ಮಂಡ್ಯದಲ್ಲಿ ಕಮಲ ಅರಳಿಸಲು ನಡೆಯುತ್ತಿದೆ ಏನೆಲ್ಲಾ ಕಸರತ್ತು!
ಮಂಡ್ಯ, ಡಿಸೆಂಬರ್ 3: ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ ಕಮಲವನ್ನು ಅರಳಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ನಡೆಯುತ್ತಿರುವ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೂಲಕ ಕಮಲ ಅರಳಿಸಲೇಬೇಕೆಂಬ ಹಠಕ್ಕೆ ಬಿಜೆಪಿ ನಾಯಕರು ಬಿದ್ದಿದ್ದಾರೆ.
ಈ ಚುನಾವಣೆ ಬಿಜೆಪಿ ನಾಯಕರಿಗೆ ಪ್ರತಿಷ್ಠೆ ಮತ್ತು ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯೂ ಆಗಿದೆ. ಜತೆಗೆ ಮಂಡ್ಯದಲ್ಲಿ ಕಮಲ ಅರಳಿಸಲು ಸಿಕ್ಕ ಅವಕಾಶವೂ ಹೌದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾರಾಯಣ ಗೌಡರಿಗೆ ಮಾತ್ರ ಇದು ತಮ್ಮ ರಾಜಕೀಯ ಭವಿಷ್ಯದ ಅಗ್ನಿಪರೀಕ್ಷೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಕೈ-ದಳ ಗುದ್ದಾಟ ಬಿಜೆಪಿಗೆ ವರದಾನ?
ಹಾಗೆ ನೋಡಿದರೆ ಇಡೀ ಬಿಜೆಪಿ ನಾಯಕರ ದಂಡೇ ನಾರಾಯಣಗೌಡರ ಬೆಂಬಲಕ್ಕೆ ನಿಂತಿದೆ. ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಜಯೇಂದ್ರ ಮತ್ತು ಡಿಸಿಎಂ ಅಶ್ವಥ್ ನಾರಾಯಣ ಅವರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಗೆಲುವಿಗೆ ಏನೆಲ್ಲ ತಂತ್ರಗಳನ್ನು ಮಾಡಬೇಕೋ ಅದೆಲ್ಲವನ್ನು ಮಾಡುತ್ತಿದ್ದಾರೆ. ಜತೆಗೆ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿಹೋಗಿದ್ದಾರೆ. ಜತೆಗೆ ಕೆ.ಆರ್.ಪೇಟೆ ಅಭಿವೃದ್ಧಿಗೆ ಕಾರ್ಯಸೂಚಿಗಳನ್ನು ನೀಡಿದ್ದಾರೆ.
15 ಕ್ಷೇತ್ರದ ಉಪ ಚುನಾವಣೆ; ಬಿಜೆಪಿ ಆಂತರಿಕ ಸಮೀಕ್ಷೆ ವರದಿ
ಇದೀಗ ಚುನಾವಣೆಗೆ ಮೂರು ದಿನ ಇರುವಂತೆಯೇ ಕೆ.ಆರ್.ಪೇಟೆಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಚುನಾವಣಾ ಗಿಮಿಕ್. ಇಲ್ಲಿ ಇದುವರೆಗೆ ಬಿಜೆಪಿ ಮೂರನೇ ಸ್ಥಾನದಲ್ಲಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಹಿಂದಿನಿಂದಲೂ ರಾಜಕೀಯ ಬದ್ಧ ವೈರಿಗಳಾಗಿಯೇ ಚುನಾವಣೆಗಳನ್ನು ಎದುರಿಸಿಕೊಂಡು ಬಂದಿದ್ದಾರೆ. ಇದೀಗ ಸಂಸದೆ ಸುಮಲತಾ ಅವರ ಮೌನ ಯಾರಿಗೆ ವರದಾನವಾಗುತ್ತೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಗುದ್ದಾಟ ಬಿಜೆಪಿಗೆ ವರದಾನವಾಗುತ್ತಾ? ಜನ ಪಕ್ಷ ನೋಡಿ ಮತ ಹಾಕುತ್ತಾರಾ? ಅಭ್ಯರ್ಥಿಗಳನ್ನು ನಂಬಿ ಮತ ಹಾಕುತ್ತಾರಾ? ಅಥವಾ ಮತ್ತೆ ಅತಂತ್ರ ಪರಿಸ್ಥಿತಿ ರಾಜ್ಯದಲ್ಲಿ ಬರುವುದು ಬೇಡ ಎಂಬ ಕಾರಣಕ್ಕೆ ಬಿಜೆಪಿಯನ್ನು ಬೆಂಬಲಿಸುತ್ತಾರಾ? ಹೀಗೆ ಹತ್ತಾರು ಪ್ರಶ್ನೆಗಳು ಕಾಡುತ್ತಿವೆ.
ಹರಿದು ಬರುತ್ತಿದೆ ಭರವಸೆಗಳ ಮಹಾಪೂರ
ಮೂರು ಪಕ್ಷಗಳ ನಾಯಕರು ಹಠಕ್ಕೆ ಬಿದ್ದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ತುಸು ಜಾಸ್ತಿ ಎಂಬಂತೆ ಬಿಜೆಪಿ ಪ್ರಚಾರ ನಡೆಸಿದೆ. ಪಕ್ಷದ ಎಲ್ಲ ಸಮುದಾಯದ ನಾಯಕರು ಬಂದು ಹೋಗಿದ್ದಾರೆ. ಕೆಲವು ನಾಯಕರಂತು ಮಾತಿನ ಭರದಲ್ಲಿ ಒಂದಷ್ಟು ಅಸಂಬದ್ಧ ಹೇಳಿಕೆಗಳನ್ನು ನೀಡಿ ಅಸಹ್ಯ ಮೂಡಿಸಿದ್ದಾರೆ.
