ಅಲುಗಾಡಿದ ಜೆಡಿಎಸ್ ಭದ್ರಕೋಟೆ; ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ಜೆಡಿಎಸ್ ಟಾರ್ಗೆಟ್!
ಮಂಡ್ಯ, ಜನವರಿ 24: ಜೆಡಿಎಸ್ ಭದ್ರಕೋಟೆ ನಿಧಾನವಾಗಿ ಅಲುಗಾಡುತ್ತಿದೆ. ಕೆ.ಆರ್.ಪೇಟೆಯಲ್ಲಿ ಪಕ್ಷ ನಿಷ್ಠೆ ತೋರಿದ್ದ ಕೆಲವು ಕಾರ್ಯಕರ್ತರು ಈಗ ಕಾಂಗ್ರೆಸ್ ಮತ್ತು ಬಿಜೆಪಿಯತ್ತ ಮುಖ ಮಾಡತೊಡಗಿದ್ದಾರೆ.
ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ನಾರಾಯಣ ಗೌಡರು ಜೆಡಿಎಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಜೆಡಿಎಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆಯಿಟ್ಟಿತು. ಜೆಡಿಎಸ್ ನಾಯಕರಿಗೆ ಬಲವಾದ ಶಾಕ್ ನೀಡಿಬಿಟ್ಟರು. ಕಾರ್ಯಕರ್ತರು ತಮ್ಮೊಂದಿಗಿದ್ದಾರೆ, ಪಕ್ಷವನ್ನು ಬೆಳೆಸಿದ್ದಾರೆ. ನಮ್ಮನ್ನು ಕೈ ಬಿಡುವುದಿಲ್ಲ. ಜತೆಗೆ ಒಂದು ಸಮುದಾಯ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತಿರುವುದರಿಂದ ಜೆಡಿಎಸ್ ಸೋಲುವ ಮಾತೇ ಇಲ್ಲ ಎಂದು ಎಚ್.ಡಿ.ಕುಮಾರಸ್ವಾಮಿಯಾದಿಯಾಗಿ ದೇವೇಗೌಡರು ಕೂಡ ನಂಬಿದ್ದರು. ಆದರೆ ಚುನಾವಣೆಯ ಫಲಿತಾಂಶ ಬಂದ ಬಳಿಕ ಜೆಡಿಎಸ್ ನಾಯಕರ ನಂಬಿಕೆ ಹುಸಿಯಾಗಿತ್ತು.
ಸಂಘಟನೆಯತ್ತ ಚಿತ್ತ ಹರಿಸಿದ ಚಂದ್ರಶೇಖರ್
ಇದೆಲ್ಲದರ ನಡುವೆ ಉಪ ಚುನಾವಣೆಯ ನಂತರ ಕೆ.ಆರ್.ಪೇಟೆಯಲ್ಲಿ ಒಂದಷ್ಟು ರಾಜಕೀಯ ಬೆಳವಣಿಗೆಗಳಾಗುತ್ತಿವೆ. ಬಿಜೆಪಿ ಇಲ್ಲಿ ಗಟ್ಟಿಯಾಗಿ ನೆಲೆಯೂರಲು ಬೇಕಾದ ತಂತ್ರಗಳನ್ನು ನಾಯಕರು ಮಾಡುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಅವರು ಕೂಡ ಸುಮ್ಮನೆ ಕುಳಿತಿಲ್ಲ. ಒಂದಷ್ಟು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಗಾಳ ಹಾಕಿ ಕಾಂಗ್ರೆಸ್ಗೆ ಸೇರ್ಪಡೆಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಸೋಲಿನಿಂದ ಕಂಗಾಲಾಗಿರುವ ಜೆಡಿಎಸ್ ನಾಯಕರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಸೋಲಿಗೆ "ಒಳೇಟು" ಕಾರಣವಂತೆ
ಅಖಾಡಕ್ಕಿಳಿದ ಚಂದ್ರಶೇಖರ್?
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕಾಂಗ್ರೆಸ್ನಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಪ್ರಭಾವಿ ವ್ಯಕ್ತಿಯೇ. ಆದರೆ ಕಳೆದ ಉಪಚುನಾವಣೆಯಲ್ಲಿ ಸೋಲು ಕಂಡಿರುವ ಕಾರಣ ಪಕ್ಷದಲ್ಲಿ ಮೂಲೆ ಗುಂಪಾದರೂ ಅಚ್ಚರಿಯಿಲ್ಲ. ಇದನ್ನು ತಪ್ಪಿಸುವ ಸಲುವಾಗಿಯೇ ಚಂದ್ರಶೇಖರ್ ಅವರು ಅಖಾಡಕ್ಕಿಳಿದಿದ್ದಾರೆ. ಒಂದಷ್ಟು ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಗೆ ಆಶಾಭಾವ- ಜೆಡಿಎಸ್ ಗೆ ಆಘಾತ
ಇದೀಗ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಾಬಲ್ಯವನ್ನು ತೋರಿಸುವುದು ಚಂದ್ರಶೇಖರ್ ಅವರಿಗೆ ಅನಿವಾರ್ಯವಾಗಿದೆ. ಹೀಗಾಗಿ ಅವರು ಜೆಡಿಎಸ್ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುತ್ತಿದ್ದು, ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಕೆ.ಬಿ.ಚಂದ್ರಶೇಖರ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಎ.ಎಸ್.ಗೋಪಾಲ್, ಅಶೋಕ್ ಹಾಗೂ ಬೊಮ್ಮನಾಯಕನಹಳ್ಳಿಯ ಬಿ.ವಿ.ಶ್ರೀನಿವಾಸ್ ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಇದು ಕಾಂಗ್ರೆಸ್ಗೆ ಆಶಾಭಾವ ಮೂಡಿಸಿದ್ದರೆ ಜೆಡಿಎಸ್ ಗೆ ಮಾತ್ರ ಆಘಾತವಾಗಿದೆ.
ಕೈ-ಕಮಲಕ್ಕೆ ಜೆಡಿಎಸ್ ಟಾರ್ಗೆಟ್
ಬೂತ್ ಮಟ್ಟದಿಂದಲೇ ಜೆಡಿಎಸ್ ಅನ್ನು ಟಾರ್ಗೆಟ್ ಮಾಡುತ್ತಿರುವ ಕಾಂಗ್ರೆಸ್ ಸಂಘಟನೆಯನ್ನು ಬಲಗೊಳಿಸುತ್ತಿದೆ. ಇಲ್ಲಿ ಬಿಜೆಪಿ ನಾಯಕರು ಕೂಡ ಸುಮ್ಮನೆ ಕುಳಿತಿಲ್ಲ. ಅವರು ಕೂಡ ಜೆಡಿಎಸ್ ಅನ್ನೇ ಗುರಿಯಾಗಿಸಿಕೊಂಡು ಪಕ್ಷದ ಬೆಳವಣಿಗೆಗಾಗಿ ತಂತ್ರ ಹೆಣೆಯುತ್ತಿದೆ. ಎರಡು ಪಕ್ಷಗಳು ಜೆಡಿಎಸ್ ಅನ್ನೇ ಹಣಿಯಲು ಮುಂದಾಗಿರುವುದರಿಂದ ಜೆಡಿಎಸ್ ನಾಯಕರು ಇದನ್ನು ಹೇಗೆ ಎದುರಿಸುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ.