ಮುಖ್ಯಮಂತ್ರಿ ಬದಲಾವಣೆ ಗೊಂದಲ ಸೃಷ್ಟಿಸಿದ್ದು ಬಿಜೆಪಿ; ಡಿಕೆಶಿ
ಮಂಡ್ಯ, ಆಗಸ್ಟ್, 10: "ಮುಖ್ಯಮಂತ್ರಿ ಆಯ್ಕೆ ವಿಚಾರ ಬಿಜೆಪಿಯಲ್ಲಿ ಗೊಂದಲ ಸೃಷ್ಟಿಸಿದೆಯೇ ಹೊರತು ಕಾಂಗ್ರೆಸ್ನಲ್ಲಿ ಅಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
ಮದ್ದೂರಿನ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಪಾದಯಾತ್ರೆ ಸಂಬಂಧ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಿತೀಶ್ ಕುಮಾರ್ ಕೋಮುವಾದಿ ಬಿಜೆಪಿ ಬಿಟ್ಟದ್ದು ಒಳ್ಳೆಯ ನಿರ್ಧಾರ: ಸಿದ್ದರಾಮಯ್ಯ
ಸಭೆಯಲ್ಲಿ ಮಾತನಾಡಿದ ಅವರು, "ಬಿಜೆಪಿಯ ಹಲವು ಮುಖಂಡರು ಸಿಎಂ ಬದಲಾವಣೆ ಆಗ್ತುತಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡು ಮೂರನೇ ಸಿಎಂ ಬರುತ್ತಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಇಂತಹ ಗೊಂದಲ ನಮ್ಮಲ್ಲಿ ಇಲ್ಲ. ಈ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿಗೆ ಏನು ಹೇಳುವುದಿಲ್ಲ" ಎಂದರು.
"ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಈಗಾಗಲೇ ಸರ್ವೇ ಕಾರ್ಯಗಳನ್ನು ಮಾಡಿಸಿದ್ದೇವೆ. ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರ ಚರ್ಚೆ ಮಾಡುತ್ತಿದ್ದೇವೆ. ನಂತರ ಫತಾಂಶ ತಿಳಿಯಲಿದೆ" ಎಂದು ಹೇಳಿದರು.
"ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷ ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ದಿನೇಶ್ ಗೂಳೀಗೌಡ, ಮಧು ಮಾದೇಗೌಡ ಇಬ್ಬರನ್ನು ಗೆಲ್ಲಿಸಿಕೊಂಡಿದೆ. ಇದು ಕೇವಲ ಜಿಲ್ಲೆಯ ಗೆಲುವಲ್ಲ, ಕಾಂಗ್ರೆಸ್ ಪಕ್ಷದ ಗೆಲುವಾಗಿದೆ" ಎಂದರು.
"ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಕಂಕಣತೊಟ್ಟು ಕೆಲಸ ಮಾಡಬೇಕು. ಆ ಮೂಲಕ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು" ಎಂದು ಕರೆ ನೀಡಿದರು.
'ಜನಸಾಮಾನ್ಯರಿಗೆ ಜಿಎಸ್ಟಿ ಬರೆ'
"ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ಜನವಿರೋಧಿಯಾಗಿವೆ. ರೈತರ ಜಾನುವಾರುಗಳ ಹಾಲಿನ ದರವನ್ನು 28ರೂಪಾಯಿಗಿಂತ ಹೆಚ್ಚು ಮಾಡುತ್ತಿಲ್ಲ. ಅದಕ್ಕೂ ಜಿಎಸ್ಟಿ ಹಾಕಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ರೈತರ ಉತ್ಪನ್ನಗಳ ಯಾವುದೇ ಬೆಲೆಗಳು ಹೆಚ್ಚಳವಾಗಿಲ್ಲ" ಎಂದು ಡಿ. ಕೆ. ಶಿವಕುಮಾರ್ ಕಿಡಿಕಾರಿದರು.
ಬಿಜೆಪಿ ವಿರುದ್ಧ ಡಿಕೆಶಿ ಗುಡುಗು
"ಕಾಂಗ್ರೆಸ್ಸಿಗರು ಅಮೃತ ಮಹೋತ್ಸವದ ಪಾದಯಾತ್ರೆ ಘೋಷಣೆ ಮಾಡಿದ ನಂತರ ಬಿಜೆಪಿ ನೇತೃತ್ವದ ಸರ್ಕಾರ ಹರ್ಘರ್ ತಿರಂಗ ಅಭಿಯಾನ ಘೋಷಣೆ ಮಾಡಿದೆ. ಪ್ರತೀ ಮನೆ ಮೇಲೂ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಸೂಚಿಸಿದೆ. ಆದರೆ ಅಂಗಡಿಗಳು ಮತ್ತು ಸೊಸೈಟಿಗಳಲ್ಲಿ 20 ರೂಪಾಯಿ ಹಣ ಕೊಟ್ಟು ಧ್ವಜ ಖರೀದಿ ಮಾಡುವಂತೆ ತಿಳಿಸಿರುವುದು ನಾಚಿಕೆಗೇಡಿನ ಸಂಗತಿ" ಎಂದು ಡಿ. ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದರು.
