ಉಪಾಧ್ಯಕ್ಷನ ಸೋಲಿಗೆ ಕಾರಣನಾದ ಬಿಜೆಪಿ ಬೆಂಬಲಿತ ಅಧ್ಯಕ್ಷ... ಇಷ್ಟಕ್ಕೂ ಆಗಿದ್ದೇನು?
ಮಂಡ್ಯ, ಮಾರ್ಚ್ 04: ಮಂಡ್ಯದ ಮದ್ದೂರಿನಲ್ಲಿ ಕೃಷಿಪತ್ತಿನ ಸಂಘಗಳ ಚುನಾವಣೆಗಳು ನಡೆದಿದ್ದು, ಯಾವುದೇ ವಿಧಾನಸಭಾ ಚುನಾವಣೆಗೂ ಕಡಿಮೆ ಇಲ್ಲದಂತೆ ರಾಜಕೀಯ ಮಾಡುವ ಮೂಲಕ ಗೆಲುವಿಗಾಗಿ ಹೆಣಗಾಡುತ್ತಿರುವುದು ಕಂಡು ಬರುತ್ತಿದೆ.
ಇಲ್ಲಿಯೂ ಪ್ರತಿಷ್ಠೆ ಮೆರೆಯುತ್ತಿರುವ ರಾಜಕೀಯ ಪಕ್ಷಗಳು ತಮ್ಮದೇ ರಾಜಕೀಯ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ನಡುವೆ ಸಮೀಪದ ಚಾಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷನಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ವ್ಯಕ್ತಿಯೇ ಉಪಾಧ್ಯಕ್ಷನ ಆಯ್ಕೆ ವೇಳೆ ಎಡವಟ್ಟು ಮಾಡಿ ತಮ್ಮ ಪಕ್ಷಕ್ಕೆ ದಕ್ಕುತ್ತಿದ್ದ ಸ್ಥಾನ ವಿರೋಧ ಪಕ್ಷಗಳ ಪಾಲಾಗುವಂತೆ ಮಾಡಿದ ಘಟನೆ ನಡೆದಿದೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಾರಾಯಣಗೌಡ ಬರೆದ ಪತ್ರ ಓದಿ ಕಣ್ಣೀರಿಟ್ಟ ಕುಮಾರಸ್ವಾಮಿ
ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸಿ.ಟಿ.ಮಹೇಂದ್ರ, ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಸಿ.ಪಿ.ನಾಗರಾಜು ಸ್ಪರ್ಧೆ ಮಾಡಿದ್ದರು. ಸಿ.ಟಿ.ಮಹೇಂದ್ರ ಅವರು ಏಳು ಮತಗಳನ್ನು ಪಡೆದು ಜಯಶೀಲರಾದರೆ, ಸಿ.ಪಿ.ನಾಗರಾಜು ಐದು ಮತಗಳನ್ನು ಪಡೆದು ಪರಾಭವಗೊಂಡರು. ಆ ನಂತರ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಸಿ.ಎಂ.ಮಹದೇವಯ್ಯ ಹಾಗೂ ಜೆಡಿಎಸ್ ಕಾಂಗ್ರೆಸ್ ಬೆಂಬಲಿತರಾಗಿ ಎಂ.ರಾಮ ಅವರು ಸ್ಪರ್ಧೆ ಮಾಡಿದ್ದರು.
ಚುನಾವಣೆ ನಡೆದು ಇಬ್ಬರು ಕ್ರಮವಾಗಿ ಆರು ಮತಗಳನ್ನು ಪಡೆದ ಕಾರಣ ಲಾಟರಿ ಎತ್ತಲಾಯಿತು. ಲಾಟರಿಯಲ್ಲಿ ಜೆಡಿಎಸ್ ಕಾಂಗ್ರೆಸ್ ಬೆಂಬಲಿತ ಎಂ.ರಾಮು ಅವರು ಜಯಶೀಲರಾದರು. ಆದರೆ ಇಲ್ಲೊಂದು ಎಡವಟ್ಟು ನಡೆದಿತ್ತು. ಸಂಘದಲ್ಲಿ ಒಟ್ಟು 11 ಸ್ಥಾನಗಳಿದ್ದು, ಇದರಲ್ಲಿ 6 ಬಿಜೆಪಿ, 3 ಕಾಂಗ್ರೆಸ್, ಇಬ್ಬರು ಜೆಡಿಎಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. ಸರ್ಕಾರ ನಾಮನಿರ್ದೇಶಕ ಅಧಿಕಾರಿಯೊಬ್ಬರು ಮತದಾನ ಮಾಡಿದ್ದರು.
ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಿ.ಟಿ.ಮಹೇಂದ್ರ ಏಳು ಮತಗಳನ್ನು ಪಡೆದು ಗೆಲುವು ಸಾಧಿಸುದ್ದಂತೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತನಾಗಿ ಸ್ಪರ್ಧೆ ಮಾಡಿದ್ದ ಸಿ.ಎಂ.ಮಹದೇವಯ್ಯ ಅವರು ಏಳು ಮತಗಳನ್ನು ಪಡೆದುಕೊಂಡು ಜಯಶೀಲರಾಗಬೇಕಿತ್ತು. ಆದರೆ, ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಟಿ.ಮಹೇಂದ್ರ ಅವರೇ ತಮ್ಮದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಬದಲಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಎಂ.ರಾಮು ಅವರಿಗೆ ಮತ ಹಾಕಿದ್ದರಿಂದ ಅವರು ಗೆದ್ದು ತಮ್ಮದೇ ಪಕ್ಷದ ಅಭ್ಯರ್ಥಿ ಸಿ.ಎಂ.ಮಹದೇವಯ್ಯ ಸೋಲುವಂತಾಗಿದೆ.
ಈ ಬೆಳವಣಿಗೆ ಬಿಜೆಪಿ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದ್ದರಿಂದ ಗಲಾಟೆಗಳಾಗಬಹುದೆಂದು ಸಂಘದ ಅಧ್ಯಕ್ಷ ಸಿ.ಟಿ.ಮಹೇಂದ್ರ ಅವರನ್ನು ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಅವರ ಮನೆಗೆ ಕರೆದುಕೊಂಡು ಹೋಗಿ ಬಿಡಲಾಯಿತು.