ಉಪಚುನಾವಣೆಯ ಗೆಲುವು ಲೋಕಸಭೆಗೆ ದಿಕ್ಸೂಚಿನಾ?
ಮಂಡ್ಯ, ನವೆಂಬರ್.07:ಉಪಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದರೆ, ಮಂಡ್ಯದಲ್ಲಿ ಮಾತ್ರ ಕಾಂಗ್ರೆಸ್ ಬದಿಗೆ ಸರಿಯಲ್ಪಟ್ಟು ಬಿಜೆಪಿ ಚೇತರಿಸಿಕೊಳ್ಳುತ್ತಿರುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ.
ಉಪಚುನಾವಣೆ ಮುಂದಿನ ದಿನಗಳಲ್ಲಿ ಒಂದಷ್ಟು ರಾಜಕೀಯ ಬೆಳವಣಿಗೆಗೂ ದಾರಿ ಮಾಡಿಕೊಟ್ಟಿದ್ದು, ಇದನ್ನು ಮೂರು ಪಕ್ಷಗಳು ಯಾವ ರೀತಿಯಲ್ಲಿ ಬಳಸಿಕೊಂಡು ತಮ್ಮ ಪಾರುಪತ್ಯವನ್ನು ಸಾಧಿಸುತ್ತವೆ ಎಂಬುದನ್ನು ನಾವು ನೋಡಬೇಕಾಗಿದೆ.
5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು?
ಇವತ್ತು ಎಲ್ಲ ಪಕ್ಷಗಳು ಒಗ್ಗಟ್ಟಾಗಿ ಬಿಜೆಪಿಯನ್ನು ಸದೆಬಡಿಯಲು ಹೊರಟಿರುವುದನ್ನು ನೋಡಿದರೆ ಬಿಜೆಪಿ ಇನ್ನು ಕೂಡ ಭದ್ರವಾಗಿದೆ ಎಂಬ ಅರ್ಥವನ್ನು ನೀಡುತ್ತಿದೆ. ಜತೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಹೋದರೆ ಬಿಜೆಪಿಯನ್ನು ಮಟ್ಟ ಹಾಕಬಹುದು ಎಂಬುದು ಕೂಡ ಉಪಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಭ್ರಮೆಯಂತೆ ಗೋಚರಿಸುತ್ತಿದೆ.
ಎರಡು ಪಕ್ಷಗಳು ಒಟ್ಟಾಗಿ ಹೋದುದರಿಂದಲೇ ಉಪ ಚುನಾವಣೆಯ ಗೆಲುವು ಸಾಧ್ಯವಾಯಿತು ಎಂಬುದು ನಿಜವೇ ಆಗಿದ್ದರೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರು ಸುಲಭವಾಗಿ ಗೆಲ್ಲಬೇಕಿತ್ತು. ಆದರೆ ಅದ್ಯಾವುದೂ ಆಗಲೇ ಇಲ್ಲ ಎಂಬುದು ಇಲ್ಲಿ ಗೊತ್ತಾಗುತ್ತಿದೆ.
ಕಾಂಗ್ರೆಸ್-ಜೆಡಿಎಸ್ ಗೆದ್ದಿದ್ದು ಮೈತ್ರಿಯಿಂದಲ್ಲ, ಸ್ವಂತ ಬಲದಿಂದ, ಇಲ್ಲಿದೆ ವಿಶ್ಲೇಷಣೆ
ಇಷ್ಟಕ್ಕೂ ಜೆಡಿಎಸ್ ಪ್ರಾಬಲ್ಯವಿದ್ದ ಸ್ಥಳದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಾಬಲ್ಯವಿದ್ದಲ್ಲಿ ಕಾಂಗ್ರೆಸ್ ಗೆದ್ದಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್, ಮಂಡ್ಯದಲ್ಲಿ ಬಿಜೆಪಿ ಚೇತರಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಪಾರುಪತ್ಯೆ ಸಾಧಿಸಿದ ಖುಷಿಯಲ್ಲಿರುವಾಗಲೇ ಮಂಡ್ಯದಲ್ಲಿ ಬಿಜೆಪಿ ಚೇತರಿಸಿಕೊಳ್ಳುತ್ತಿರುವ ಸೂಚನೆ ನೀಡಿದ್ದು, ಅದಕ್ಕೆ ಕಾರಣ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಅಭ್ಯರ್ಥಿ ಎರಡು ಲಕ್ಷಕ್ಕೂ ಹೆಚ್ಚು ಮತ ಪಡೆದಿರುವುದೇ ಸಾಕ್ಷಿಯಾಗಿದೆ.
