ಅಮಿತ್ ಶಾ ನಿರ್ಣಯ ಪ್ರಶ್ನಿಸಲಾಗದು: ಮಾಧುಸ್ವಾಮಿ
ಮಂಡ್ಯ, ಆಗಸ್ಟ್ 31: 'ರಾಜ್ಯಕ್ಕೆ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ನಿರ್ಧಾರ ಅಮಿತ್ ಶಾ ಅವರದ್ದಾಗಿದ್ದು, ಅವರ ನಿರ್ಣಯವನ್ನು ಪ್ರಶ್ನಿಸಲಾಗದು' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾವ ಕಾರಣಕ್ಕಾಗಿ ಮೂವರು ಡಿಸಿಎಂ ಗಳನ್ನು ನೇಮಕ ಮಾಡಿದ್ದಾರೊ ಗೊತ್ತಿಲ್ಲ, ಇದರಿಂದ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ನಾನು ನಂಬಿದ್ದೇನೆ' ಎಂದು ಮಾಧುಸ್ವಾಮಿ ಹೇಳಿದರು.
'ಮೂವರು ಡಿಸಿಎಂ ಗಳನ್ನು ಮಾಡಿದ್ದನ್ನು ಶ್ರೀನಿವಾಸ್ ಪ್ರಸಾದ್ ವಿರೋಧಿಸಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ, ಅದರ ಬಗ್ಗೆ ನಾನು ಹೇಳುವುದು ಏನೂ ಇಲ್ಲ' ಎಂದು ಅವರು ಹೇಳಿದರು.
ಸಚಿವ ಸ್ಥಾನ ಸಿಗದೇ ಇದ್ದಾಗ ಅಸಮಾಧಾನ ಆಗುವುದು ಸಹಜ, ಗ್ರಾಮ ಪಂಚಾಯಿತಿ ಸದಸ್ಯನಾದವನಿಗೆ ಅಧ್ಯಕ್ಷನಾಗುವ ಆಸೆ ಇರುತ್ತದೆ ಅದು ಸಹಜ ಎಂದು ಎಂದು ಮಾಧುಸ್ವಾಮಿ ಹೇಳಿದರು.
ಪ್ರವಾಹದಿಂದ 32 ಸಾವಿರ ಕೋಟಿ ನಷ್ಟವಾಗಿದೆ. ರಾಜ್ಯ ಸರ್ಕಾರವು ಪ್ರಸ್ತುತ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದೆ. ಮೋದಿ ಅವರು ಸೆಪ್ಟೆಂಬರ್ 7 ರಂದು ರಾಜ್ಯಕ್ಕೆ ಬರುತ್ತಿದ್ದು, ಅಂದು ನಷ್ಟದ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.