ಇದೆಲ್ಲದರ ನಡುವೆ ಮೂರು ಪಕ್ಷಗಳ ನಾಯಕರಿಂದ ಕ್ಷೇತ್ರದ ಜನಕ್ಕೆ ಭರವಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕೂಡ ಆಗಿನ ಸರ್ಕಾರ ಭರವಸೆಯ ಮಹಾಪೂರವನ್ನೇ ಹರಿಸಿತ್ತು. ಹತ್ತಾರು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಆತುರಾತುರವಾಗಿ ಭೂಮಿ ಪೂಜೆ ಮಾಡಿ ಮುಗಿಸಿತ್ತು. ಆದರೆ ಅದೆಷ್ಟು ಯೋಜನೆಗಳು ಜನಕ್ಕೆ ತಲುಪಿವೆ ಎನ್ನುವುದು ಅಲ್ಲಿಗೆ ನೋಡಿದವರಿಗೆ ಗೊತ್ತಾಗುತ್ತದೆ.
ಕೆ.ಆರ್.ಪೇಟೆ ಅಭಿವೃದ್ಧಿಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ?
ಇದೀಗ ಕೆ.ಆರ್.ಪೇಟೆ ಕ್ಷೇತ್ರದ ಪರಿಸ್ಥಿತಿ ಭಿನ್ನವಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ನೂರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಮಂಡ್ಯಕ್ಕೆ ಘೋಷಣೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಅದ್ಯಾವುದೂ ಲೆಕ್ಕಕ್ಕೆ ಬರಲೇ ಇಲ್ಲ. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾನು ನಿಮ್ಮ ತಾಲೂಕಿನವನು ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ಭಾವಿಸಿ ನಾರಾಯಣ ಗೌಡರನ್ನು ಗೆಲ್ಲಿಸಿಕೊಡಿ ಎಂದು ಮತದಾರರ ಮುಂದೆ ಅಂಗಲಾಚಿಸುತ್ತಿದ್ದಾರೆ.
ನವ ಕೆಆರ್ ಪೇಟೆ ನಿರ್ಮಾಣ: ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ
ಕೆ.ಆರ್.ಪೇಟೆ ತಾಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರನ್ನು ಗೆಲ್ಲಿಸುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಉಳಿದ ಮೂರೂವರೆ ವರ್ಷಗಳ ಕಾಲ ಕೆಲಸ ಮಾಡಲು ಶಕ್ತಿ ತುಂಬಿ ಎಂದು ಬಿಜೆಪಿ ನಾಯಕರು ಕೇಳಿಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ಕೆ.ಆರ್.ಪೇಟೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎನ್ನುವ ಮೂಲಕ ಅಭಿವೃದ್ಧಿಗೆ ಏನೆಲ್ಲ ಬೇಕೋ ಅದೆಲ್ಲವನ್ನು ಸೇರಿಸಿ ಇದೀಗ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿ ಮತದಾರರ ಮುಂದಿಟ್ಟಿದ್ದಾರೆ. ಅದು ಫಲಪ್ರದವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅದೊಂದು ತಂತ್ರ ಎಂಬುದಂತು ನಿಜ.
ಕೆ.ಸಿ.ನಾರಾಯಣಗೌಡರು ರಾಜೀನಾಮೆ ನೀಡಿದ್ದೇಕೆ?
ಮಂಡ್ಯ ಜಿಲ್ಲೆಯಲ್ಲಿಯೇ ಕೆ.ಆರ್.ಪೇಟೆ ತಾಲೂಕು ಅಭಿವೃದ್ದಿ ಕೆಲಸ ಕಾರ್ಯಗಳಿಂದ ವಂಚಿತವಾದ ತಾಲೂಕು ಅಂತೆ. ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಮಲತಾಯಿಧೋರಣೆ ತೋರಿದ್ದರಿಂದ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರಾಗಿದ್ದ ಕೆ.ಸಿ.ನಾರಾಯಣಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಆಶಯಗಳನ್ನು ಈಡೇರಿಸುವ ಸಲುವಾಗಿಯೇ ನವ ಕೃಷ್ಣರಾಜಪೇಟೆ ನಿರ್ಮಾಣ ಪ್ರಣಾಳಿಕೆಯನ್ನು ಹೊರತರಲಾಗಿದೆ ಎಂಬುದು ಬಿಜೆಪಿ ನಾಯಕರು ನೀಡುತ್ತಿರುವ ಸಮಜಾಯಿಷಿ.
ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಮದ್ಯದ ಹೊಳೆ
ಅದು ಏನೇ ಇರಲಿ. ಮೂರು ಪಕ್ಷಗಳ ನಾಯಕರ ಹೇಳಿಕೆ ಮತ್ತು ಪ್ರಸ್ತುತ ಪರಿಸ್ಥಿತಿ ಎಲ್ಲವನ್ನು ಗಮನಿಸುತ್ತಿರುವ ಮತದಾರರು ಏನು ನಿರ್ಧಾರ ಮಾಡುತ್ತಾರೆ ಎಂಬುದು ಫಲಿತಾಂಶ ಬಂದ ಬಳಿಕವೇ ಗೊತ್ತಾಗಲಿದೆ. ಅಲ್ಲಿ ತನಕ ಕಾಯುವುದು ಅನಿವಾರ್ಯವಾಗಿದೆ.