ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿಮ್ಮಕ್ಕ, ಸಿದ್ದಲಿಂಗಯ್ಯ, ಹಂಸಲೇಖಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ

By ಮಂಡ್ಯ ಪ್ರತಿನಿಧಿ
|
Google Oneindia Kannada News

ನಾಗಮಂಗಲ, ಸೆಪ್ಟೆಂಬರ್ 25: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕ ರಾಜ್ಯದ ಮೇಲಿನ ದೌರ್ಜನ್ಯವಾಗಿದೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಆದಿಚುಂಚನಗಿರಿಯಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಚುಂಚಶ್ರೀ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿಗಳಿಂದ ಇಂತಹ ತೀರ್ಪನ್ನು ನಾವು ಊಹಿಸಿರಲಿಲ್ಲ. ಇದರಿಂದ ನಾಡಿನ ರೈತರಿಗೆ ಅನ್ಯಾಯವಾಗಿದೆ ಎಂದರು.[ಮಂಡ್ಯ ಸಂಸದ ಪುಟ್ಟರಾಜು ರಾಜೀನಾಮೆ ನಿರ್ಧಾರ ವಾಪಸ್]

ರೈತರ ರಕ್ಷಣೆಗೆ ಮುಂದಾಗಿರುವ ನಿರ್ಮಲಾನಂದನಾಥ ಸ್ವಾಮೀಜಿ ಕಾವೇರಿ ಚಳವಳಿ ಸಾರಥ್ಯ ವಹಿಸಿ, ನಾಡಿನ ಹಲವಾರು ಮಠಾಧೀಶರನ್ನು ಕರೆತಂದು ಚಳವಳಿಗೆ ಹೊಸ ಶಕ್ತಿ ತುಂಬಿದರು ಎಂದು ಹೇಳಿದರು.

'Chuncha sri' awarded to Hamsalekha, Siddalingaiah and others

ಸಾಹಿತಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಕಾವೇರಿ ಹೋರಾಟದ ನೇತೃತ್ವ ವಹಿಸಿ ಧೈರ್ಯ ತುಂಬಿದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಕಾರ್ಯವೈಖರಿ ಇತರರಿಗೆ ಮಾರ್ಗದರ್ಶನ ಎಂದರೆ, ಹಂಸಲೇಖ ಮಾತನಾಡಿ, ಕಲಾವಿದರು ಹಾಡೊಂದನ್ನು ಕಟ್ಟಬಲ್ಲರು, ಅಂತೆಯೇ ನಮ್ಮ ಸಮಾಜದ ಗುರುಗಳು ನಾಡೊಂದನ್ನು ಕಟ್ಟಬಲ್ಲರು. ಅದಕ್ಕೆ ಬಾಲಗಂಗಾಧರ ಶ್ರೀಗಳೇ ನಿದರ್ಶನ ಎಂದು ಹೇಳಿದರು.

ಎಲ್ಲ ಕಲೆಗಳಿಗೆ ಮಾತೃ ಕಲೆಯಾಗಿರುವ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಇಚ್ಛೆಯಿಂದ ಪ್ರತೀ ವರ್ಷ ರಾಜ್ಯಮಟ್ಟದ ಜಾನಪದ ಕಲಾಮೇಳ ಆಯೋಜಿಸಿ, ಜನಪದರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಶ್ರೀಮಠದ ಕಾರ್ಯ ಅನನ್ಯ ಎಂದು
ಶ್ಲಾಘಿಸಿದರು.['ಅಂಬಿಗೆ ನೀಡಿದ ದುಡ್ಡನ್ನು ಬಡ್ಡಿ ಸಮೇತ ಕಿತ್ತುಕೊಳ್ಳಿ!']

'Chuncha sri' awarded to Hamsalekha, Siddalingaiah and others

ನಾನು ಯಾವುದೇ ಪ್ರಶಸ್ತಿಗೆ ಆಸೆ ಪಟ್ಟವನಲ್ಲ. ಆದರೆ, ನಾಗೀರೆಡ್ಡಿ, ರಾಜಕುಮಾರ್ ಪ್ರಶಸ್ತಿ ಮತ್ತು ಚುಂಚಶ್ರೀ ಪ್ರಶಸ್ತಿಯನ್ನು ಬಯಸಿದ್ದೆ. ನನ್ನ ಕನಸು ಈಗ ನನಸಾಗಿದೆ ಎಂದು ಭಾವುಕರಾದರು.

ಅಂಬರೀಶ್ ಗೈರು: ಚುಂಚಶ್ರೀ ಪ್ರಶಸ್ತಿಗೆ ಕಲಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಸಚಿವ ಗೈರಾಗಿದ್ದದ್ದು ಚರ್ಚೆಗೆ ಗ್ರಾಸವಾಯಿತು. ಕಾವೇರಿ ಚಳವಳಿಯಲ್ಲಿ ಭಾಗವಹಿಸದ ಅಂಬರೀಶ್ ಅವರಿಗೆ ಶ್ರೀಮಠ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಬಾರದು, ಒಂದುವೇಳೆ ಮಾಡಿದರೆ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಶುಕ್ರವಾರ ಮಂಡ್ಯದಲ್ಲಿ ಕಾವೇರಿ ಹೋರಾಟಗಾರರು ಬೆದರಿಕೆಯೊಡ್ಡಿದ್ದರು.[ಮಂಡ್ಯದಲ್ಲಿ ಕಾವೇರಿ ಜಲಸಂಗ್ರಾಮ ತಾತ್ಕಾಲಿಕ ಸ್ಥಗಿತ]

