ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ನೋಡಿದ್ದೀರಾ?
ಮಂಡ್ಯ, ಸೆಪ್ಟೆಂಬರ್ 19: ಹಳೇ ಮೈಸೂರು ವ್ಯಾಪ್ತಿಯಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದರೂ ಅಭಿವೃದ್ಧಿ ಕೊರತೆಯಿಂದ ಅವಿನ್ನೂ ಎಲೆಮರೆ ಕಾಯಿಯಾಗಿಯೇ ಉಳಿದಿವೆ. ಇಂತಹ ಪ್ರವಾಸಿ ತಾಣಗಳ ಪೈಕಿ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಂಗಾಪುರ, ಅಂಬಿಗರಹಳ್ಳಿ ಮತ್ತು ಪುರ ಗ್ರಾಮಗಳ ಸಮೀಪವಿರುವ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮವೂ ಒಂದು.
ಜೀವ ಬಾಯಿಗೆ ಬಂದಂಥ ಹಿಮಾಚಲ ಪ್ರದೇಶದ ಹಮ್ತಾ ಪಾಸ್ ಟ್ರೆಕಿಂಗ್ ಅನುಭವ
ಪ್ರಕೃತಿಯನ್ನು ಪ್ರೀತಿಸುವ ಮತ್ತು ಒಂದು ಸುಂದರ ತಾಣದಲ್ಲಿ ನಿತ್ಯದ ಜಂಜಾಟ ಮರೆತು ನೆಮ್ಮದಿಯಾಗಿರಬೇಕೆಂದು ಬಯಸುವ ಯಾರೇ ಆದರೂ ಇಲ್ಲಿಗೆ ಬಂದರೆ ಮೈಮರೆಯದೆ ಇರಲಾರರು. ಕೃಷ್ಣರಾಜಪೇಟೆ ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಸಂಗಮ ಕ್ಷೇತ್ರವು ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನು ಸೆಳೆಯುವ ಸುಂದರ ತಾಣ. ಆಸ್ತಿಕರಿಗೆ ಇಷ್ಟವಾಗುವ ಸಂಗಮೇಶ್ವರಸ್ವಾಮಿ ಮತ್ತು ಪಾರ್ವತಿ ದೇವಿಯ ದೇವಸ್ಥಾನವಲ್ಲದೆ ಶ್ರೀ ಮಲೈಮಹದೇಶ್ವರರ ದೇವಾಲಯವೂ ನಿರ್ಮಾಣ ಹಂತದಲ್ಲಿದೆ. ನಾಸ್ತಿಕರಿಗೆ ಮನತಣಿಸುವ ಸುಂದರ ನಿಸರ್ಗದ ಮಡಿಲೇ ಇಲ್ಲಿದೆ.
Recommended Video
ಕಣ್ಣೆದುರೇ ಸಂಗಮವಾಗುವ ನದಿಗಳು
ಕೆಆರ್ ಎಸ್ ಹಿನ್ನೀರಿಗೆ ಹೊಂದಿಕೊಂಡಿರುವುದು ಇದರ ಸೌಂದರ್ಯಕ್ಕೆ ಕಾರಣ. ಸಾಮಾನ್ಯವಾಗಿ ಬೇರೆಡೆ ಸಂಗಮ ಕ್ಷೇತ್ರಗಳಲ್ಲಿ ಮೂರು ನದಿಗಳ ಪೈಕಿ ಒಂದು ಗುಪ್ತಗಾಮಿನಿಯಾಗಿರುತ್ತದೆ. ಆದರೆ ಇಲ್ಲಿ ಹಾಗಿಲ್ಲ. ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಕಣ್ಣೆದುರೇ ಸಂಗಮವಾಗುತ್ತವೆ. ಇಂತಹ ಅದ್ಭುತವನ್ನು ಉತ್ತರ ಭಾರತದ ಅಲಹಾಬಾದ್ ನ ಪ್ರಯಾಗ ಕ್ಷೇತ್ರವನ್ನು ಹೊರತುಪಡಿಸಿದರೆ ಇಲ್ಲಿಯೇ ನೋಡಲು ಸಾಧ್ಯವಂತೆ.
ಬೋಟಿಂಗ್ ಸೌಲಭ್ಯವಿದ್ದರೆ ಇನ್ನಷ್ಟು ಅನುಕೂಲ
ಇನ್ನು ಇಲ್ಲಿಗೆ ಭೇಟಿ ನೀಡುವವರು ಒಂದು ಕಿ.ಮೀ ದೂರದಲ್ಲಿ ಕಾವೇರಿ ನದಿಯ ದಡದಲ್ಲಿ ಶ್ರೀ ಗವಿಸಿದ್ದಲಿಂಗೇಶ್ವರ ದೇವಸ್ಥಾನವನ್ನು ಮತ್ತು ಐದು ಕಿ.ಮೀ ದೂರದಲ್ಲಿ ಹೇಮಾವತಿ ದಡದಲ್ಲಿ ಭೂವರಾಹನಾಥ ಸ್ವಾಮಿಯವರ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ. ಆದರೆ ಹಿನ್ನೀರಿಗೆ ಬೋಟಿಂಗ್ ಸೌಲಭ್ಯವನ್ನು ಕಲ್ಪಿಸಿದರೆ ಕೇವಲ ಒಂದು ಕಿ.ಮೀ ಅಂತರದಲ್ಲಿಯೇ ಭೂವರಾಹನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಲು ಸಾಧ್ಯವಾಗುತ್ತದೆ. ಆದರೆ ಆ ಸೌಲಭ್ಯವನ್ನು ಇನ್ನೂ ಕಲ್ಪಿಸಿಲ್ಲ.
