ಮಂಡ್ಯದಲ್ಲಿ ಮೈತ್ರಿ ನಡುವೆ ತಾರಕಕ್ಕೇರಿದ ಕಚ್ಚಾಟ
ಮಂಡ್ಯ, ಜುಲೈ 8: ರಾಜ್ಯದಲ್ಲಿ ದೋಸ್ತಿ ಸರ್ಕಾರ ಅತಂತ್ರ ಸ್ಥಿತಿಗೆ ತಲುಪಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಸರ್ಕಾರವನ್ನು ಉಳಿಸಿಕೊಳ್ಳಲು ಹತ್ತು ಹಲವು ತಂತ್ರಗಳನ್ನು ಮಾಡುತ್ತಿರುವಾಗಲೇ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿರುಕು ಕಾಣಿಸಿಕೊಂಡಿದೆ. ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ.
ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳನ್ನು ಕಡೆಗಣಿಸಿ, ಶಂಕುಸ್ಥಾಪನೆ ನೆರವೇರಿಸಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪುನರ್ ಶಂಕುಸ್ಥಾಪನೆಗೊಳಿಸಲು ಮುಂದಾಗಿದ್ದನ್ನು ಪ್ರಶ್ನಿಸಿದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಮುಖಂಡರ ಮೇಲೆ ಅಶ್ಲೀಲ ಪದಬಳಕೆ ಪ್ರಯೋಗಿಸಿ, ಬೆದರಿಕೆ ಹಾಕಿರುವ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಅವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಮಳವಳ್ಳಿ ತಾಲ್ಲೂಕು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ಕರೆದು ಆಗ್ರಹಿಸುವ ಮಟ್ಟಕ್ಕೆ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ.
ಮೈತ್ರಿ ಸರ್ಕಾರದ್ದು ಈಗ ಯುದ್ಧ ಕಾಲ ಶಸ್ತ್ರಾಭ್ಯಾಸ
ಈ ಕುರಿತು ಮಾತನಾಡಿರುವ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪುಟ್ಟರಾಮು, ಪಾಲಿಟೆಕ್ನಿಕ್ ಕಾಲೇಜಿನ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ಜಿಪಂ ಹಾಗೂ ತಾಪಂ ಜನಪ್ರತಿನಿಧಿಗಳನ್ನು ಆಹ್ವಾನಿಸದೆ, ಶಿಷ್ಟಾಚಾರ ಪಾಲನೆ ಮಾಡದೆ, ಸರ್ವಾಧಿಕಾರಿ ಧೋರಣೆ ತೋರಿದ ಶಾಸಕರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದರಿಂದ ಸಿಡಿದೆದ್ದ ಶಾಸಕರು, ಆಶ್ಲೀಲ ಪದ ಬಳಕೆ ಮಾಡಿರುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಶ್ಲೀಲ ಪದ ಬಳಕೆ ಹಾಗೂ ತೆಂಗಿನ ಕಾಯಿಯಿಂದ ಹಲ್ಲೆ ಮಾಡಲು ಮುಂದಾಗಿದ್ದ ಶಾಸಕರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಯಾವತ್ತಿಗೂ ಒಂದಾಗುವುದಿಲ್ಲ ಎಂಬುದನ್ನು ಸೂಚಿಸಿದೆ.
ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರು ಗೂಂಡಾಗಳೆಂದು ಜರಿದಿರುವ ಶಾಸಕ ಅನ್ನದಾನಿ ಅವರಿಗೆ ಮೈತ್ರಿ ಧರ್ಮ ಪಾಲನೆ ಮಾಡುವ ವ್ಯವಧಾನವಿಲ್ಲ. ಜವಾಬ್ದಾರಿ ಹೊತ್ತ ಶಾಸಕರು, ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವುದನ್ನು ಕಲಿಯಬೇಕು. ನಾವು ಕಾನೂನು ಉಲ್ಲಂಘಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇಂತಹ ನಡೆಯಿಂದ ರಾಜ್ಯದಲ್ಲಿ ಮೈತ್ರಿ ರಾಜಕಾರಣದಲ್ಲಿ ಬಿರುಕು ಉಂಟಾಗಿದೆ ಎಂದು ಟೀಕಿಸಿದ್ದಾರೆ.
