ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ,ನಿಂದನೆ : ಶಾಸಕ ಸುರೇಶ್ ಗೌಡ ವಿರುದ್ಧ ದೂರು
ಮಂಡ್ಯ, ಆಗಸ್ಟ್ 6: ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ಪರಿಭಾವಿತ ಅರಣ್ಯ ಪ್ರದೇಶದ ಸಂರಕ್ಷಣೆಗೆ ಮುಂದಾದ ಅರಣ್ಯಾಧಿಕಾರಿಗಳನ್ನು ಶಾಸಕ ಕೆ.ಸುರೇಶ್ಗೌಡ ಕೀಳುಮಟ್ಟದ ಪದಗಳನ್ನು ಬಳಸಿ ನಿಂದಿಸಿರುವುದು, ಗುಂಡು ಹೊಡೆಯುವುದಾಗಿ, ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶಾಸಕನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸುರೇಶ್ಗೌಡ ಸೇರಿದಂತೆ 10 ಮಂದಿ ಆರೋಪಿಗಳ ವಿರುದ್ಧ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಸತೀಶ್ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.
2016ರ ಮೇ 3ರಂದು ಜಿಲ್ಲಾ ಮಟ್ಟದ ಸಂಚಾಲನಾ ಸಮಿತಿಯಲ್ಲಿ ಹಾಲತಿ ಸರ್ವೆನಂ. 135ರಲ್ಲಿ 374.32 ಎಕರೆ ಪ್ರದೇಶದಲ್ಲಿ ಇಲಾಖೆ ಅನುಭವದಲ್ಲಿದ್ದು, ಈ ಬಗ್ಗೆ ಭೂ ದಾಖಲೆಗಳಲ್ಲಿ ನಮೂದಿಸಿ ಸುಪ್ರೀಂ ಕೋರ್ಟ್ಗೆ ಸರಕಾರದ ವತಿಯಿಂದ ಅಫಿಡೆವಿಟ್ ಸಲ್ಲಿಸಲಾಗಿದೆ. ಇದರನ್ವಯ ಸರ್ವೋಚ್ಛ ನ್ಯಾಯಾಲಯ ಅರಣ್ಯ ಪ್ರದೇಶಗಳನ್ನು ಸಂರಕ್ಷಿಸುವ ಸಲುವಾಗಿ ಪರಿಭಾವಿತ ಅರಣ್ಯ ಪ್ರದೇಶ (ಡೀಮ್ಡ್ ಫಾರೆಸ್ಟ್) ಎಂದು ಅಧಿಸೂಚನೆ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ 1985ನೇ ಸಾಲಿನ ಅರಣ್ಯ ಇಲಾಖೆ ಯೋಜನೆಯಡಿ 50 ಹೆಕ್ಟೇರ್ ಮತ್ತು 2009ನೇ ಸಾಲಿನ 50 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಮಾಡಲು ಅರಣ್ಯ ಇಲಾಖೆ ಅಪಾರ ಹಣ ವ್ಯಯಿಸಿ, ಕಾಲ ಕಾಲಕ್ಕೆ ನೆಡುತೋಪು ನಿರ್ವಹಣೆ ಮಾಡುತ್ತಿದೆ. ಈ ಪ್ರದೇಶ ಅರಣ್ಯ ಇಲಾಖೆ ಸ್ವಾಧೀನಾನುಭವದಲ್ಲೇ ಇದೆ.
ಜೂನ್ 28ರಂದು ನಾಗಮಂಗಲ ತಹಸೀಲ್ದಾರ್, ವಲಯ ಅರಣ್ಯಾಧಿಕಾರಿ, ಸಿಬ್ಬಂದಿಗಳು, ಆರಕ್ಷಕ ಉಪ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಒತ್ತುವರಿ ತೆರವುಗೊಳಿಸಿ ಪರಿಭಾವಿತ ಅರಣ್ಯ ಪ್ರದೇಶವನ್ನು ಸಂರಕ್ಷಿಸುವಂತೆ ವೌಖಿಕವಾಗಿ ತಹಸೀಲ್ದಾರ್ ಸೂಚನೆ ನೀಡಿದ್ದರು. ಅವರ ಆದೇಶದ ಮೇರೆಗೆ ಅರಣ್ಯಾಧಿಕಾರಿಗಳು ಆಗಸ್ಟ್ 4ರಂದು ಅರಣ್ಯ ಪ್ರದೇಶಕ್ಕೆ ಸಿಬ್ಬಂದಿಯೊಡನೆ ಧಾವಿಸಿ ಒತ್ತುವರಿ ತೆರವುಗೊಳಿಸಿ ಕಂದಕ ನಿರ್ಮಿಸುತ್ತಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಸುರೇಶ್ ಗೌಡ ಹಾಗೂ ಇತರೆ ಆರೋಪಿಗಳಾದ ಹಾಲತಿ ಗ್ರಾಮದ ಪ್ರವೀಣ್, ರಾಜು, ಹರ್ಷ, ವೆಂಕಟಪ್ಪ, ತೀರ್ಥಪ್ರಸಾದ್, ರುದ್ರೇಶ್, ಲಕ್ಷ್ಮಣ, ಗಿರೀಶ ಎಚ್.ಸಿ., ಪಾಪಣ್ಣ ಅವರುಗಳು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸ್ ಪೇದೆಗಳ ಎದುರೇ ನಮ್ಮನ್ನು ಮತ್ತು ನಮ್ಮ ಸಿಬ್ಬಂದಿ ಹಾಗೂ ಮೇಲಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರ ಮೇರೆಗೆ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಾಸಕರು ಮತ್ತು ಹಾಲ್ತಿ ಗ್ರಾಮದ 9 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.