ಮಂಡ್ಯ; ಮಳೆಯ ಅರ್ಭಟ, ಇಂಡುವಾಡು ಸೇತುವೆ ಕುಸಿತ
ಮಂಡ್ಯ, ಮೇ 19: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಆರ್ಭಟ ಜೋರಾಗಿದೆ. ಮಳೆಯಿಂದ ಕೆರೆಕಟ್ಟೆಗಳು ಸಂಪೂರ್ಣ ಭರ್ತಿಯಾಗುವ ಹಂತ ತಲುಪಿವೆ. ಮಳೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಇಂಡುವಾಡು ಬಳಿ ನಿರ್ಮಾಣ ಮಾಡಿದ್ದ ಸೇತುವೆ ಕೊಚ್ಚಿ ಹೋಗಿದೆ.
ಹಳ್ಳದಲ್ಲಿ ನೀರು ಹೆಚ್ಚಾದ ಕಾರಣ ಸೇತುವೆ ಕೊಚ್ಚಿ ಹೋಗಿದ್ದು, ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿರುವ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೈರಾಣಾಗಿದ್ದಾರೆ.
ಸೇತುವೆ ಕೊಚ್ಚಿ ಹೋಗುವ ವೇಳೆ ಸೇತುವೆ ಮೇಲೆ ಯಾವುದೇ ವಾಹನ ಇರಲಿಲ್ಲ. ಇದರಿಂದಾಗಿ ಯಾವುದೇ ಪ್ರಾಣಹಾನಿ ಆಗಿಲ್ಲ. ಮಳೆ ಹೆಚ್ಚಾದರೆ ಸೇತುವೆ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಬುಧವಾರ ರಾತ್ರಿಯಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಲೇ ಇದೆ.
ಜಮೀನುಗಳು ಜಲಾವೃತ; ಕೆಲವು ಕೆರೆಗಳು ಒಂದೇ ರಾತ್ರಿ ತುಂಬಿ ಹರಿದಿದ್ದು, ಭಾರೀ ಮಳೆಯಿಂದ ಕೃಷಿ ಜಮೀನುಗಳು ಜಲಾವೃತವಾಗಿ ಬೆಳೆ ನಾಶವಾಗಿದೆ. ಮಳೆಗೆ ಹಾಲಾಲೂ ಗ್ರಾಮದ ಕೆರೆ ಹೊಡೆದು ಜಮೀನುಗಳಿಗೆ ನೀರು ನುಗ್ಗಿದೆ. ನಾಗಮಂಗಲ ತಾಲೂಕಿನ ಹಾಲಾಳು ಗ್ರಾಮದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೆರೆ ಏರಿ ಒಡೆದಿದೆ. 25 ಎಕರೆ ವಿಸ್ತೀರ್ಣದ ಕೆರೆ ಏರಿ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮಂಗಳವಾರ, ಬುಧವಾರ ರಾತ್ರಿ ಸುರಿದ ಮಳೆಗೆ ಮಂಡ್ಯ ಜಿಲ್ಲೆಯ ಬಹುತೇಕ ಕೆರೆಗಳು ತುಂಬುವ ಹಂತಕ್ಕೆ ಬಂದಿದ್ದು, ಹಲವು ಕೆರೆಗಳು ಕೋಡಿ ಬಿದ್ದಿವೆ, ಅದರಲ್ಲೂ ನಾಗಮಂಗಲ ತಾಲೂಕಿನ ಹೊನ್ನಾವರ, ಅಣೆ ಚೆನ್ನಾಪುರ ಸೇರಿ ಹಲವು ಗ್ರಾಮಗಳ ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಹೊನ್ನಾವರ ಕೆರೆ ಕೋಡಿ ಹರಿದು ಜಮೀನಿಗೆ ನೀರು ನುಗ್ಗಿ ರೈತರು ಸಂಕಷ್ಟ ತದೊಂಡ್ಡಿದೆ.
ಗ್ರಾಮಸ್ಥರಿಂದ ಬಾಗಿನ; ಮಂಗಳವಾರ ಒಂದೇ ರಾತ್ರಿ ಸುರಿದ ಮಳೆಗೆ ನಾಗಮಂಗಲ ತಾಲೂಕಿನ ಆಣೆ ಚೆನ್ನಾಪುರ ಗ್ರಾಮದ ಹೊಸಕೆರೆ ಸಂಪೂರ್ಣ ಭರ್ತಿಯಾಗಿದೆ. ಗ್ರಾಮಸ್ಥರು ಬಹಳ ವರ್ಷಗಳ ಬಳಿಕ ಕೆರೆ ಭರ್ತಿಯಾಗಿದ್ದಕ್ಕೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.
ಪಾಂಡವಪುರ ಪಟ್ಟಣದ ಹಿರೋಡೆ ಕೆರೆ ಕೂಡ ಧಾರಕಾರ ಮಳೆಗೆ ಭರ್ತಿಯಾಗಿದ್ದು, ಕೋಡಿ ಬಿದ್ದು ರಭಸವಾಗಿ ನೀರು ಹರಿಯುತ್ತಿದೆ. ಕೆರೆ ನೋಡಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ.