ಬಂದ್ : ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಅನುಮಾನ
ಮಂಡ್ಯ, ಜನವರಿ 07 : 'ಅನೇಕ ಸಂಘ ಸಂಸ್ಥೆಗಳು ಜನವರಿ 8 ಮತ್ತು 9ರಂದು ಬಂದ್ ಕರೆ ನೀಡಿವೆ. ಹೀಗಾಗಿ ಸಾರಿಗೆ ಇಲಾಖೆಯ ನೌಕರರು ಸಹ ಸಹಕಾರ ನೀಡುತ್ತಾರೆ' ಎಂದು ಕರ್ನಾಟಕದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಸೋಮವಾರ ಮದ್ದೂರಿನಲ್ಲಿ ಮಾತನಾಡಿದ ಡಿ.ಸಿ.ತಮ್ಮಣ್ಣ ಅವರು, 'ಸರ್ಕಾರ ಬಂದ್ಗೆ ಬೆಂಬಲ ನೀಡುತ್ತದೆ ಎಂದು ಹೇಳುತ್ತಿಲ್ಲ. ಕಾರ್ಮಿಕರ ಹಿತದೃಷ್ಟಿಯಿಂದ ಅಖಿಲ ಭಾರತ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ನಾವು ಕೂಡ ಸಹಕರಿಸುತ್ತಿದ್ದೇವೆ' ಎಂದರು.
ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?
'ಮುಷ್ಕರದ ದಿನ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಬಸ್ ಸಂಚಾರ ನಡೆಸುವ ಕುರಿತು ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಆದರೆ, ಬಂದ್ ಇರುವುದಿಂದ ಸಾರಿಗೆ ವ್ಯವಸ್ಥೆ ಕಷ್ಟ' ಎಂದು ತಿಳಿಸಿದರು.
'ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಬಸ್ಗಳು ರಸ್ತೆಗೆ ಇಳಿಯಲಿವೆ. ಇಲ್ಲವಾದಲ್ಲಿ ಬಸ್ ಸಂಚಾರ ಇರುವುದಿಲ್ಲ' ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದರು.
ಜನವರಿ 8-9 ರಂದು ಭಾರತ್ ಬಂದ್ ಯಾಕಾಗಿ?
ಬಸ್ ಇಲ್ಲ : 'ಕೆ.ಎಸ್.ಆರ್.ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಸಂಚಾರ ಜನವರಿ 8 ಮತ್ತು 9ರಂದು ಸ್ಥಗಿತವಾಗಲಿದೆ' ಎಂದು ಸಿಐಟಿಯು ಉಪಾಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಚಿತ್ರ ಮಾಹಿತಿ: ಜ.8-9 ಭಾರತ್ ಬಂದ್: ಯಾವಸೇವೆ ಲಭ್ಯ? ಯಾವುದು ಅಲಭ್ಯ?
ಮೋಟಾರು ವಾಹನ ತಿದ್ದುಪಡಿ ಮಸೂದೆ 2017ಅನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನು ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಒತ್ತಾಯಿಸಿ ಎರಡು ದಿನದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.