'Chuncha sri' awarded to Hamsalekha, Siddalingaiah and others

ಸಮಾರಂಭದುದ್ದಕ್ಕೂ ಸ್ವಾಮೀಜಿ ಸಹಿತ ಯಾರೊಬ್ಬರೂ ಅಂಬರೀಶ್ ಹೆಸರನ್ನು ಹೇಳದೇ ಇದ್ದದ್ದು ಹಾಗೂ ಸಮಾರಂಭಕ್ಕೆ ಬಾರದಿರುವ ಕಾರಣವೇನು ಎಂಬುದನ್ನು ಪ್ರಸ್ತಾಪಿಸದೇ ಇದ್ದುದ್ದು ಕುತೂಹಲ ಕೆರಳಿಸಿತ್ತು.

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜನಪದ ಸಾಹಿತ್ಯ ಜನಸಾಮಾನ್ಯರಲ್ಲಿ ಅಡಕವಾಗಿದೆ. ಆಧುನಿಕ ಕಾಲದ ಆವಿಷ್ಕಾರದ ಸುಳಿಗೆ ಸಿಲುಕಿ ಇಂದಿನ ಜ್ಞಾನ ಶಕ್ತಿ ನಶಿಸಲು ಮುಂದಾದಾಗ ಜಗತ್ತಿನಲ್ಲಿ ಉಳಿಯುವುದೇ ಜನಪದ ಕಲೆ ಮತ್ತು ಸಂಸ್ಕೃತಿ ಎಂದು ಅಭಿಪ್ರಾಯಪಟ್ಟರು.[ಅಂಬಿಗೆ ಚುಂಚಶ್ರೀ ಪ್ರಶಸ್ತಿ ನೀಡಿದರೆ ಮಠಕ್ಕೆ ಮುತ್ತಿಗೆ ಹಾಕ್ತೀವಿ]

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಲುಮರದ ತಿಮ್ಮಕ್ಕ, ಸಾಹಿತಿ ಸಿದ್ದಲಿಂಗಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ಸಮಾಜ ಸೇವಕ ಸುಧಾಕರ ರೆಡ್ಡಿ ಅವರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.

'Chuncha sri' awarded to Hamsalekha, Siddalingaiah and others

ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಉಮಾಶಂಕರ್, ಆದಿಚುಂಚನಗಿರಿ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ ಉಪಸ್ಥಿತರಿದ್ದರು.

ವೈಭವದ ಜಾನಪದ ಕಲಾಮೇಳ
ಡಾ.ಬಾಲಗಂಗಾಧರನಾಥ ಸ್ವಾಮೀಜಿ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಜಾನಪದ ಕಲಾಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಾಡಿನಾದ್ಯಾಂತ ಆಗಮಿಸಿರುವ ನೂರಾರು ಪ್ರಾಕಾರಗಳ ಸಾವಿರಾರು ಜನಪದರು ಶ್ರೀಮಠದಲ್ಲಿ ನಡೆಯುತ್ತಿರುವ ಜಾನಪದ ಕಲಾಮೇಳಕ್ಕೆ ಶನಿವಾರ ಸಾಕ್ಷಿಯಾದರು.[ಕಾವೇರಿ ಕಿಚ್ಚು: ಮಂಡ್ಯದಲ್ಲಿ ಹೋರಾಟಕ್ಕೆ ಸಾಹಿತಿಗಳು, ಕಲಾವಿದರ ಸಾಥ್]

ಕಂಸಾಳೆ, ಹೆಜ್ಜೆ ಕುಣಿತ, ಕುಂಭ ಕಹಳೆ ಕುಣಿತ, ಮರಗಾಲು ಕುಣಿತ, ವಿವಿಧ ರೀತಿಯ ತಮಟೆ ವಾದನ, ಪಟಕುಣಿತ, ಸೋಮನ ಕುಣಿತ, ತಾಳಕುಣಿತ, ವಿವಿಧ ಶೈಲಿ ಡೊಳ್ಳು ಕುಣಿತ, ಸೋಬಾನೆ ಪದ, ರಾಗಿ ಬೀಸೋ ಪದ, ಕೋಲಾಟ, ಗೀಗೀ ಪದ, ವೀರಗಾಸೆ, ನಾಗಸ್ವರ, ಹರಿಕಥೆ, ಕೋಲಾಟ, ಭಜನೆ ಇತರೆ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ.

ಮೆರವಣಿಗೆ: ಹಂಸಲೇಖ, ಸಾಹಿತಿ ಸಿದ್ದಲಿಂಗಯ್ಯ, ಸಮಾಜ ಸೇವಕ ಸುಧಾಕರರೆಡ್ಡಿ, ಸಾಲುಮರದ ತಿಮ್ಮಕ್ಕ ಅವರನ್ನು ಯಂತ್ರ ಚಾಲಿತ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.

English summary
Chuncha Sri awarded to Hamsalekha, Dr. Siddalingaiah, Salu marada Thimakka, Sudhakara reddy in Adichunchangiri mutt, Nagamangal taluk, Mandya district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X