ಮದ್ದೂರಿನಲ್ಲಿ ಭಕ್ತರ ಸೆಳೆದ ಬೆಟ್ಟದ ಅರಸಮ್ಮನವರ ಜಾತ್ರೆ
ಮಂಡ್ಯ, ಮಾರ್ಚ್ 11: ಬಸವನ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಬೆಟ್ಟದ ಅರಸಮ್ಮನ ಜಾತ್ರಾ ಮಹೋತ್ಸವವು ಮಂಗಳವಾರ ಅಪಾರ ಜನಸ್ತೋಮದೊಂದಿಗೆ ಸಡಗರ, ಸಂಭ್ರಮದಿಂದ ನಡೆಯಿತು.
ಮದ್ದೂರು ತಾಲೂಕಿನ ಹಲಗೂರು ಹೋಬಳಿಯ ಗುಂಡಾಪುರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಟ್ಟದರಸಮ್ಮನ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವರಗುಡ್ಡರು ಹೆಬ್ಬಾರೆಯನ್ನು ಬಾರಿಸುತ್ತಾ ಮುನ್ನಡೆದರು. ಅಲ್ಲದೆ ಕರಗಕ್ಕೆ ಚಾಮರಗಳನ್ನು ಬೀಸುತ್ತಾ ಛತ್ರಿ ಚಾಮರಗಳನ್ನು ಹಿಡಿದುಕೊಂಡು ಜೋಡಿ ಬಸವನ ಜೊತೆ ಮೆರವಣಿಗೆಯಲ್ಲಿ ಬೆಟ್ಟದರಸಮ್ಮನ ಸನ್ನಿದಿಗೆ ಕರಗವನ್ನು ಕೊಂಡೊಯ್ಯಲಾಯಿತು.
ಇದೇ ವೇಳೆ ಹರಕೆ ಹೊತ್ತ ಸಾವಿರಾರು ಭಕ್ತರು ಬಾಯಿಬೀಗ ಹಾಕಿಸಿಕೊಂಡರು. ಕಳಸ ಹೊತ್ತ ಮಹಿಳೆಯರು ಮುನ್ನಡೆದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಜಾತ್ರೆಗೆ ಬಂದಿದ್ದ ಭಕ್ತರಿಗೆ ಬಿಸಿಲ ದಾಹ ತಣಿಸಲು ಮಧ್ಯಾಹ್ನದಿಂದ ಸಂಜೆವರೆಗೆ ಪಾನಕ ವಿತರಣೆ ಮಾಡಲಾಯಿತು. ಹರಕೆ ಹೊತ್ತ ಭಕ್ತರು ಟ್ರ್ಯಾಕ್ಟರ್, ಎತ್ತಿನ ಗಾಡಿಯಲ್ಲಿ ಬೇಲದ ಹಣ್ಣಿನ ಪಾನಕ, ನಿಂಬೆ ಹಣ್ಣಿನ ಷರಬತ್ತು, ಮಜ್ಜಿಗೆಯನ್ನು ಜೊತೆಗೆ ಕೋಸಂಬರಿ, ಬಾಳೆಹಣ್ಣು ವಿತರಿಸಿದರು.
ಸಮೀಪದ ಬಾಳೆಹೊನ್ನಿಗ ಗ್ರಾಮಸ್ಥರ ಪೈಕಿ ಹರಕೆ ಹೊತ್ತವರು ವಿಭಿನ್ನವಾದ ಬಟ್ಟೆಗಳನ್ನು ತೊಟ್ಟು ಬೇವಿನ ಸೊಪ್ಪನ್ನು ಸೊಂಟಕ್ಕೆ ಕಟ್ಟಿಕೊಂಡು ತೆಂಗಿನ ಮಟ್ಟೆಯಿಂದ ತಯಾರಾದ ಕೋವಿ ಹಿಡಿದು ಗೋಣಿಚೀಲವನ್ನು ವಿವಿಧ ಆಕಾರಗಳಲ್ಲಿ ಹರಿದು ಧರಿಸಿ ಕುಣಿಯುತ್ತಾ ನೆರೆದ ಭಕ್ತರಿಗೆ ಮನರಂಜನೆ ನೀಡಿದರು. ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.