ಸಿಎಂ ಇಂದ ಕೊನೆಗೂ ಅಭಿಮಾನಿಗೆ ಸಿಕ್ಕಿತು ಚಪ್ಪಲಿ ತೊಡುವ ಭಾಗ್ಯ
ಮಂಡ್ಯ, ಜುಲೈ 27: ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಶಪಥ ಮಾಡಿದ್ದ ಮಂಡ್ಯ ಅಭಿಮಾನಿಗೆ ಕೊನೆಗೂ ಚಪ್ಪಲಿ ತೊಡುವ ಭಾಗ್ಯ ಸಿಕ್ಕಿದೆ. ಆ ಚಪ್ಪಲಿಯನ್ನು ಸ್ವತಃ ಯಡಿಯೂರಪ್ಪನವರೇ ಕೊಡಿಸುವುದಾಗಿ ಭರವಸೆ ನೀಡಿರುವುದು ಆ ಅಭಿಮಾನಿಗೆ ಡಬ್ಬಲ್ ಖುಷಿ ನೀಡಿದೆ.
ನೂತನ ಸಿಎಂಗೆ ಶುಭಾಶಯ ಕೋರಿದ ಜನಾರ್ದನ ರೆಡ್ಡಿ
ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯ ಶಿವಕುಮಾರ್ ಆರಾಧ್ಯರವರೇ ಈ ಶಪಥ ಮಾಡಿದ್ದ ಅಭಿಮಾನಿ. ಕಳೆದ ವರ್ಷ ಸಿಎಂ ಸ್ಥಾನದಿಂದ ಯಡಿಯೂಪ್ಪನವರು ಕೆಳಗಿಳಿದಾಗ, ಮತ್ತೆ ಅವರು ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಶಪಥ ಮಾಡಿದ್ದ ಶಿವಕುಮಾರ್ ಕಳೆದ 14 ತಿಂಗಳುಗಳಿಂದ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ತಿರುಗಾಡುತ್ತಿದ್ದರು.
ಇಂದು ಬಿಎಸ್ವೈ ಹುಟ್ಟೂರು ಬೂಕನಕೆರೆಗೆ ಆಗಮಿಸಿದ ವೇಳೆ ಅಭಿಮಾನಿ ಶಿವಕುಮಾರ್ ಅಭಿನಂದಿಸಲು ಬಂದಿದ್ದರು. ಈ ಸಂದರ್ಭ, ಈ ವಾರದೊಳಗೆ ನಾನೇ ನಿನಗೆ ಹೊಸ ಚಪ್ಪಲಿ ಕೊಡಿಸುತ್ತೇನೆ" ಎಂದು ಯಡಿಯೂರಪ್ಪನವರೇ ಭರವಸೆ ಕೊಟ್ಟಿರುವುದು ಶಿವಕುಮಾರ್ ಗೆ ಮತ್ತಷ್ಟು ಖುಷಿಯಾಗಿದೆ.