ದೇವೇಗೌಡರ ಹೇಳಿಕೆಯಲ್ಲಿ ಸತ್ಯವಿದೆ ಎಂದ ಚಲುವರಾಯಸ್ವಾಮಿ
ಮಂಡ್ಯ, ಜೂನ್ 21: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಯಾವಾಗಾದ್ರೂ ಬರಬಹುದು ಎಂಬ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಹೇಳಿಕೆಯಲ್ಲಿ ಸತ್ಯವಿದೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಸಮನ್ವಯ ಕಾಯ್ದುಕೊಂಡಿದ್ದರೆ ಭಿನ್ನಾಭಿಪ್ರಾಯ ಬರುತ್ತಿರಲಿಲ್ಲ. ಈಗಲೂ ಸಮಯ ಮಿಂಚಿಲ್ಲ. ತಮ್ಮ ಮಾತು, ನಡವಳಿಕೆ ತಿದ್ದಿಕೊಂಡರೆ ಜೆಡಿಎಸ್ ಗೆ ಸರ್ಕಾರ ಮುಂದುವರಿಸುವ ಅವಕಾಶವಿದೆ ಎಂದರು.
ಚೆಲುವರಾಯಸ್ವಾಮಿ ಬಿಜೆಪಿ ಸೇರೋದು ಪಕ್ಕಾ: ಸುರೇಶ್ ಗೌಡ ಹೇಳಿಕೆ
ಮೈತ್ರಿ ಸರ್ಕಾರದಿಂದ ಜೆಡಿಎಸ್ ಗೆ ಭರ್ಜರಿ ಲಾಭ ಆಗಿದೆ. ಜನರ ಸಮಸ್ಯೆಗೆ ಸ್ಪಂದಿಸಿದರೆ ಸರ್ಕಾರ ಉಳಿಯುತ್ತೆ. ಸದ್ಯಕ್ಕೆ ಚುನಾವಣೆ ಯಾರಿಗೂ ಅವಶ್ಯಕತೆ ಇಲ್ಲ. ಚುನಾವಣೆಯನ್ನು ಯಾರೂ ಬಯಸುತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ಕಾಂಗ್ರೆಸ್-ಜೆಡಿಎಸ್ ಪಕ್ಷದ್ದು. ಹೀಗಾಗಿ 37 ಸೀಟು ಗೆದ್ದವರಿಗೆ ಕಾಂಗ್ರೆಸ್ ಅಧಿಕಾರ ಕೊಟ್ಟಿದೆ ಎಂದು ಹೇಳಿದರು. ಲೋಕಸಭೆ ಫಲಿತಾಂಶ ಮನಸ್ಸಲ್ಲಿಟ್ಟುಕೊಳ್ಳದೆ ಸಮನ್ವಯತೆಯಿಂದ ಸರ್ಕಾರ ನಡೆಸಬೇಕು ಎಂದು ಸಲಹೆ ನೀಡಿದ ಅವರು, ಒಟ್ಟಾರೆ ರಾಜ್ಯದ ರಾಜಕಾರಣ ಕವಲು ದಾರಿಯಲ್ಲಿ ಸಾಗುತ್ತಿದೆ ಎಂದರು.
ಎರಡು ಪಕ್ಷಗಳು ಇವತ್ತು ಅಭಿವೃದ್ಧಿ ಬಿಟ್ಟು ರಾಜಕೀಯ ವಿಚಾರದಲ್ಲಿ ತೊಡಗಿಸಿಕೊಂಡಿರುವುದು ದೊಡ್ಡ ದುರಂತ ಎಂದರು.