ಮಂಡ್ಯದಲ್ಲಿ ಚೇತರಿಸಿಕೊಂಡ ಬಿಜೆಪಿ
ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಬಹುಶಃ ಶಿವರಾಮೇಗೌಡರು ಮಾತ್ರವಲ್ಲ ಅಲ್ಲಿ ಜೆಡಿಎಸ್ ನಿಂದ ಯಾರೇ ಸ್ಪರ್ಧಿಸಿದ್ದರೂ ಗೆಲುವು ಖಚಿತವಾಗಿತ್ತು. ಆದರೆ ಇಲ್ಲಿ ಕಾಂಗ್ರೆಸ್ ನಾಯಕರು ಮಾನಸಿಕವಾಗಿ ಇನ್ನೂ ಕೂಡ ಜೆಡಿಎಸ್ ನೊಂದಿಗೆ ಹೊಂದಾಣಿಕೆಯಾಗಿಲ್ಲ ಎಂಬುದು ಇತ್ತೀಚೆಗಿನ ಬೆಳವಣಿಗೆಯಿಂದ ಎಲ್ಲರಿಗೂ ಗೊತ್ತಾಗಿ ಹೋಗಿದೆ.
ಇನ್ನು ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಮುಂದುವರೆದಿದ್ದೇ ಆದಲ್ಲಿ ಕಾಂಗ್ರೆಸ್ ಮಂಡ್ಯದಲ್ಲಿ ಗೌಣವಾಗುವುದರೊಂದಿಗೆ ಬಿಜೆಪಿ ಇನ್ನಷ್ಟು ಬಲಿಷ್ಠಗೊಳ್ಳುತ್ತದೆ ಎಂಬ ಭಯವೂ ಇದೀಗ ಕಾಂಗ್ರೆಸ್ನ ಹಿರಿಯ ನಾಯಕರನ್ನು ಕಾಡತೊಡಗಿದೆ.
ಉಪಚುನಾವಣೆಯ ಗೆಲುವೇ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಹೇಳುವುದು ಕಷ್ಟ ಸಾಧ್ಯ. ಇದೀಗ ಬಳ್ಳಾರಿಯಲ್ಲಿ ಬಿಜೆಪಿ ಮುಗ್ಗರಿಸಿದರೂ ಮಂಡ್ಯದಲ್ಲಿ ಚೇತರಿಸಿಕೊಂಡಿರುವುದು ಕಾಣುತ್ತಿದೆ.
ಲೆಕ್ಕಾಚಾರದಲ್ಲಿ ಬಿಜೆಪಿ
ಹೀಗಾಗಿ ಇನ್ನು ಆರೇಳು ತಿಂಗಳಲ್ಲಿ ರಾಜಕೀಯ ವಾತಾವರಣವೇ ಬದಲಾಗುವುದರಿಂದ ಮತ್ತು ಮೈತ್ರಿ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಗಳು ಜಟಿಲವಾಗುವುದರಿಂದಾಗಿ ಜತೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವುದರಿಂದ ಬಂಡಾಯ ಏಳುವ ಸಾಧ್ಯತೆಯೂ ಇರುವುದರಿಂದ ಅದನ್ನು ಬಿಜೆಪಿ ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗುವುದರಿಂದಾಗಿ ಜತೆಗೆ ದೇವೇಗೌಡರ ಕುಟುಂಬದ ಎರಡನೇ ತಲೆಮಾರು ಚುನಾವಣಾ ಕಣಕ್ಕೆ ಇಳಿಯುವ ಲಕ್ಷಣಗಳು ಕಂಡು ಬರುತ್ತಿರುವುದರಿಂದಾಗಿ ಒಂದಷ್ಟು ಗೊಂದಲಗಳು ಮೈತ್ರಿ ಪಕ್ಷದಲ್ಲಿ ಕಾಣುವುದಂತು ನಿಶ್ಚಿತ.
ಇದನ್ನು ಬಳಸಿಕೊಂಡು ಪಕ್ಷ ಸಂಘಟನೆಯನ್ನು ಹೇಗೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರಿದ್ದಾರೆ.
ಉಪಚುನಾವಣೆಯಲ್ಲಿ ಸೋತ ಬಿಜೆಪಿ ಲೋಕಸಭೆ ಚುನಾವಣೆಯಲ್ಲೂ ಸೋಲುತ್ತದೆಯೇ?
