ಕೆ.ಆರ್.ಪೇಟೆಯಲ್ಲಿ ರಾಸಾಯನಿಕ ಸಿಂಪಡಣೆ ಮಾಡುತ್ತಿದೆ 'ರೋಬೊ'
ಮಂಡ್ಯ, ಏಪ್ರಿಲ್ 04: ಕೊರೊನಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ರಾಸಾಯನಿಕ ಸಿಂಪಡಣೆ ಮಾಡುವ ಕಾರ್ಯವು ಸಮರೋಪಾದಿಯಲ್ಲಿ ಸಾಗುತ್ತಿದೆ. ಅದರಂತೆ ಕೆ.ಆರ್.ಪೇಟೆ ತಾಲೂಕಿನ ರೈತವಿಜ್ಞಾನಿ ಎಂದೇ ಹೆಸರು ಮಾಡಿರುವ ರೋಬೊ ಮಂಜೇಗೌಡ ಅವರು ರೋಬೊ ಮೂಲಕ ತಮ್ಮ ಹಳ್ಳಿಯಲ್ಲಿ ರಾಸಾಯನಿಕ ಸಿಂಪಡಣೆ ಮಾಡಿ ಗಮನ ಸೆಳೆದಿದ್ದಾರೆ.
ಈಗಾಗಲೇ ಕೆಲವು ಕಡೆಗಳಲ್ಲಿ ಪೌರ ಕಾರ್ಮಿಕರು, ಮತ್ತೊಂದು ಕಡೆ ಡ್ರೋಣ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ರೋಬೊ ಮೂಲಕ ರಾಸಾಯನಿಕ ಸಿಂಪಡಣೆ ಮಾಡುತ್ತಿರುವುದು ಸುತ್ತಮುತ್ತಲಿನ ಜನರ ಗಮನ ಸೆಳೆಯುತ್ತಿದೆ. ಅಲ್ಲದೆ, ಕೊರೊನಾ ವೈರಸ್ನ ಭೀಕರತೆಯ ಅರಿವು ಮೂಡಿಸಲಾಗುತ್ತಿದೆ.
ಮೈಸೂರು ನಗರದಲ್ಲಿ ರಾಸಾಯನಿಕ ಸಿಂಪಡಣೆ ಏಕೆ?
ಮಂಜೇಗೌಡರ ಹುಟ್ಟೂರು ಕೆ.ಆರ್.ಪೇಟೆ ತಾಲೂಕಿನ ಕೋಮನಹಳ್ಳಿ ಗ್ರಾಮ. ಇಲ್ಲಿ ರೋಬೊ ಅನ್ನು ಅವರೇ ಆವಿಷ್ಕರಿಸಿದ್ದು. ಇದೀಗ ಅದನ್ನೇ ಬಳಸಿಕೊಂಡು ತಮ್ಮ ಗ್ರಾಮಕ್ಕೆ ರಾಸಾಯನಿಕ ಔಷಧಿ ಸಿಂಪಡಿಸುವುದರೊಂದಿಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಅವರು ಗ್ರಾಮದ ರಸ್ತೆಗಳು, ಚರಂಡಿಗಳು, ಮನೆಗಳು, ಜಾನುವಾರು ಕೊಟ್ಟಿಗೆಗಳು ಮತ್ತಿತರ ಕಡೆಗಳಲ್ಲಿ ತಮ್ಮದೇ ಖರ್ಚಿನಿಂದ ಆಲ್ಕೋಹಾಲ್ ಸ್ಯಾನಿಟೈಜರ್ ಮಿಶ್ರಣವನ್ನು ಸಿಂಪಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೆ ರೋಬೊ ಸೈನಿಕನನ್ನು ಗ್ರಾಮದಲ್ಲಿ ಪ್ರದರ್ಶನ ಮಾಡಿ ಸಾರ್ವಜನಿಕರಿಗೆ ಕೊರೊನಾ ವೈರಸ್ ರೋಗದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ತಾಲೂಕು ಆಡಳಿತವು ಸ್ಯಾನಿಟೈಸರ್ ಮಿಶ್ರಣವನ್ನು ಉಚಿತವಾಗಿ ನೀಡಿದಲ್ಲಿ ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರೋಬೊ ಸೈನಿಕನ ಮೂಲಕ ಸ್ಯಾನಿಟೈಸರ್ ಮಿಶ್ರಣವನ್ನು ಉಚಿತವಾಗಿ ಸಿಂಪಡಿಸಿಕೊಡುವುದಾಗಿ ರೋಬೊ ಮಂಜೇಗೌಡ ಹೇಳುತ್ತಾರೆ. ಕೊರೊನಾ ವೈರಸ್ ಭೀತಿಯಲ್ಲಿರುವ ಈ ಸಂದರ್ಭದಲ್ಲಿ ಮಂಜೇಗೌಡ ಅವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.