"ನಮ್ಮ ಸರ್ಕಾರದ ಅವಧಿಯಲ್ಲಿ ಉಚಿತವಾಗಿ ಪಡಿತರ ಅಕ್ಕಿ ವಿತರಣೆ ಮಾಡುತ್ತಿದ್ದೆವು. ಒಂದು ಕೆಜಿ ಅಕ್ಕಿ 22 ರಿಂದ 23 ರೂಪಾಯಿ ಆಗಿತ್ತು. ಒಂದು ಕೆಜಿ ಅಕ್ಕಿ ದರದಷ್ಟು ಬೆಲೆ ರಾಷ್ಟ್ರ ಧ್ವಜಕ್ಕೆ. ಇದನ್ನು ಉಚಿತವಾಗಿಯೇ ಕೊಡಬಹುದಿತ್ತು. ಬಿಜೆಪಿ ಧ್ವಜವನ್ನು ಮಾರಾಟ ಮಾಡುವ ಮೂಲಕ ಹಣ ಮಾಡಿಕೊಳ್ಳುವ ದಂಧೆಗೆ ಇಳಿದಿದೆ" ಎಂದು ಡಿ. ಕೆ. ಶಿವಕುಮಾರ್ ಟೀಕಿಸಿದರು.
"ನಾನು ಈಗಾಗಲೇ ಒಂದೂವರೆ ಲಕ್ಷ ಧ್ವಜಕ್ಕೆ ಆರ್ಡರ್ ಕೊಟ್ಟಿದ್ದೇನೆ. ಖಾದಿ ಮಂಡಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ಧ್ವಜ ಖರೀದಿಗೆ ಮುಂದಾಗಿದ್ದು, ಶೀಘ್ರ ಹಂಚಿಕೆ ಮಾಡಲಾಗುವುದು" ಎಂದರು.
ಪಾದಯಾತ್ರೆಯಲ್ಲಿ ಭಾಗಿಯಾಗಲು ಸಲಹೆ
"ಆಗಸ್ಟ್ 15ರಂದು ಬೆಳಗ್ಗೆ 8 ಗಂಟೆಗೆ ತಿಂಡಿ ಸೇವಿಸಿ ಬೆಂಗಳೂರಿನತ್ತ ಹೊರಡಬೇಕು. ವಾಹನಗಳ ಚಾಲಕರ ಮೊಬೈಲ್ ಸಂಖ್ಯೆಗಳನ್ನು ತೆಗೆದುಕೊಂಡು ಮಧ್ಯಾಹ್ನ 1 ಗಂಟೆ ವೇಳೆಗೆ ಪಾದಯಾತ್ರೆ ಹೊರಡುವ ಸ್ಥಳದಲ್ಲಿ ಎಲ್ಲ ಕಾಂಗ್ರೆಸ್ಸಿಗರು ಸೇರಬೇಕು. ಸ್ವಾತಂತ್ರ ಬಂದು 75 ವರ್ಷ ಆಗಿದೆ. ಇಂತಹ ಅಮೃತ ಗಳಿಗೆ ಮತ್ತೊಮ್ಮೆ ಬರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು" ಎಂದು ಡಿ. ಕೆ. ಶಿವಕುಮಾರ್ ಕರೆ ನೀಡಿದರು.
ಭಾರತ್ ಜೋಡೋ ಅಭಿಯಾನದ ಮಾರ್ಗಗಳು
:ಎಐಸಿಸಿ ಮುಖಂಡ ರಾಹುಲ್ಗಾಂಧಿ ಅವರು ಭಾರತ್ ಜೋಡೋ ಅಭಿಯಾನ ಹಮ್ಮಿಕೊಂಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತವನ್ನು ಒಗ್ಗೂಡಿಸುವ ಕಾರ್ಯಕ್ರಮ ಇದಾಗಿದೆ. ಸೆಪ್ಟೆಂಬರ್ 7ರಂದು ಈ ಅಭಿಯಾನ ಪ್ರಾರಂಭವಾಗುತ್ತದೆ. ಕೇರಳದಿಂದ ಯಾತ್ರೆ ಆಗಮಿಸಲಿದ್ದು, ಚಾಮರಾಜನಗರ, ಗುಂಡ್ಲುಪೇಟೆ, ಮೈಸೂರು ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಬರುತ್ತದೆ. ಪಾಂಡವಪುರ, ನಾಗಮಂಗಲ, ತುರುವೆಕೆರೆ, ಹಿರಿಯೂರು, ಬಳ್ಳಾರಿ, ರಾಯಚೂರು ಮಾರ್ಗ ನಿಗದಿಯಾಗಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
"ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳ ಕಾಲ ಯಾತ್ರೆ ಸಂಚರಿಸಲಿದೆ. ಮಂಡ್ಯ ಅಷ್ಟೇ ಅಲ್ಲದೆ ಕನಕಪುರ, ರಾಮನಗರ ಜಿಲ್ಲೆಯಿಂದಲೂ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಬರುವವರಿದ್ದಾರೆ. ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಎಲ್ಲರೂ ಒಗ್ಗೂಡಿ ರೂಪಿಸೋಣ" ಎಂದು ಹೇಳಿದರು.
Recommended Video