ಮತ್ತೊಮ್ಮೆ ಪ್ರಧಾನಿಯಾಗುವ ವಿಶ್ವಾಸ
ಈಗಾಗಲೇ ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತಂತ್ರಗಳು ಕರ್ನಾಟಕದಲ್ಲಿ ನಡೆಯಲಿಲ್ಲ ಎಂಬುದು ವಿಧಾನಸಭಾ ಚುನಾವಣೆಯಲ್ಲಿಯೇ ಸಾಬೀತಾಗಿದೆ. ಅವತ್ತು ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸಿದ್ದವು. ಆದರೆ ಈಗಿನ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿವೆ ಎರಡು ಪಕ್ಷಗಳು ಒಂದಾಗಿ ಬಿಜೆಪಿಯನ್ನು ಎದುರಿಸಲು ಸಜ್ಜಾಗಿವೆ.
ಹೀಗಿರುವಾಗ ಕಳೆದ ಬಾರಿಯಷ್ಟು ಸ್ಥಾನಗಳನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಡೆಯುವುದು ಬಿಜೆಪಿಗೆ ಕಷ್ಟವೇ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದು ಒಂದಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಪ್ರಿಯತೆಯನ್ನು ಮತವನ್ನಾಗಿ ಬದಲಾಯಿಸುವ ಚಿಂತನೆಯಲ್ಲಿದೆ.
ಆದರೆ ಮೋದಿ ಟೀಮ್ ಯಾವ ತಂತ್ರಗಳನ್ನು ತನ್ನ ಬಗಲಲ್ಲಿಟ್ಟುಕೊಂಡಿದೆಯೋ ಗೊತ್ತಿಲ್ಲ. ಇಡೀ ದೇಶದ ಪಕ್ಷಗಳೆಲ್ಲವೂ ಬಿಜೆಪಿ ವಿರುದ್ಧ ಎನ್ನುವುದಕ್ಕಿಂತಲೂ ಮೋದಿ ವಿರುದ್ಧ ಕತ್ತಿಮಸೆಯುತ್ತಿದ್ದು, ಎಲ್ಲರೂ ಒಂದಾಗಿ ಹಣಿಯಲು ಪ್ರಯತ್ನಿಸುತ್ತಿರುವುದು ಗೊತ್ತಿಲ್ಲದ ವಿಚಾರವೇನಲ್ಲ. ಇದೆಲ್ಲವನ್ನು ಎದುರಿಸಿ ಮತ್ತೊಮ್ಮೆ ಪ್ರಧಾನಿ ಆಗುತ್ತೇನೆ ಎಂಬ ವಿಶ್ವಾಸ ಮೋದಿಯಲ್ಲಿದೆ.
ದೇವೇಗೌಡರು ಸಾರಥ್ಯ ವಹಿಸಿಕೊಳ್ಳುತ್ತಾರಾ?
ಹಾಗಿದ್ದರೆ ಮೋದಿ ಚುನಾವಣೆ ಕೆಲವೇ ತಿಂಗಳು ಇರುವಾಗ ಯಾವ ರೀತಿಯ ಗಿಮಿಕ್ ಮಾಡಬಹುದು ಮತ್ತು ಅದನ್ನು ಹಿಡಿದುಕೊಂಡು ರಾಜ್ಯ ನಾಯಕರು ಮತದಾರರತ್ತ ಯಾವ ರೀತಿಯಲ್ಲಿ ಹೋಗಬಹುದು ಎಂಬುದು ಕೂಡ ಕುತೂಹಲ ಮೂಡಿಸಿದೆ.
ಮೋದಿ ವಿರುದ್ಧ ದೇಶದಾದ್ಯಂತ ಇರುವ ಪ್ರಾದೇಶಿಕ ಪಕ್ಷಗಳು ಒಂದಾಗುವ ಎಲ್ಲ ಸೂಚನೆಗಳು ಕಂಡು ಬರುತ್ತಿದ್ದು ಅದರ ನೇತೃತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದೇ ಮುಖ್ಯವಾಗಲಿದೆ.
ಮಾಜಿ ಪ್ರಧಾನಿ ದೇವೇಗೌಡರು ಸಾರಥ್ಯ ವಹಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಯೂ ಮೇಲೆದ್ದಿದೆ. ಅದು ಏನೇ ಇರಲಿ ಇದೀಗ ಉಪಚುನಾವಣೆಯ ಗೆಲುವಿನಲ್ಲಿ ಮೈತ್ರಿ ಪಕ್ಷಗಳು ಮೈಮರೆತರೆ ಅದರ ಲಾಭಪಡೆಯಲು ಬಿಜೆಪಿ ಕಾಯುತ್ತಿದೆ ಎನ್ನುವುದಂತು ಸತ್ಯ.