯಲ್ಲಿದೆ. ಲೋಕಸಭೆ ಚುನಾವಣೆಗೂ ಕಾಂಗ್ರೆಸ್ಗೆ ಮಂಡ್ಯದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ.
ಹಾಸನದಲ್ಲಿಯೂ ಕಾಂಗ್ರೆಸ್ ಸ್ಥಿತಿ ವಿಭಿನ್ನವಾಗಿಲ್ಲ. ಈ ಎರಡೂ ಜಿಲ್ಲೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗೇ ಬೆಂಬಲ ನೀಡಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ. ಹೀಗಾದರೆ ಕಾಂಗ್ರೆಸ್ ಪ್ರಭಾವ ಮತ್ತಷ್ಟು ಕ್ಷೀಣಿಸುವುದರಲ್ಲಿ ಅನುಮಾನವಿಲ್ಲ ಎಂದು ಅಲ್ಲಿನ ಸ್ಥಳೀಯ ಮುಖಂಡರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮುಖಂಡರ ಅಸಮಾಧಾನ
ಮಂಡ್ಯ ಮತ್ತು ಹಾಸನ ಲೋಕಸಭೆ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡುವುದು ಬೇಡ ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಎರಡೂ ಜಿಲ್ಲೆಗಳ ಮುಖಂಡರು ಅನೇಕ ಬಾರಿ ಸಭೆ ನಡೆಸಿದ್ದಾರೆ.
ಜೆಡಿಎಸ್ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಚೆಲುವರಾಯಸ್ವಾಮಿ, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ಬಾಲಕೃಷ್ಣ, ನರೇಂದ್ರಸ್ವಾಮಿ ಮುಂತಾದವರಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ಅಸಮಾಧಾನವಿದೆ. ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳುವುದರಿಂದ ಪಕ್ಷಕ್ಕೆ ಹೆಚ್ಚು ನಷ್ಟವಾಗಲಿದೆ ಎನ್ನುವುದು ಅವರ ಆತಂಕ. ಏಕೆಂದರೆ, ಈ ಮೈತ್ರಿ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ನ ಬಲವನ್ನು ಇನ್ನಷ್ಟು ಕುಗ್ಗಿಸಲಿದೆ. ಹೀಗಾಗಿದರೆ ಸ್ಥಳೀಯ ಮುಖಂಡರು ಮತ್ತೆ ಹಿಡಿತ ಪಡೆದುಕೊಳ್ಳುವುದು ಕಷ್ಟ.
ಜೆಡಿಎಸ್ ಅಥವಾ ಕಾಂಗ್ರೆಸ್?
ಲೋಕಸಭೆ ಚುನಾವಣೆಗೆ ಲಕ್ಷ್ಮಿ ಅಶ್ವಿನ್ ಗೌಡ ಅವರು ಜೆಡಿಎಸ್ನಿಂದ ಸ್ಪರ್ಧಿಸುವ ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವ ಎಸ್.ಡಿ. ಜಯರಾಂ ಅವರ ಮಗ ಅಶೋಕ್ ಜಯರಾಂ ಅವರ ಹೆಸರೂ ಇದೆ. ಸ್ವತಃ ದೇವೇಗೌಡ ಅವರೇ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯೂ ಹರಡಿತ್ತು.
ಆದರೆ, ಕಾಂಗ್ರೆಸ್ನಲ್ಲಿ ಈ ಪ್ರಮಾಣದ ಚಟುವಟಿಕೆಗಳು ಕಂಡುಬರುತ್ತಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚಲುವರಾಯಸ್ವಾಮಿ ಅಥವಾ ಮಾಜಿ ಸಚಿವ ರೆಹಮಾನ್ ಖಾನ್ ಅವರನ್ನು ಕಣಕ್ಕಿಳಿಸಬಹುದು ಎಂಬ ಮಾತು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿಬರುತ್ತಿದೆ.
ಬಿಜೆಪಿಯಿಂದ ಅಶೋಕ್?
ಮಂಡ್ಯದಲ್ಲಿ ಬಿಜೆಪಿ ಎಂದಿಗೂ ತನ್ನ ಛಾಪು ಮೂಡಿಸಿಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ಗಳೇ ಸಾಂಪ್ರದಾಯಿಕ ಎದುರಾಳಿಗಳು. ಈ ನಡುವೆಯೇ ಬಿಜೆಪಿ ಕೂಡ ಮಂಡ್ಯದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್. ಅಶೋಕ್, ಈ ಬಾರಿ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ.
ರಮ್ಯಾ ಸ್ಪರ್ಧಿಸುವುದು ನಿಜವೇ?
ರಮ್ಯಾ ಮಂಡ್ಯದಲ್ಲಿ ಕಾಣಿಸಿಕೊಳ್ಳದಿದ್ದರೂ ಅವರು ಈ ಬಾರಿ ಲೋಕಸಭೆ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂದು ಅವರ ತಾಯಿ ರಂಜಿತಾ ಹೇಳಿದ್ದರು.
ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ರಮ್ಯಾ ಅವರನ್ನು ಮತ್ತೆ ಸಂಸದೆಯಾಗಿ ನೋಡುವ ಬಯಕೆಯಿದೆ. ಮಂಡ್ಯದಿಂದ ಅವರು ಲೋಕಸಭೆಗೆ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾಗಿ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಸಿದ್ಧರಿಲ್ಲ ಎಂದು ರಂಜಿತಾ ಹೇಳಿದ್ದರು.