ಉಪಚುನಾವಣೆ: ಕೆ.ಆರ್.ಪೇಟೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ ಕೈ ಮುಖಂಡರು
ಮಂಡ್ಯ, ಸೆಪ್ಟೆಂಬರ್ 24: ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ತೆರವಾದ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದ್ದು, ರಾಜ್ಯದ ಮೂರು ಪಕ್ಷಗಳ ನಾಯಕರು ಮೈಕೊಡವಿಕೊಂಡು ಮೇಲೆದ್ದಿದ್ದಾರೆ. ಮತ್ತೊಮ್ಮೆ ಜಿದ್ದಾಜಿದ್ದಿನ ರಾಜಕೀಯ ಗುದ್ದಾಟಕ್ಕೆ ರಣಾಂಗಣ ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಕೆ. ಆರ್. ಪೇಟೆ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು?
ಮಂಡ್ಯ ಜೆಡಿಎಸ್ ನ ಭದ್ರಕೋಟೆ ಎಂದು ಹೇಳಿಕೊಳ್ಳುತ್ತಲೇ ಬರಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಮೂಲಕ ರಾಜಕೀಯ ಭದ್ರಕೋಟೆಯನ್ನು ಕಟ್ಟಿಕೊಂಡಿತ್ತು. ಆದರೆ ಆ ಭದ್ರಕೋಟೆಯನ್ನು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಸುಮಲತಾ ಅಂಬರೀಶ್ ಛಿದ್ರ ಮಾಡಿದ್ದರು.
ಮೂರು ಪಕ್ಷಗಳಿಂದ ಸ್ಪರ್ಧೆ ಖಚಿತ
ಈ ಲೋಕಸಭಾ ಚುನಾವಣೆ ಹೊಸ ಇತಿಹಾಸವನ್ನು ಬರೆದಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಾಗಿ ಸ್ಪರ್ಧಿಸಿತ್ತು. ಈ ಮೈತ್ರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಒಪ್ಪಿಗೆ ನೀಡಿರಲಿಲ್ಲ. ಜತೆಗೆ ಸುಮಲತಾ ಪರ ಕೆಲಸ ಮಾಡಿದ್ದರು. ಕೆಲವು ನಾಯಕರು ಪ್ರತ್ಯಕ್ಷವಾಗಿ ಅದನ್ನು ತೋರಿಸಿದ್ದರೆ ಮತ್ತೆ ಕೆಲವರು ಪರೋಕ್ಷವಾಗಿಯೇ ಕಾರ್ಯ ಚಟುವಟಿಕೆ ನಡೆಸಿ ಸುಮಲತಾ ಗೆಲುವಿಗೆ ತಮ್ಮ ಕೊಡುಗೆಯನ್ನು ನೀಡಿದ್ದರು. ಆದರೆ ಬಹಳಷ್ಟು ಮಂದಿ ಇದನ್ನು ಬಹಿರಂಗಪಡಿಸಿರಲಿಲ್ಲ.
ಇದೀಗ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾದ ನಾರಾಯಣ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕಡಿದುಕೊಂಡಿರುವ ಕಾರಣದಿಂದ ಮೂರು ಪಕ್ಷಗಳು ಪ್ರತ್ಯೇಕವಾಗಿ ಇಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.
ಜೆಡಿಎಸ್ ಭದ್ರಕೋಟೆಗೆ ಲಗ್ಗೆಯಿಡಲು ಕೈ ಸಜ್ಜು
ಈಗಾಗಲೇ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿ ಅನರ್ಹ ಶಾಸಕ ನಾರಾಯಣ ಗೌಡರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ ಜೆಡಿಎಸ್ ವರಿಷ್ಠ ದೇವೇಗೌಡರು. ಇದೆಲ್ಲದರ ನಡುವೆ ಕಾಂಗ್ರೆಸ್ನಲ್ಲಿ ಹೊಸ ಚೈತನ್ಯ ಬಂದಿದೆ. ತಾಲೂಕಿನ ಕೈ ನಾಯಕರೆಲ್ಲ ಸೇರಿ ಸಭೆ ನಡೆಸುವ ಮೂಲಕ ಜೆಡಿಎಸ್ ಭದ್ರಕೋಟೆಗೆ ಲಗ್ಗೆಯಿಡುವ ತೀರ್ಮಾನಕ್ಕೆ ಬಂದಿದ್ದು, ನಾಯಕರೆಲ್ಲ ಸೇರಿ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ.
