ಗಾಯದ ಮೇಲೆ ಸುಪ್ರೀಂ ಬರೆ, ಜೈಲ್ ಭರೋ ಕರೆ
ಮಂಡ್ಯ, ಸೆಪ್ಟೆಂಬರ್ 20 : ಸುಪ್ರೀಂ ಕೋರ್ಟ್ ಆದೇಶ ರಾಜ್ಯಕ್ಕೆ ಘನ ಘೋರ ಅನ್ಯಾಯವಾದ ವಿಷಯ ತಿಳಿಯುತ್ತಿದ್ದಂತೆ ಹೋರಾಟಗಾರರೊಂದಿಗೆ ಬೀದಿಗಿಳಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರು ಜೈಲ್ ಭರೋ ಚಳವಳಿಗೆ ಕರೆ ನೀಡಿದ್ದಾರೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಹಾಗೂ ತಮಿಳುನಾಡಿಗೆ ಸೆ.27ರವರೆಗೆ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿರುವುದರಿಂದ ಕನ್ನಡಿಗರು ಜೈಲ್ ಭರೋ ಚಳವಳಿಗೆ ಮುಂದಾಗಬೇಕು ಎಂದು ಮಂಗಳವಾರ ಸಂಜೆ ಕರೆ ನೀಡಿದರು. [ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿರುವುದು ಕರ್ನಾಟಕದ ಪಾಲಿಗೆ ಕೊನೆ ಮೊಳೆ ಹೊಡೆದಂತೆ ಆಗಿದೆ. ಇದರ ವಿರುದ್ಧ ಹೋರಾಟ ಮಾಡದೆ ಅನ್ಯ ಮಾರ್ಗಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ನಿಂದ ಆಗಿರುವ ಅನ್ಯಾಯ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ಜನರೊಂದಿಗೆ ಸೇರಿ ಕಾವೇರಿ ಚಳವಳಿಯಲ್ಲಿ ಭಾಗಿಯಾಗಬೇಕು. ಈಗಲೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತರೆ ಜನರೇ ಒದ್ದು ಓಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. [ತಮಿಳುನಾಡು ಬೆಳೆಗಾಗಿ ಬೆಂಗಳೂರಿನ ಕುಡಿಯುವ ನೀರಿನ ತ್ಯಾಗ]
ಮನೆಗೊಬ್ಬರಂತೆ ಬನ್ನಿ
ಕಾವೇರಿ ನೀರನ್ನು ಉಳಿಸಿಕೊಳ್ಳಲು ಕಾವೇರಿ ಕಣಿವೆ ರೈತರು ಶತಾಯ ಗತಾಯ ಹೋರಾಟ ನಡೆಸಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮನೆಗೊಬ್ಬರಂತೆ ಅದರಲ್ಲೂ ವಿದ್ಯಾರ್ಥಿಗಳು ಕಾವೇರಿ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಗೌಡರು ಮನವಿ ಮಾಡಿದರು. [ಇಂಥವರಿಂದ ಕಾವೇರಿ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೆ?]
ಬುಧವಾರ ಜನಪ್ರತಿನಿಧಿಗಳ ಸಭೆ
ಬುಧವಾರ (ಸೆ.21) ಜಿಲ್ಲೆಯ ಸಂಸದರು ಹಾಗೂ ಶಾಸಕರ ತುರ್ತು ಸಭೆ ಕರೆದಿದ್ದೇನೆ. ಮುಂದಿನ ಹೋರಾಟದ ರೂಪುರೇಷೆ ರಚಿಸುವ ಕುರಿತು ಚರ್ಚೆ ನಡೆಸಿ ಚಳವಳಿ ತೀವ್ರಗೊಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಡ್ಯ ಬಂದ್ ಕೂಡ ಇಲ್ಲ
ಮಂಡ್ಯ ಜಿಲ್ಲಾ ಬಂದ್ಗೆ ಕರೆ ನೀಡುವುದಿಲ್ಲ. ವರ್ತಕರು ಸ್ವಯಂ ಪ್ರೇರಿತರವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಚಳವಳಿಗೆ ಬೆಂಬಲ ನೀಡುವುದಾದರೆ ನೀಡಲಿ. ಬಲವಂತವಾಗಿ ಬಂದ್ ಮಾಡುವುದು ಬೇಡ ಎಂದು ಹೇಳಿದರು.
