"ಚಿಕ್ಕತಿರುಪತಿ"ಯ ಗಿಡದ ಜಾತ್ರೆಯಲ್ಲಿ ಏನೆಲ್ಲಾ ವೈಶಿಷ್ಟ್ಯ...
ಮಂಡ್ಯ, ಡಿಸೆಂಬರ್ 6: ಚಿಕ್ಕ ತಿರುಪತಿ ಎಂದೇ ಹೆಸರುವಾಸಿಯಾಗಿರುವ ತಾಲೂಕಿನ ದೇವಲಾಪುರ ಹೋಬಳಿಯ ನಾಗನಕೆರೆಯಲ್ಲಿ ನಿನ್ನೆ ಗಿಡದ ಜಾತ್ರೆ ವಿಶಿಷ್ಟವಾಗಿ ನಡೆಯಿತು. ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿ ವಿಶಿಷ್ಟ ಆಚರಣೆಗೆ ಸಾಕ್ಷಿಯಾದರು.
ಈ ಜಾತ್ರೆ ಎಲ್ಲ ಜಾತ್ರೆಯಂತಲ್ಲ. ರಥೋತ್ಸವ, ಜನಜಂಗುಳಿ, ವ್ಯಾಪಾರ ವಹಿವಾಟು ಯಾವುದೂ ಇಲ್ಲಿರುವುದಿಲ್ಲ. ಗೋವಿಂದ ನಾಮಸ್ಮರಣೆಯೇ ಈ ಜಾತ್ರೆಯ ತುಂಬಾ ತುಂಬಿರುತ್ತದೆ. ನಾಮಸ್ಮರಣೆಯೊಂದಿಗೆ ಜಾಗಟೆಯ ನಿನಾದ ಮತ್ತು ಮಾಂಸ ಮದ್ಯದ ಎಡೆ ಇಟ್ಟು ದೇವರನ್ನು ಪೂಜಿಸುವುದು ಇಲ್ಲಿನ ಸಂಪ್ರದಾಯ.
ಚಿತ್ರದುರ್ಗದಲ್ಲಿ ದೇವರಿಗೆ ಹಾವು, ಚೇಳು, ಕಪ್ಪೆ ಹರಕೆ ಸಲ್ಲಿಸುತ್ತಾರೆ ಜನ!
ತಿರುಪತಿಗೆ ಹೋಗಲು ಸಾಧ್ಯವಾಗದವರು ಈ ಕ್ಷೇತ್ರಕ್ಕೆ ಬಂದು ತಿಮ್ಮಪ್ಪನ ದರ್ಶನ ಪಡೆಯುವುದರಿಂದ ಇದಕ್ಕೆ "ಚಿಕ್ಕತಿರುಪತಿ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಗಿಡದ ಜಾತ್ರೆ ಸಮಯದಲ್ಲಿ ಇಲ್ಲಿ ಹರಕೆ ತೀರಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಇದೇ ವೇಳೆ ಇಲ್ಲಿಗೆ ಬರುವ ದಾಸಪ್ಪಂದಿರು ತಮ್ಮ ಜೋಳಿಗೆಯಲ್ಲಿ ದೇವರನ್ನು ತಂದು ನಾಗನಕೆರೆ ದಡದ ಗಿಡದ ಪ್ರದೇಶಗಳಲ್ಲಿಟ್ಟು ಪೂಜಿಸುತ್ತಾರೆ. ಈ ಸಂಪ್ರದಾಯ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಜಾತ್ರೆ ಪ್ರಾರಂಭವಾಗುವ ಹದಿನೈದು ದಿನಗಳ ಮೊದಲೇ ತಿರುಪತಿ ತಿಮ್ಮಪ್ಪನ ಒಕ್ಕಲು, ಅಂದರೆ ದಾಸಪ್ಪ ಅಥವಾ ಹರಿಭಕ್ತರು ಪ್ರಚಾರ ಮಾಡುತ್ತಾರೆ. ಜಾತ್ರೆಗೆ ವಾರವಿದ್ದಂತೆ ಆಂಜನೇಯ ಜಾಗಟೆ, ಶಂಖ, ಬಾನಸಿಯೊಂದಿಗೆ ಹೊರಡುವ ದಾಸಪ್ಪನವರು ಪ್ರತಿ ಹಳ್ಳಿಗಳಿಗೆ ತೆರಳಿ ಭಕ್ತರಿಂದ ಪೂಜೆ ಪುರಸ್ಕಾರ ಸ್ವೀಕರಿಸಿ ಜಾತ್ರೆ ದಿನವನ್ನು ಪ್ರಚಾರ ಮಾಡುತ್ತಾರೆ. ಬಳಿಕ ಕೊನೆಯ ದಿನ ಜಾತ್ರೆಗೆ ಆಗಮಿಸುತ್ತಾರೆ. ಆ ನಂತರ ಕುಣಿಗಲ್ ತಾಲೂಕು ಮಾರ್ಕೋನಹಳ್ಳಿಯಲ್ಲಿ ಹರಿಸೇವೆ ಮುಗಿಸಿ ಸಾವಿರಾರು ಭಕ್ತರಿಗೆ ಮಾಂಸದ ಊಟ ಉಣಬಡಿಸಿ ತಿರುಪತಿಗೆ ತೆರಳುತ್ತಾರೆ. ತಿರುಪತಿಯಿಂದ ಹಿಂದಿರುಗಿ ಬಂದ ನಂತರ ಭಕ್ತವೃಂದಕ್ಕೆ ಪ್ರಸಾದ ನೀಡಿ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.
ಬಂದೇಬಿಡ್ತು ವರ್ಷಕ್ಕೊಮ್ಮೆ ದರ್ಶನ ನೀಡೋ ಬಿಂಡಿಗ ದೇವಿರಮ್ಮನ ಜಾತ್ರೆ
ಗಿಡಜಾತ್ರೆ ನಡೆಯುವ ಚಿಕ್ಕ ತಿರುಪತಿಯಿರುವ ನಾಗನಕೆರೆಯು ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ. ಜಾತ್ರೆ ದಿನದಂದು ಭಕ್ತರು ಕೇಶ ಮುಂಡನ ಮಾಡಿಸಿಕೊಂಡು ಕೆರೆಯಲ್ಲಿ ಸ್ನಾನ ಮಾಡುವುದು ಪದ್ಧತಿ. ಆದರೆ ಈ ಜಾಗದಲ್ಲಿ ಮಹಿಳಾ ಭಕ್ತರಿಗೆ ಬಟ್ಟೆ ಬದಲಿಸಲು ಸಮರ್ಪಕ ಕೊಠಡಿಗಳ ವ್ಯವಸ್ಥೆ ಇಲ್ಲ, ಸರಿಯಾದ ರಸ್ತೆಯೂ ಇಲ್ಲ. ಜಾತ್ರೆ ಸಂದರ್ಭ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಪ್ರತಿವರ್ಷವೂ ಭಕ್ತರು ಆಗ್ರಹಿಸುತ್ತಾ ಬಂದಿದ್ದರೂ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಮಾಡಿಲ್ಲ.