ಮಂಡ್ಯದ ಮಲ್ಲಿಗೆರೆ ಜನಕ್ಕೆ ಚಿರತೆಯದ್ದೇ ಚಿಂತೆ
ಮಂಡ್ಯ, ಫೆಬ್ರವರಿ 16 : ಪಾಂಡವಪುರ ತಾಲೂಕಿನ ಮಲ್ಲಿಗೆರೆ ಗ್ರಾಮದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು ಮನೆ ಮುಂದೆ ಕಟ್ಟಿ ಹಾಕುವ ನಾಯಿಯನ್ನೇ ಕೊಂದು ಹೊತ್ತೊಯ್ಯುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಇತ್ತೀಚೆಗಿನ ಎಲ್ಲ ಕಡೆಯೂ ಚಿರತೆಗಳ ಹಾವಳಿಯ ಸುದ್ದಿಗಳು ಕೇಳಿ ಬರುತ್ತಿದ್ದು, ಅರಣ್ಯದಿಂದ ನಾಡಿನತ್ತ ಧಾವಿಸುತ್ತಿರುವ ಚಿರತೆಗಳು ಪೊದೆಗಳು, ಕಬ್ಬಿನ ಗದ್ದೆ ಮೊದಲಾದ ಕಡೆಗಳಲ್ಲಿ ವಾಸ್ತವ್ಯ ಹೂಡಿ ನಾಯಿ, ಮೇಕೆ, ಕುರಿಗಳಲ್ಲದೆ ಜಾನುವಾರುಗಳ ಮೇಲೆಯೂ ದಾಳಿ ಮಾಡುತ್ತಿದ್ದು ರೈತರು ಭಯದಿಂದ ಬದುಕುವಂತಾಗಿದೆ.
ಈ ನಡುವೆ ಮಲ್ಲಿಗೆರೆ ಗ್ರಾಮದಲ್ಲಿ ರಾತ್ರಿಹೊತ್ತು ಕಾಣಿಸಿಕೊಂಡ ಚಿರತೆ ಗ್ರಾಮದ ಹೊರವಲಯದಲ್ಲಿರುವ ಕಾಳಾಚಾರಿ ಎಂಬುವರಿಗೆ ಸೇರಿದ ಸಾಕು ನಾಯಿಯನ್ನು ಕೊಂದು ಹಾಕಿದೆ. ಕಾಳಾಚಾರಿ ತಮ್ಮ ಮನೆಯ ಬಳಿ ನಾಯಿಯನ್ನು ಕಟ್ಟಿ ಹಾಕಿದ್ದರು. ಆದರೆ ಯಾವುದೇ ಭಯವಿಲ್ಲದ ಚಿರತೆ ಮನೆ ಬಳಿಯಿಂದಲೇ ನಾಯಿ ಮೇಲೆ ದಾಳಿ ಮಾಡಿದೆ.
ಚಿರತೆ ದಾಳಿಯಿಂದ ನಾಯಿ ಜೋರಾಗಿ ಕಿರುಚಾಟ ನಡೆಸಿದ್ದು, ಹೊರಗೆ ಬರಲು ಭಯಗೊಂಡ ಮನೆಯವರು ಕಿಟಿಕಿಯಿಂದ ನೋಡಿದ್ದು, ಈ ವೇಳೆ ನಾಯಿಯ ಮೇಲೆ ಚಿರತೆ ದಾಳಿ ನಡೆಸುತ್ತಿರುವುದು ಕಂಡು ಬಂದಿದ್ದು, ಹೀಗಾಗಿ ಜೋರಾಗಿ ಕಿರುಚಿ ಶಬ್ದ ಮಾಡಿದ್ದರಿಂದ ಚಿರತೆ ಅಲ್ಲಿಂದ ಪರಾರಿಯಾಗಿದೆ.
ಇದುವರೆಗೆ ನಾಯಿ, ಮೇಕೆಗಳಲ್ಲದೆ, ಸುಮಾರು 10ಕ್ಕೂ ಹೆಚ್ಚು ಕೋಳಿಗಳನ್ನು ತಿಂದು ಹಾಕಿರುವುದು ಕಂಡು ಬಂದಿದೆ. ಘಟನೆ ಹಿನ್ನೆಲೆಯಲ್ಲಿ ನಾಯಿಯ ಮಾಲೀಕರು ಮತ್ತು ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಚಿರತೆಯ ಸೆರೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಈ ವ್ಯಾಪ್ತಿಯ ಜನ ಮಾತ್ರ ಭಯದಿಂದಲೇ ಬದುಕುತ್ತಿದ್ದಾರೆ.
ರೈತರು ರಾತ್ರಿವೇಳೆ ಒಂಟಿಯಾಗಿ ಜಮೀನುಗಳ ಬಳಿ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಬೋನಿಟ್ಟು ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.