ತುಂಬಿದ ಮಡುವಿನಕೋಡಿ ಕೆರೆ: ಏರಿ ಒಡೆಯುವ ಆತಂಕ
ಮಲೈಮಹದೇಶ್ವರನ ಪವಾಡದ ಕಥೆ
ಇನ್ನು ಈ ಕ್ಷೇತ್ರದಲ್ಲಿ ಮಲೈಮಹದೇಶ್ವರರ ಪವಾಡ ಇರುವುದು ಕೂಡ ಗೊತ್ತಾಗುತ್ತದೆ. ಅದೇನೆಂದರೆ ಬಾಲಕರಾಗಿದ್ದ ಮಹದೇಶ್ವರರು ಇಲ್ಲಿಗೆ ಬಂದಿದ್ದರಂತೆ ಆಗ ಪವಾಡವನ್ನು ನಡೆಸಿದ್ದರಂತೆ. ಅದೇನೆಂದರೆ? ಕಪ್ಪಡಿ ಕ್ಷೇತ್ರಕ್ಕೆ ಹೋಗುವ ಸಲುವಾಗಿ ಸಂಗಮಕ್ಷೇತ್ರಕ್ಕೆ ಬಂದ ಅವರು ನದಿ ದಾಟಲು ತಮ್ಮ ಕಾವಿಯ ವಸ್ತ್ರವನ್ನೇ ನೀರಿನ ಮೇಲೆ ಹಾಸಿಕೊಂಡು ತೆಪ್ಪವನ್ನು ಮಾಡಿಕೊಂಡು ದಾಟಿ ಹೋದರು ಎಂದು ಹೇಳಲಾಗುತ್ತಿದೆ.
ಮಲೈಮಹದೇಶ್ವರರು ಪವಾಡ ಮಾಡಿದ್ದರಿಂದ ಮೂರೂ ನದಿಗಳು ಒಂದಾಗುವ ಸ್ಥಳದಲ್ಲಿ ಮಹದೇಶ್ವರರ ದೇವಸ್ಥಾನದ ನಿರ್ಮಾಣ ಮಾಡಲಾಗುತ್ತಿದೆ. ಸದ್ಯಕ್ಕೆ ತಾತ್ಕಾಲಿಕ ದೇವಾಲಯದಲ್ಲಿ ಹುಲಿವಾಹನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ.
ಐದು ವರ್ಷಗಳ ಹಿಂದೆ ನಡೆದ ಕುಂಭಮೇಳ
ಈ ಕ್ಷೇತ್ರದ ಮಹಿಮೆಯನ್ನು ಅರಿತು ಕಳೆದ ಐದು ವರ್ಷಗಳ ಹಿಂದೆ ಇಲ್ಲಿ ಕುಂಭಮೇಳವನ್ನು ನಡೆಸಲಾಗಿತ್ತು. ಆ ನಂತರ ಒಂದಷ್ಟು ಅಭಿವೃದ್ಧಿ ಕೆಲಸಗಳು ನಡೆದವಾದರೂ ನಂತರ ಬಂದ ಸರ್ಕಾರಗಳು ಈ ಕ್ಷೇತ್ರವನ್ನು ಮರೆತುಬಿಟ್ಟಿವೆ. ಹೀಗಾಗಿ ಅಭಿವೃದ್ಧಿ ವಂಚಿತವಾಗಿದ್ದು ಸರ್ಕಾರಗಳು ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದೇ ಆದರೆ ಭಕ್ತರು ಸೇರಿದಂತೆ ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಆದರೆ ಆಡಳಿತರೂಢರ ನಿರ್ಲಕ್ಷ್ಯದಿಂದಾಗಿ ಸದ್ಯಕ್ಕೆ ಎಲೆಮರೆಯ ಕಾಯಿಯಾಗಿಯೇ ಉಳಿದಿದೆ. ಇಲ್ಲಿನ ಮಹತ್ವ ಅರಿತವರು ಮಾತ್ರ ಇಲ್ಲಿಗೆ ಭೇಟಿ ನೀಡಿ ತೆರಳುತ್ತಾರೆ. ಹೀಗಾಗಿ ವರ್ಷದ ಎಲ್ಲ ದಿನಗಳಲ್ಲಿಯೂ ಜನಜಂಗುಳಿ ಇಲ್ಲದೆ ಪ್ರಶಾಂತವಾಗಿರುತ್ತದೆ.
ಸದಾ ಪಟ್ಟಣದ ಗೌಜು ಗದ್ದಲದಲ್ಲಿ ದಿನ ಕಳೆಯುವವರು ತಮ್ಮ ರಜಾ ದಿನವನ್ನು ಕಳೆಯಲು ಇಲ್ಲಿಗೆ ಬಂದಿದ್ದೇ ಆದರೆ ಮನದ ದುಗುಡಗಳನ್ನೆಲ್ಲ ಬದಿಗೊತ್ತಿ ನೆಮ್ಮದಿಯಿಂದ ಹಿಂತಿರುಗಲು ಸಾಧ್ಯವಾಗುತ್ತದೆ.