ಕೆ.ಆರ್.ಎಸ್. ನೀರು: ಕಾವೇರಿ ಪ್ರವಾಹಕ್ಕೆ ಮಂಡ್ಯದಲ್ಲೂ ಆತಂಕದ ಸ್ಥಿತಿ
ಮಂಡ್ಯ, ಆಗಸ್ಟ್ 18: ಕೆ.ಆರ್.ಎಸ್. ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಕಾರಣ ಮಂಡ್ಯ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಆತಂಕಗೊಂಡಿದ್ದಾರೆ.
ಉಕ್ಕುತ್ತಿರುವ ಕಪಿಲ, ಕಾವೇರಿ: ಪ್ರವಾಹ ಭೀತಿಯಲ್ಲಿ ನದಿಪಾತ್ರದ ಜನ
ಶ್ರೀರಂಗಪಟ್ಟಣ ತಾಲೂಕು ಮೇಳಾಪುರದಲ್ಲಿ ವಿದ್ಯುತ್ ವಿತರಣಾ ಉಪ ಕೇಂದ್ರ ಜಲಾವೃತಗೊಂಡಿದ್ದು, ಈ ಭಾಗದ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ವಿದ್ಯುತ್ ಪೂರೈಕೆ ಇಲ್ಲದ ಕಾರಣ ಮೈಸೂರಿಗೆ ಕುಡಿಯುವ ನೀರು ಪೂರೈಕೆ ಸಹ ಸ್ಥಗಿತಗೊಂಡಿದೆ.
ಮೇಳಾಪುರದಿಂದ ಮೈಸೂರಿಗೆ ಕುಡಿಯುವ ನೀರು ಪೂರೈಸುವ ಪಂಪ್ಹೌಸ್ಗೆ ವಿದ್ಯುತ್ ಸರಬರಾಜು ಇಲ್ಲದ ಕಾರಣ ಮೈಸೂರಿಗೆ ಕುಡಿಯುವ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಮಳೆಯಿಂದ ಮನೆ ಕಳೆದುಕೊಂಡವರಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿಯ ರಂಗನತಿಟ್ಟು ಪಕ್ಷಿಧಾಮದಲ್ಲಿನ ಕಾವೇರಿ ನದಿಯೊಳಗೆ 35 ನಡುಗಡ್ಡೆಗಳು ಇದ್ದು, ಈ ಪೈಕಿ 15ಕ್ಕೂ ಹೆಚ್ಚು ಬಹುತೇಕ ಮುಳುಗಡೆಯಾಗಿವೆ. ಹೀಗಾಗಿ ಪಕ್ಷಿಧಾಮದಲ್ಲಿನ ಪಕ್ಷಿಗಳು ಎತ್ತರ ಮರಗಳನ್ನು ಆಶ್ರಯಿಸಿವೆ.
ನೆರೆ ಸಮಸ್ಯೆ ಎದುರಾಗದಂತೆ ನದಿಯಂಚಿನ ಪ್ರದೇಶಗಳಲ್ಲಿ ಜಿಲ್ಲಾಡಳಿತ ಎಚ್ಚರ ವಹಿಸಿದ್ದು, ನದಿಯಂಚಲ್ಲಿ ವಾಸವಿರುವ ಜನರನ್ನು ಎತ್ತರದ ಪ್ರದೇಶಗಳಿಗೆ ಕಳುಹಿಸಲು ಕ್ರಮವಹಿಸಲಾಗಿದೆ.
ಕಾವೇರಿ ನದಿಯಿಂದ ಸೃಷ್ಟಿಯಾದ ಪ್ರವಾಹಕ್ಕೆ ಮಳವಳ್ಳಿಯ ಬೆಳಕವಾಡಿ ಕಾಶಿವಿಶ್ವನಾಥ-ಆದಿಶಕ್ತಿಮಾರಮ್ಮ ದೇವಾಲಯ ಜಲಾವೃತವಾಗಿದ್ದು ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ಬೆಳೆ ನಾಶವಾಗಿದೆ.
ಕೆಆರ್ಎಸ್ ಮತ್ತು ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದರಿಂದ ತಾಲೂಕಿನ ನದಿಪಾತ್ರದಲ್ಲಿರುವ ಬಿ.ಜಿ.ಪುರ ಹೋಬಳಿ ವ್ಯಾಪ್ತಿಯ ಸಾವಿರಾರು ಎಕರೆ ರೈತರು ಜಮೀನುಗಳು, ಬೆಳೆಗಳು ಹಾಗೂ ಬೆಳಕವಾಡಿಯ ಕಾಶಿವಿಶ್ವನಾಥ-ಆದಿಶಕ್ತಿ ಮಾರಮ್ಮ ದೇವಾಲಯಗಳು ಕಾವೇರಿ ನದಿಯಲ್ಲಿ ಮುಳುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಬಿ.ಜಿ.ಪುರ ಹೋಬಳಿಯ ವ್ಯಾಪ್ತಿಯ ಬೆಳಕವಾಡಿ, ಹುಲ್ಲಂಬಳ್ಳಿ, ಪೂರಿಗಾಲಿ, ಜವನಗಹಳ್ಳಿ ವ್ಯಾಪ್ತಿಯಲ್ಲಿನ ರೈತರ ಸಾವಿರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿ ನಾಟಿ ಮಾಡಲು ಹಸನಾಗಿಸಿದ್ದ ಜಮೀನು ಭತ್ತದ ಒಟ್ಟಲು ಸಂಪೂರ್ಣ ಜಲಾವೃತಗೊಂಡು ನಾಶವಾಗುತ್ತಿರುವುದರಿಂದ ರೈತರು ಅತಂಕಕ್ಕೀಡಾಗಿದ್ದಾರೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಇದಲ್ಲದೆ ರೈತರು ಬೆಳೆದಿರುವ ಜೋಳ, ಅರಿಶಿಣ ಬೆಳೆಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾಗಿದೆ. ತಾಲೂಕು ಮತ್ತು ಜಿಲ್ಲಾಡಳಿತ ಇನ್ನೂ ಭೇಟಿ ನೀಡದೆ ನಿರ್ಲಕ್ಷತೆ ವಹಿಸಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿ.ಜಿ.ಪುರ ಹೋಬಳಿ ವ್ಯಾಪ್ತಿಯಲ್ಲಿ ಕಾವೇರಿ ನದಿಯ ಪ್ರವಾಹದಿಂದ ಸಾವಿರಾರು ಎಕರೆ ಜಮೀನುಗಳಲ್ಲಿದ್ದ ಬೆಳೆಗಳು ಮುಳುಗಿ ನಾಶವಾಗಿದ್ದು, ಕೂಡಲೇ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಸಮಾರೋಪಾದಿಯಲ್ಲಿ ಪರಿಹಾರ ಕ್ರಮ ವಹಿಸುವಂತೆ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಆಗ್ರಹಿಸಿದ್ದಾರೆ.