ಕೇಂದ್ರದ ದ್ವೇಷ ರಾಜಕಾರಣ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಕೇಂದ್ರ ದ್ವೇಷ ರಾಜಕಾರಣ ಮಾಡುತ್ತಿದೆ ಎನ್ನುತ್ತಾರೆ ಕಾವೇರಿ ಹೋರಾಟಗಾರರು. ಮಹದಾಯಿ, ಕಳಾಸ-ಬಂಡೂರಿ ವಿಚಾರದಲ್ಲಿಯೂ ಕೇಂದ್ರ-ನಮ್ಮ ಬಿಜೆಪಿ ಸಂಸದರ ನಡೆ ಇದೇ ರೀತಿಯಾಗಿತ್ತು ಎನ್ನುವುದನ್ನು ಜನರ ಆರೋಪ.
ಜನರ ಬಾಯಿಗೆ ಮಣ್ಣೇ ಗತಿ
ಪ್ರಧಾನಿ ಮತ್ತು ಸಂಸದರನ್ನು ನಂಬಿಕೊಂಡರೆ ಮಂಡ್ಯದ ಜನತೆಯ ಬಾಯಿಗೆ ಮಣ್ಣೇಗತಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಜನರು ಬಾಯಿಗೆ ಮಣ್ಣು ಹಾಕಿಕೊಂಡು ಮಂಗಳವಾರ ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.
ಮಂಡ್ಯದ ಗಂಡು ಅಂಬರೀಶ್ ಎಲ್ಲಿ?
ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಹೊರತುಪಡಿಸಿದರೆ, ಇನ್ಯಾವುದೇ ಶಾಸಕರು ಹೋರಾಟಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸಂಸದ ಪುಟ್ಟರಾಜು ಒಂದೆರಡು ಬಾರಿ ರೋಡ್ ಶೋ ನಡೆಸಿ ಧರಣಿ ನಡೆಸಿದ್ದು ಬಿಟ್ಟರೆ, ಸಂಸದರ ಘನತೆಗೆ ತಕ್ಕಂತೆ ಗಂಭೀರ ಹೋರಾಟ-ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ಮಂಡ್ಯದ ಗಂಡು ಬಿರುದಾಂಕಿತ ಶಾಸಕ ಅಂಬರೀಷ್ ಸಹ ನಾಪತ್ತೆಯಾಗಿರುವುದು ಸಹ ಹೋರಾಟಗಾರರ ಬೇಸರಕ್ಕೆ ಕಾರಣವಾಗಿದೆ.
ಕಣ್ಣೀರುಗರೆದ ಹಿರಿಯ ತಾಯಿ
ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಬೇಕೆಂದು ಸುಪ್ರೀಂ ಕೋರ್ಟಿನಿಂದ ಆದೇಶ ಬರುತ್ತಿದ್ದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ತಾಯಿಯೊಬ್ಬರು ನೋವು ತಾಳಲಾರದೆ ಕಣ್ಣೀರುಗರೆದರು. ಕೃಷಿಯನ್ನೇ ನಂಬಿಕೊಂಡಿರುವ ನಮಗೆ ಉಳಿದಿರುವುದು ಕಣ್ಣೀರೊಂದೇ ಎಂದು ಗದ್ಗದಿತರಾದರು. ಜಯಲಲಿತಾ ಕೂಡ ಹುಟ್ಟಿದ್ದು ಈ ಜಿಲ್ಲೆಯಲ್ಲೆ.