ಕೆಆರ್ಎಸ್ ಭರ್ತಿಗೆ ದಿನಗಣನೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ
ಮಂಡ್ಯ, ಅಕ್ಟೋಬರ್ 26; ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ಎಸ್ ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು ಕಾವೇರಿ ನೀರಾವರಿ ನಿಗಮ ಕಾವೇರಿ ನದಿ ಪಾತ್ರದ ಜನರಿಗೆ ಡ್ಯಾಂನಿಂದ ನೀರು ಹೊರಬಿಡುವ ಎಚ್ಚರಿಕೆಯನ್ನು ನೀಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೆಬ್ ಸೈಟ್ ಮಾಹಿತಿ ಪ್ರಕಾರ ಅಕ್ಟೋಬರ್ 26ರ ಮಂಗಳವಾರ ಕೆಆರ್ಎಸ್ ಡ್ಯಾಂನಲ್ಲಿ 37.61 ಮೀಟರ್ (123.39 ಅಡಿ) ನೀರಿನ ಸಂಗ್ರವಿದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಗಳು.
ಮಳೆ ಅಬ್ಬರ; 119 ಅಡಿ ತಲುಪಿದ ಕೆಆರ್ಎಸ್ ನೀರಿನ ಮಟ್ಟ
ಜಲಾಶಯಕ್ಕೆ 19,341 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಡ್ಯಾನಿಂದ 3476 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿ ಚಂಡಮಾರುತದ ಪ್ರಭಾವದಿಂದ ಸುರಿದ ಮಳೆಯಿಂದಾಗಿ ಜಲಾಶಯ ಭರ್ತಿಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
110 ಅಡಿ ತಲುಪಿದ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ
ಈ ಬಾರಿ ಕೆಆರ್ಎಸ್ ಜಲಾಶಯ ಭರ್ತಿಯಾಗುವುದೇ ಅನುಮಾನವಾಗಿತ್ತು. ಡ್ಯಾಂ ಭರ್ತಿಯಾದಾಗ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವುದು ಸಂಪ್ರದಾಯವಾಗಿದೆ. ಕಳೆದ ವರ್ಷ ಆಗಸ್ಟ್ 21ರಂದು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು.
ಕೆಆರ್ಎಸ್ ಭರ್ತಿಗೆ 4 ಅಡಿಗಳು ಬಾಕಿ; ಜಲಾಶಯಗಳ ನೀರಿನ ಮಟ್ಟ
ಇದೇ ಮೊದಲಲ್ಲ
ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ಎಸ್ ಜಲಾಶಯ ಅಕ್ಟೋಬರ್ ತಿಂಗಳಿನಲ್ಲಿ ಭರ್ತಿಯಾಗುತ್ತಿರುವುದು ಇದೇ ಮೊದಲಲ್ಲ. 2010ರಲ್ಲಿ ಅಕ್ಟೋಬರ್ 18ರಂದು ಜಲಾಶಯ ಭರ್ತಿಯಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಬಾಗಿನ ಅರ್ಪಿಸಿದ್ದರು. ಈ ಬಾರಿ ಡ್ಯಾಂ ಭರ್ತಿಯಾದಾಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಕಾವೇರಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿ, ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ತಮಿಳುನಾಡಿಗೆ ಹರಿಸಬೇಕಾದ ಕಾವೇರಿ ನೀರನ್ನು ಹರಿಸಲಾಗಿದ್ದು, ಡ್ಯಾಂನಿಂದ ನೀರನ್ನು ಹೊರಬಿಟ್ಟರೆ ಹೆಚ್ಚುವರಿ ನೀರು ತಮಿಳುನಾಡಿಗೆ ಸಿಗಲಿದೆ.
ಜುಲೈ, ಆಗಸ್ಟ್ನಲ್ಲೇ ಭರ್ತಿಯಾಗುತ್ತದೆ
ಕರ್ನಾಟಕದಲ್ಲಿ ಜೂನ್ನಲ್ಲಿ ನೈಋತ್ಯ ಮುಂಗಾರು ಮಳೆ ಆರಭವಾಗುತ್ತದೆ. ಸಾಮಾನ್ಯವಾಗಿ ಜುಲೈ ಅಥವ ಆಗಸ್ಟ್ನಲ್ಲೇ ಕೆಆರ್ಎಸ್ ಭರ್ತಿಯಾಗುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸಹ ಡ್ಯಾಂ ಭರ್ತಿಯಾದ ಉದಾಹರಣೆಗಳು ಇವೆ. ಈಗ ಜಲಾಶಯ ಭರ್ತಿಗೆ ಒಂದು ಅಡಿ ಬಾಕಿ ಇದೆ. ಡ್ಯಾನಿಂದ ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತದೆ. ಆದ್ದರಿಂದ ನದಿ ಪಾತ್ರದ ಜನರಿಗೆ ಕಾವೇರಿ ನೀರಾವರಿ ನಿಗಮ ಎಚ್ಚರಿಕೆಯನ್ನು ರವಾನಿಸಿದೆ.
ವಿಶೇಷ ಪೂಜೆ ಸಲ್ಲಿಸಿದ್ದ ಮುಖ್ಯಮಂತ್ರಿಗಳು
ಮೈಸೂರು ದಸರಾ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಆರ್ಎಸ್ನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥನೆ ಮಾಡಿದ್ದರು. ಮುಖ್ಯಮಂತ್ರಿಗಳ ಪ್ರಾರ್ಥನೆ ವರುಣನಿಗೆ ತಲುಪಿತ್ತೋ ಏನೋ ಆ ನಂತರ ಚಂಡಮಾರುತದ ಪ್ರಭಾವದಿಂದ ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಸುರಿದಿದ್ದಂತು ಸತ್ಯ. ಹೀಗಾಗಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಕ್ಟೋಬರ್ ಅಂತ್ಯಕ್ಕೆ ಕಾವೇರಿಯ ಒಡಲು ಭರ್ತಿಯಾಗುವ ಸೂಚನೆ ಸಿಕ್ಕಿದೆ. ಕೆಆರ್ಎಸ್ ಜಲಾಶಯ ಭರ್ತಿಯಾದರೆ ರೈತರಿಗೆ, ಬೆಂಗಳೂರು, ಮೈಸೂರು ನಗರದ ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ.
Recommended Video
113 ಅಡಿಗೆ ಕುಸಿದಿದ್ದ ಜಲಾಶಯ
124.80 ಅಡಿ ಎತ್ತರದ ಕೆಆರ್ಎಸ್ ಜಲಾಶಯ ಈ ಹಿಂದೆಯೇ ಭರ್ತಿಯಾಗುವ ಅವಕಾಶ ಇದ್ದರೂ ತಮಿಳುನಾಡಿಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿಸಿದ ಪರಿಣಾಮ 122 ಅಡಿಯವರೆಗೂ ಭರ್ತಿಯಾಗಿದ್ದ ಜಲಾಶಯದ ನೀರಿನ ಮಟ್ಟ 113 ಅಡಿಗೆ ಕುಸಿದಿತ್ತು. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಜೂನ್-ಆಗಸ್ಟ್ ತಿಂಗಳ ಕೋಟಾದ ನೀರನ್ನು ಹಂಚಿಕೆ ಮಾಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದ್ದರಿಂದ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಂತೆ ಅಣೆಕಟ್ಟೆಗೆ 10 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸಲಾಗಿತ್ತು.