ಮಂಡ್ಯದಲ್ಲಿ ಅಣ್ಣನಿಂದ ಸಹೋದರಿಯ ಪ್ರಿಯತಮ ಕೊಲೆ
ಮಂಡ್ಯ, ಅಕ್ಟೋಬರ್, 11 : ಸಹೋದರಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಯುವತಿಯ ಅಣ್ಣ ಪ್ರಿಯಕರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿಯ ಪಾಂಡವಪುರದ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹರಳಹಳ್ಳಿ ಗ್ರಾಮದ ದೇವರಾಜು ಅವರ ಪುತ್ರ ಪುರುಷೋತ್ತಮ್ (28) ಮೃತ ದುರ್ದೈವಿ, ವರುಣ್ ಕೊಲೆ ಮಾಡಿದ ಆರೋಪಿ.
ಸಹೋದರಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಚಾರವಾಗಿ ಪುರುಷೋತ್ತಮ್ ಹಾಗೂ ವರುಣ್ ನಡುವೆ ಬಹಳ ದಿನಗಳಿಂದ ದ್ವೇಷ ಬೆಳೆದಿತ್ತು. ಇದೇ ವೈಷಮ್ಯದಿಂದ ಗಣೇಶ ವಿಸರ್ಜನೆ ಮಾಡುವ ನೆಪವೊಡ್ಡಿ ಬೇರೆ ಗ್ರಾಮಕ್ಕೆ ಪುರುಷೋತ್ತಮ್ನನ್ನು ದೂರವಾಣಿ ಕರೆ ಮಾಡಿ ಕರೆಸಿಕೊಂಡಿದ್ದಾರೆ.[ಮಾಜಿ ರೌಡಿ ಜಡೇಜಾ ರವಿ ಭೀಕರ ಕೊಲೆ : ಮಂಡ್ಯ ತಲ್ಲಣ]
ಈ ಸಂದರ್ಭ ಮುಖಕ್ಕೆ ಬಣ್ಣ ಹಾಕಿಕೊಂಡು ಡ್ಯಾನ್ಸ್ ಮಾಡುವಂತಹ ಸಂದರ್ಭದಲ್ಲಿ ವರುಣ್ ಮತ್ತು ಅಭಿಲಾಷ್ ಎಂಬುವವರು ಪುರುಷೋತ್ತಮನ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಅಸ್ವಸ್ಥಗೊಂಡ ಪುರುಷೋತ್ತಮ್ ನೆಲಕ್ಕುರುಳಿದ್ದಾನೆ.
ಇದನ್ನು ನೋಡಿದ ಪುರುಷೋತ್ತಮ್ ಸ್ನೇಹಿತ ಆತನನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದ್ಯೊಯುವಂತೆ ವೈದ್ಯರು ಸೂಚಿಸಿದ್ದರ ಮೇರೆಗೆ ಮೈಸೂರಿಗೆ ಕರೆದ್ಯೂಯುವಾಗ ಮಾರ್ಗ ಮಧ್ಯೆ ಪುರುಷೋತ್ತಮ್ ಮೃತಪಟ್ಟಿದ್ದ.
ಆರೋಪಿಗಳಾದ ವರುಣ್ ಮತ್ತು ಅಭಿಲಾಷ್ ತಪ್ಪಿಸಿಕೊಳ್ಳಲು ಕನಗನಮರಡಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಿದ್ದಂತಹ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಾವೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.