ಹೋರಾಟಗಾರರ ವಿರುದ್ಧದ ಮೊಕದ್ದಮೆ ವಾಪಸ್ ಪಡೆಯಿರಿ
ಮಂಡ್ಯ, ಸೆಪ್ಟೆಂಬರ್ 16: ನಗರದ ಸರ್ ಎಂ.ವಿ. ಪ್ರತಿಮೆ ಬಳಿ ಮಾದೇಗೌಡರು ಕರೆದಿದ್ದ ಶಾಸಕರು, ಸಂಸದರ ಸಭೆ ಮುಕ್ತಾಯವಾಗಿದೆ. ಆ ನಂತರ ಮಾತನಾಡಿರುವ ಶಾಸಕ ಎನ್.ಚೆಲುವರಾಯಸ್ವಾಮಿ, ಹೋರಾಟಗಾರರ ವಿರುದ್ಧ ಹಾಕಿದ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಉನ್ನತಾಧಿಕಾರ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.
ನೀರಾವರಿ ತಜ್ಞರು, ಗಣಿ-ಭೂಗರ್ಭ, ರೈತರು ಹಾಗೂ ಸಾಮಾಜಿಕ ತಜ್ಞರನ್ನು ಒಳಗೊಂಡ ಎಂಟು ಸದಸ್ಯರಿರುವ ಸಮಿತಿ ರಚನೆಯಾಗಬೇಕು. ಅದರಲ್ಲಿ ಶೇ 60ರಷ್ಟು ಯುವಕರಿಗೆ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.[ಅಂಬರೀಶಣ್ಣ ರಸ್ತೆ ಬೇಡ, ನೀರು ಬೇಡ, ನೀವು ಬನ್ನಿ ಸಾಕು...]
ಜನಪ್ರತಿನಿಧಿಗಳ ಸಭೆಯಲ್ಲಿ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತವಾಯಿತು. ಮಾಗಡಿ ಶಾಸಕ ಬಾಲಕೃಷ್ಣನನ್ನು ಗಂಡಸು ಮಾಡಿದ್ದೇ ಬಿಜೆಪಿ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣ ಗೌಡ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಉಸಿರಾಟದಂತೆ ಕೆಲಸ ಮಾಡುತ್ತಿರುವ ಬಾಲಕೃಷ್ಣ, ಮನೆಗೆ ಮಗನಲ್ಲ, ಕ್ಷೇತ್ರಕ್ಕೆ ಶಾಸಕನಲ್ಲ, ಪಕ್ಷಕ್ಕೆ ಕಾರ್ಯಕರ್ತನಲ್ಲ ಎಂದು ವ್ಯಂಗ್ಯವಾಡಿದರು. ಇಂಥವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ ಎಂದರು. ಈಚೆಗೆ ಬಿಜೆಪಿ ವಿರುದ್ಧ ಮಾತನಾಡಿದ್ದ ಶಾಸಕ ಬಾಲಕೃಷ್ಣ, ಬಿಜೆಪಿಯವರು ಗಂಡಸ್ರಾ ಎಂದಿದ್ದರು. ಅದಕ್ಕೆ ನಾಗಣ್ಣ ಗೌಡ ತಿರುಗೇಟು ನೀಡಿದರು.