ಪಕ್ಷದಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳು ಇದ್ದರೂ ರಾಜ್ಯ ನಾಯಕರು ಅರ್ಹರನ್ನು ಗುರುತಿಸಿ ಟಿಕೆಟ್ ನೀಡಿದರೆ ಅವರ ಪರ ಕೆಲಸ ಮಾಡಿ ಗೆಲ್ಲಿಸಲೇಬೇಕು ಎಂಬ ಹಟ ತೊಡುವ ಮೂಲಕ ಕಾಂಗ್ರೆಸ್ ಪಕ್ಷದ ಖಾತೆಯನ್ನು ತೆರೆಯಲೇಬೇಕೆಂಬ ದೃಢ ಸಂಕಲ್ಪ ಮಾಡಿದ್ದಾರೆ.
ಉಪ ಚುನಾವಣೆ; ಟಿಕೆಟ್ ಹಂಚಿಕೆಗೆ ಬಿಜೆಪಿಗೆ ಕಗ್ಗಂಟಾದ ಕ್ಷೇತ್ರಗಳು
ಕುಮಾರಸ್ವಾಮಿ ವಿರುದ್ಧ ಕೈ ಮುಖಂಡರ ವಾಗ್ದಾಳಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಅವರು ಈಡೇರಿಸಲಾಗದ ಸುಳ್ಳು ಭರವಸೆಗಳನ್ನು ನೀಡಿದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಅಂತರದ ಸೋಲುಂಟಾಯಿತು. ಕಳೆದ ಚುನಾವಣೆಯಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡುತ್ತೇವೆ, ವೃದ್ಧರಿಗೆ ಮಾಸಿಕ ಆರು ಸಾವಿರ ಪಿಂಚಣಿ ನೀಡುತ್ತೇವೆ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಎಲ್ಲ ಸಾಲವನ್ನು ಮನ್ನಾ ಮಾಡುತ್ತೇವೆ, ಅಂಗವಿಕಲರಿಗೆ ಮಾಸಿಕ ಐದು ಸಾವಿರ ವೇತನ ನೀಡುತ್ತೇವೆ. ಗರ್ಭಿಣಿಯರಿಗೆ ಮಾಸಿಕ ಆರು ಸಾವಿರ ಭತ್ಯೆ ನೀಡುತ್ತೇವೆ ಮುಂತಾದ ಸುಳ್ಳು ಆಶ್ವಾಸನೆಗಳನ್ನು ಕುಮಾರಸ್ವಾಮಿ ನೀಡಿದರು. ಅದನ್ನು ನಂಬಿ ಮತದಾರರು ಮತ ನೀಡಿದರು. ಆದರೆ ಈಗ ಜನಕ್ಕೆ ಯಾರನ್ನು ಗೆಲ್ಲಿಸಿದರೆ ಉತ್ತಮ ಆಡಳಿತ ನೀಡುತ್ತಾರೆ ಎಂಬುದು ಗೊತ್ತಾಗಿದೆ. ಹೀಗಾಗಿ ಮತ್ತೆ ಜನ ನಮ್ಮ ಕೈಹಿಡಿಯುತ್ತಾರೆ ಎಂಬ ಸಂತಸದಲ್ಲಿ ಕಾಂಗ್ರೆಸ್ನ ನಾಯಕರಿದ್ದಾರೆ.
