ಉಪ ಚುನಾವಣೆ: ಸಂಸದೆ ಸುಮಲತಾ ಅಂಬರೀಶ್ ಬೆಂಬಲ ಯಾರಿಗೆ?
Recommended Video
ಮಂಡ್ಯ, ನವೆಂಬರ್ 12: ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಸನ್ನಿಹಿತವಾಗುತ್ತಿರುವ ಹೊತ್ತಿನಲ್ಲಿ, ಸಂಸದೆ ಸುಮಲತಾ ಯಾರಿಗೆ ಬೆಂಬಲ ನೀಡಬಹುದು ಎನ್ನುವ ಪ್ರಶ್ನೆಯೂ ಉದ್ಭವಾಗಿದೆ.
ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ ಹಾಗೂ ನಂತರ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಸೇರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು, ಅದಕ್ಕೆ ಪುಷ್ಠಿ ಎಂಬಂತೆ ಫಲಿತಾಂಶದ ಬಳಿಕ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೇರಿದ ಬಳಿಕ ಅವರನ್ನು ಸುಮಲತಾ ಭೇಟಿಯಾಗಿದ್ದರು.
ಬಿಜೆಪಿ ನಾಯಕರು ಹಾಗೂ ಸುಮಲತಾ ಭೇಟಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಯಾಕೆಂದರೆ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾಗೆ ಬೆಂಬಲ ಸೂಚಿಸಿದ್ದರು.
ಜೊತೆಗೆ ಪ್ರಚಾರ ಕೂಡ ಮಾಡಿದ್ದರು. ಆದರೂ ಸುಮಲತಾ ಬಿಜಪಿ ಕಡೆಗೆ ಯಾಕೆ ಒಲವು ತೋರುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಆಗ ಸುಮಲತಾ ಅವರು ನಾನು ಯಾವ ಪಕ್ಷಕ್ಕೂ ಸೇರಿದವಳಲ್ಲ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದೇನೆ ಈಗ ಸ್ವತಂತ್ರವಾಗಿಯೇ ಇರುತ್ತೇನೆ. ಜನರ ತೀರ್ಮಾನವೇ ನನ್ನ ತೀರ್ಮಾನ ಎಂದಿದ್ದರು. ಮಂಡ್ಯ ಬಿಜೆಪಿ ಕಾರ್ಯಕರ್ತರು ಸಭೆಗೆ ಸುಮಲತಾ ಹಾಜರಾಗಿದ್ದರು.
ಬಿಜೆಪಿ ಸೇರ್ತಾರಾ ಪಕ್ಷೇತರ ಸಂಸದೆ ಸುಮಲತಾ?
ಇದೀಗ ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ನ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಸುಮಲತಾ ಅವರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಸುಮಲತಾ-ಕೆ.ಬಿ. ಚಂದ್ರಶೇಖರ್ ಭೇಟಿ
ಮಂಡ್ಯ ಸಂಸದೆ ಸುಮಲತಾರನ್ನು ಕೆ.ಆರ್.ಪೇಟೆಯ ಮಾಜಿ ಕಾಂಗ್ರೆಸ್ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಭೇಟಿ ಮಾಡಿದ್ದು, ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಮಾಜಿ ಸಚಿವ ನರೇಂದ್ರ ಸ್ವಾಮಿ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರೊಂದಿಗೆ ಕೆ.ಬಿ.ಚಂದ್ರಶೇಖರ್ ಸುಮಲತಾ ನಿವಾಸಕ್ಕೆ ಭೇಟಿ ನೀಡಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ನಾರಾಯಣಗೌಡ ಬೆಂಬಲ ಕೇಳುವುದರಲ್ಲಿ ಅರ್ಥವಿಲ್ಲ
ಇದೇ ವೇಳೆ ನಾರಾಯಣ ಗೌಡ ಬೆಂಬಲ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದ ಅವರು, ಸಂಸದರಾಗಿ ಚುನಾವಣೆಗೆ ನಿಂತುಕೊಂಡಾಗ ಸುಮಲತಾರನ್ನು ಟೀಕೆ ಮಾಡಿದ್ದರು. ಚಿತ್ರರಂಗದವರು ಎಂದು ಟೀಕಿಸಿದ್ದರು. ಇದನ್ನೆಲ್ಲಾ ಸಂಸದರು ಗಮನದಲ್ಲಿ ಇಟ್ಟುಕೊಂಡಿದ್ದು, ಅವರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಪಕ್ಷದ ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡಿದರು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಸುಮಲತಾ ಸಂಸದರಾಗುವಾಗ ಕಾಂಗ್ರೆಸ್ ಬೆಂಬಲ
ಕೆ.ಬಿಚಂದ್ರಶೇಖರ್ ರಾವ್ ಮಾತನಾಡಿ ಸುಮಲತಾ ಅವರು ಸಂಸದರಾದಾಗ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಬೆಂಬಲ ನೀಡಿದ್ದರು. ಈಗ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಕೇಳಲು ಬಂದಿದ್ದೇವೆ. ಅವರು ಬೆಂಬಲ ನೀಡುವ ಕುರಿತು 2 ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿ ಸಹಾಯ ಮಾಡಿದ್ದಾರೆ ಎಂದು ಸುಮಲತಾ ಅವರು ಹೇಳಿ ಕಾರ್ಯಕರ್ತರ ಸಹಾಯ ನೆನಪಿಸಿಕೊಂಡರು.
ಸುಮಲತಾ ಬೆಂಬಲ ಯಾರಿಗೆ?
ಸಂಸದೆ ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆ ಕಣಕ್ಕಿಳಿದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷವು ಸುಮಲತಾ ಅವರನ್ನು ಬೆಂಬಲಿಸಿತ್ತು. ಹಾಗಾಗಿ ಸುಮಲತಾ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವುದನ್ನು ಅವರು ತಿಳಿಸಿಲ್ಲ. ಅವರು ಯಾವ ಪಕ್ಷಕ್ಕೂ ತಮ್ಮ ಬೆಂಬಲವಿಲ್ಲ ಎಂದು ಅಥವಾ ಯಾರ ಪರವಾಗಿಯೂ ನಾನು ಮಾತಾಡುವುದಿಲ್ಲ ಎಂದು ಹೇಳಿದ್ದರೂ ಕೂಡ ಕಾಂಗ್ರೆಸ್ ತನ್ನ ಪ್ರಯತ್ನ ಮುಂದುವರೆಸಿದೆ.