ಶಾಸಕ ಅನ್ನದಾನಿಯವರಿಗೆ ಅಧಿಕಾರದ ಮದ ಹಾಗೂ ಉದ್ದಟತನ ಮೇಳೈಸಿದ್ದು, ಮಾಜಿ ಶಾಸಕ ನರೇಂದ್ರಸ್ವಾಮಿ ಅವಧಿಯಲ್ಲಿ ಮಂಜೂರಾಗಿದ್ದ 30 ಸಾವಿರ ಎಕರೆ ಪ್ರದೇಶದ ಹನಿ ನೀರಾವರಿ ಯೋಜನೆ, ಹಲಗೂರು ವ್ಯಾಪ್ತಿಯ ಕೆರೆ ತುಂಬಿಸುವ ಯೋಜನೆಗಳು ಕುಂಠಿತವಾಗಿದೆ. ಅವುಗಳನ್ನು ಪೂರ್ಣಗೊಳಿಸಲು ಮುಂದಾಗಲಿ ಎಂದು ಆಗ್ರಹಿಸಿದರು.
ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ Live Updates
ತಿಟ್ಟಮಾರನಹಳ್ಳಿ ಏತ ನೀರಾವರಿ, ಹುಚ್ಚೇಗೌಡನದೊಡ್ಡಿ ಮತ್ತು ಬ್ಯಾಡರಹಳ್ಳಿ ಏತ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಲಿ. ಅದನ್ನು ಬಿಟ್ಟು ದಬ್ಬಾಳಿಕೆ ರಾಜಕಾರಣ ಮಾಡುವುದನ್ನು ತಾಲ್ಲೂಕಿನ ಜನತೆ ಸಹಿಸುವುದಿಲ್ಲ ಎಂಬುದನ್ನು ಶಾಸಕರು ಅರ್ಥೈಸಿಕೊಳ್ಳಬೇಕೆಂದರು.
ಇನ್ನು ತಾಪಂ ಅಧ್ಯಕ್ಷ ನಾಗೇಶ್ ಮಾತನಾಡಿ, ಸಣ್ಣಪುಟ್ಟ ಕಾಮಗಾರಿಗಳ ಶಂಕುಸ್ಥಾಪನೆಗೆ ಆಹ್ವಾನ ಪತ್ರಿಕೆ ಮುದ್ರಿಸಿ, ಹಂಚಿಸುವ ಶಾಸಕರು 5.5 ಕೋಟಿ ರೂ. ಕಾಮಗಾರಿಯ ಶಂಕುಸ್ಥಾಪನೆಯನ್ನು ಯಾವುದೇ ಜನಪ್ರತಿನಿಧಿಯ ಗಮನಕ್ಕೆ ತಾರದೆ ಚಾಲನೆ ನೀಡಲು ಮುಂದಾಗಿರುವುದು ಸರಿಯಲ್ಲ. ಈ ಹಿಂದೆ ಅಂಬೇಡ್ಕರ್ ಭವನ ಹಾಗೂ ಸಾರ್ವಜನಿಕ ಶೌಚಾಲಯಗಳಲ್ಲಿ ತಮ್ಮ ನಾಮಫಲಕ ಅಳವಡಿಕೆ ಮಾಡಿರುವುದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ತಾಲ್ಲೂಕಿನಲ್ಲಿ ಆಡಳಿತ ಕುಸಿತವಾಗಿದ್ದು, ಇದನ್ನು ಸರಿಪಡಿಸಲು ಶಾಸಕರು ಮುಂದಾಗಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯವರೋ ಬೇರೆಯವರೋ ಏನು ಮಾಡ್ತಾರೆ ನನಗೆ ಸಂಬಂಧಿಸಿಲ್ಲ: ಎಚ್ ಡಿಕೆ
ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಸಮನ್ವಯತೆ ಇಲ್ಲ ಎಂಬುದು ಹಿಂದೆಯೇ ಗೊತ್ತಾಗಿದೆ. ಅಷ್ಟೇ ಅಲ್ಲ ಮೈತ್ರಿ ನಾಯಕರು ಜಿಲ್ಲೆಯ ಮಟ್ಟಿಗೆ ಒಂದಾಗುವುದಿಲ್ಲ ಎಂಬುದು ಸಾಬೀತಾಗಿದೆ.