ನಾರಾಯಣಗೌಡರ ಅಸಹಾಯಕತೆ ಕೈಗೆ ಬಂಡವಾಳ
ತಾಲೂಕಿನ ಶಾಸಕರಾಗಿದ್ದ ನಾರಾಯಣಗೌಡ ಅವರು ತಾಲೂಕಿನ ಅಭಿವೃದ್ಧಿ ಮರೆತು ತಮ್ಮ ಸ್ವಾರ್ಥ ಸಾಧನೆಗಾಗಿ ಹಣದ ವ್ಯಾಮೋಹದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಹಿನ್ನೆಡೆಯಾಗುವಂತೆ ಮಾಡಿದ್ದಾರೆ. ಕುಣಿಯಲಾರದವಳು ನೆಲಡೊಂಕು ಎಂದು ಹೇಳಿದಂತೆ ನಾರಾಯಣಗೌಡ ಅನುದಾನ ಕೊಡಲಿಲ್ಲ ಎಂಬ ನೆಪ ಹೇಳುವ ಮೂಲಕ ತಾಲೂಕಿಗೆ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಜನರ ಮುಂದೆ ಹೇಳುತ್ತಾ ಒಲವು ಗಳಿಸುವ ತಂತ್ರಕ್ಕೆ ಮುಂದಾಗಿದ್ದಾರೆ.
ಸದ್ಯ ಕೆ.ಆರ್.ಪೇಟೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿ ಹಲವು ಕಾಂಗ್ರೆಸ್ ಮುಖಂಡರಿದ್ದಾರೆ. ಇವರ ಪೈಕಿ ಯಾರಿಗೆ ರಾಜ್ಯ ನಾಯಕರು ಟಿಕೆಟ್ ನೀಡುತ್ತಾರೆ ಎಂಬುದು ಕೂಡ ಅಷ್ಟೇ ಮುಖ್ಯವಾಗಿದೆ. ಕಾರಣ ಟಿಕೆಟ್ ನೀಡಿದ ಬಳಿಕ ಈಗ ಇದ್ದ ಒಗ್ಗಟ್ಟು ಆಗಲೂ ಇರುತ್ತಾ? ಎಂಬುದು ಇಲ್ಲಿ ಪ್ರಶ್ನೆಯಾಗಿ ಉಳಿದಿದೆ. ಜತೆಗೆ ಸುಮಲತಾ ಅವರ ಗೆಲುವಿಗೆ ಕಾಂಗ್ರೆಸ್ನ ನಾಯಕರು ಸಹಕಾರ ನೀಡಿದ್ದರು ಎಂಬ ಮಾತನ್ನು ತೇಲಿ ಬಿಡುವ ಮೂಲಕ ಅವರ ಬೆಂಬಲ ಪಡೆಯುವ ತಂತ್ರವೂ ನಡೆಯುತ್ತಿದೆ.
ಹುಣಸೂರು ಉಪಚುನಾವಣೆಗೆ ಅತ್ಯಾಧುನಿಕ ಎಂ-3 ಇವಿಎಂ
ಹಲವು ಮುಖಂಡರಿಂದ ಗೆಲುವಿಗೆ ಸಲಹೆ
ಮಾಜಿ ಶಾಸಕ ಬಿ.ಪ್ರಕಾಶ್, ಕೆ.ಬಿ.ಚಂದ್ರಶೇಖರ್, ಮುಖಂಡರಾದ ಕೆ.ಯು.ಐ.ಡಿ.ಎಫ್.ಸಿ ನಿಗಮದ ಮಾಜಿ ರಾಜ್ಯಾಧ್ಯಕ್ಷ್ಷ ಎಂ.ಡಿ.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಮುಖಂಡ ಕೆ.ಸಿ.ರಾಮಚಂದ್ರೆಗೌಡ (ಅಪ್ಪಾಜಿ), ಬೂಕನಕೆರೆ ಕೆಂಚೇಗೌಡ, ಬಿ.ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ.ರಾಮಕೃಷ್ಣೇಗೌಡ, ಜಿ.ಪಂ.ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಜಿ.ಪಂ.ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್, ಜಿ.ಪಂ.ಮಾಜಿ ಸದಸ್ಯೆ ಸರ್ವಮಂಗಳಾ ವೆಂಕಟೇಶ್ ಸೇರಿದಂತೆ ಹಲವಾರು ನಾಯಕರು ಸಭೆಯಲ್ಲಿ ಹಾಜರಿದ್ದು ತಮ್ಮ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಮುಂದೇನಾಗಬಹುದು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.