20 ವರ್ಷಗಳ ನಂತರ ನೀರು ಕಂಡಿತು ಭೀಮಾ ಜಲಾಶಯ
ಮಂಡ್ಯ, ಡಿಸೆಂಬರ್ 16: ಈ ಬಾರಿ ಕೊಡಗು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾದ ಪರಿಣಾಮ ಕೆ.ಆರ್.ಎಸ್ ಜಲಾಶಯ ಬಹು ಬೇಗ ಭರ್ತಿಯಾಗಿ ಇಂದಿಗೂ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡು ಬಂದಿದೆ. ಇದರ ಜತೆಗೆ ಹಿಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಮಂಡ್ಯದಲ್ಲಿದ್ದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಮತ್ತೆ ಕೆಲವು ಕೆರೆಗಳಿಗೆ ನೀರನ್ನು ತುಂಬಿಸಲಾಗಿದೆ.
ಈ ನಡುವೆ ಭೀಮಾ ಜಲಾಶಯವನ್ನು ನದಿಯಿಂದ ನೀರು ಹರಿಸುವ ಮೂಲಕ ತುಂಬಿಸಲಾಗುತ್ತಿದ್ದು, ಇದು ಈ ವ್ಯಾಪ್ತಿಯ ರೈತರಲ್ಲಿ ಸಂತಸ ಮೂಡಿಸಿದೆ.
9 ವರ್ಷಗಳ ನಂತರ 100 ಅಡಿ ಮುಟ್ಟಿತು ವಿವಿ ಸಾಗರ ಜಲಾಶಯ
ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯಲ್ಲಿರುವ ಭೀಮಾ ಜಲಾಶಯ ಕಳೆದ ಎರಡು ದಶಕಗಳಿಂದ ತುಂಬಿರಲಿಲ್ಲ. ಈ ಜಲಾಶಯಕ್ಕೆ ನೀರು ತುಂಬಿಸಬೇಕಾದರೆ ಇದರ ಸುತ್ತಮುತ್ತ ಇರುವ ಕೆರೆಗಳು ಭರ್ತಿಯಾಗುವಂತಹ ಮಳೆ ಬರಬೇಕಿತ್ತು. ಆದರೆ ಅದ್ಯಾವುದೂ ಕಳೆದ ಇಪ್ಪತ್ತು ವರ್ಷಗಳಿಂದ ಆಗಿರಲಿಲ್ಲ. ಆದರೆ ಈ ಬಾರಿ ಈ ಜಲಾಶಯಕ್ಕೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈಗಾಗಲೇ ಮಂಡ್ಯ ಜಿಲ್ಲೆಯ ಮೂಲಕ ಹರಿಯುವ ಶಿಂಷಾ ನದಿಯಿಂದ ಕನಕಪುರ ತಾಲೂಕಿನಾದ್ಯಂತ ಹಲವಾರು ಕೆರೆಗಳಿಗೆ ನೀರನ್ನು ತುಂಬಿಸಲಾಗಿದ್ದು ಅಲ್ಲಿನ ಬಹುತೇಕ ಕೆರೆಗಳು ಭರ್ತಿಯಾಗಿರುವ ಕಾರಣ ಸಾತನೂರು ಹೋಬಳಿಯ ಕೆಂಪೇಗೌಡ ದೊಡ್ಡಿಯ ಕೆರೆಯು ತುಂಬಿ ಹರಿಯುತ್ತಿದ್ದು ಆ ನೀರು ಹಲಗೂರು ಹೋಬಳಿಯ ಭೀಮಾ ಜಲಾಶಯಕ್ಕೆ ಹರಿದು ಬರುತ್ತಿದೆ.
ಜಲಾಶಯ ನಿರ್ಮಾಣವಾದ ಬಳಿಕ ಒಂದಲ್ಲ ಒಂದು ರೀತಿಯ ಅಡೆತಡೆಗಳಿಂದಾಗಿ ಈ ಜಲಾಶಯಕ್ಕೆ ನೀರು ಹರಿಸುವ ಕೆಲಸ ನಡೆದಿರಲಿಲ್ಲ. ನಿರ್ವಹಣೆಯೂ ಸರಿಯಿಲ್ಲದೆ, ಗಿಡಗಂಟಿಗಳು ಬೆಳೆದಿದ್ದವು. ಜತೆಗೆ ಸುಮಾರು ಇಪ್ಪತ್ತು ವರ್ಷಗಳಿಂದ ನಿರ್ವಹಣೆ ಮಾಡದೆ ತೂಬು ತುಕ್ಕು ಹಿಡಿದಿದ್ದು, ಸಂಗ್ರಹವಾಗುತ್ತಿದ್ದ ಅಲ್ಪಸ್ವಲ್ಪ ನೀರು ಕೂಡ ಸೋರಿಕೆಯಾಗುತ್ತಿತ್ತು.
ನೀರೇ ಮಾಯವಾಗಿದ್ದ ಚಿತ್ರದುರ್ಗದಲ್ಲೀಗ ಭರ್ಜರಿ ಮಳೆ; 81 ಅಡಿ ಮುಟ್ಟಿದ ವಿವಿ ಸಾಗರ
ಭೀಮಾ ಜಲಾಶಯದಲ್ಲಿ ನೀರು ಸಂಗ್ರಹವಾಗಿದ್ದೇ ಆದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಲಿದ್ದು, ರೈತರಿಗೆ ಅನುಕೂಲವಾಗಲಿದೆ. ಜತೆಗೆ ಜನಜಾನುವಾರಿಗೆ ನೀರು ದೊರೆಯಲಿದೆ. ಸುತ್ತಲಿನ ಪ್ರದೇಶ ಹಸಿರಿನಿಂದ ಕಂಗೊಳಿಸಲಿದೆ.