ಬೆಡ್ ಬ್ಲಾಕಿಂಗ್: ಸರಕಾರದ ವಿರುದ್ದ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ
ಮಂಡ್ಯ, ಮೇ 5: ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದ ಕುಮಾರಸ್ವಾಮಿ, "ಬೆಂಗಳೂರಿನಲ್ಲಿ ನಿನ್ನೆ ದೊಡ್ಡ ಡ್ರಾಮಾ ನಡೆಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಇಬ್ಬರು ಶಾಸಕರು ವಾರ್ ರೂಂಗೆ ನುಗ್ಗಿ ಡ್ರಾಮಾ ಮಾಡಿ ಅಗ್ಗದ ಪ್ರಚಾರ ಪಡೆಯಲು ಮುಂದಾಗಿದ್ದಾರೆ"ಎಂದು ಕುಮಾರಸ್ವಾಮಿ ಹೇಳಿದರು.
ತಮ್ಮದೇ ಸರಕಾರದ ವಿರುದ್ದ ಯುವ ಬಿಜೆಪಿ ನಾಯಕರ ಗುಡುಗು, ಅಸಲಿಯತ್ತು ಏನು?
"ಕೆಲವು ಮಾಧ್ಯಮ ಗಳು ಆತನನ್ನು ಬಾಹುಬಲಿ ಎಂದು ವೈಭವೀಕರಿಸಿವೆ. ನನ್ನ ಸರ್ಕಾರ ಕಿತ್ತು ಹಾಕುವಲ್ಲಿ ಯಶಸ್ವಿಯಾದ ಕೆಲ ಮಾಧ್ಯಮ ಸಂಪಾದಕರು, ಈಗ ನಿನ್ನೆಯಿಂದ ಕೊಲೆಗಡುಕ ಸರ್ಕಾರ ಎಂದು ಬಿಂಬಿಸುತ್ತಿದ್ದಾರೆ" ಎಂದು ಎಚ್ಡಿಕೆ ಟೀಕಿಸಿದರು.
"ಬೆಂಗಳೂರಿನಲ್ಲಿರುವ ವಾರ್ ರೂಂನಲ್ಲಿ ಮದರಸ ಮಾಡಲು ಹೊರಟಿದ್ದೀರಾ ಅಂತ ಆ ಸಂಸದ ಪ್ರಶ್ನೆ ಮಾಡಿದ್ದಾನೆ. ಇಲ್ಲಿ ಜನಗಳು ಸಾಯುತ್ತಿದ್ದಾರೆ. ಅಲ್ಲಿ ಹೋಗಿ ಇವರುಗಳು ರಾಜಕೀಯ ಮಾಡುತ್ತಿದ್ದಾರೆ. ಜಾತಿ ಇಲ್ಲಿ ಕೆಲಸ ಮಾಡಲ್ಲ, ಪ್ರಾಮಾಣಕತೆ ಮುಖ್ಯ. ಆಕ್ಸಿಜನ್ ಕೊರತೆ ಬಗ್ಗೆ ಜನಕ್ಕೆ ಸತ್ಯ ಹೇಳಬೇಕು"ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
ಕೋವಿಡ್ ವಾರ್ ರೂಂ ಫ್ರಾಡ್: ಹೆಣದ ಮೇಲಿನ ಹಣವನ್ನೂ ಬಿಡಲ್ವಲ್ರೋ!
ಆರೋಗ್ಯ ಮಂತ್ರಿ ಸುಧಾಕರ್ ಕ್ಯಾಬಿನೆಟ್ ಸಭೆ ಬಿಟ್ಟು ಎದ್ದು ಹೋದರು
"ಕೊರೊನಾ ನಿರ್ವಹಣೆಗೆ 5 ಜನ ಮಂತ್ರಿಗಳಿಗೆ ಜವಾಬ್ದಾರಿ ಕೊಟ್ಟ ಮೇಲೆ ಆರೋಗ್ಯ ಮಂತ್ರಿ ಸುಧಾಕರ್ ಕ್ಯಾಬಿನೆಟ್ ಸಭೆ ಬಿಟ್ಟು ಎದ್ದು ಹೋದರು ಎಂಬ ಮಾಹಿತಿ ಇದೆ. ಇದು ಸರ್ಕಾರದ ಒಗ್ಗಟ್ಟನ್ನು ಪ್ರಶ್ನೆ ಮಾಡುತ್ತದೆ. ಬೆಡ್ ಬ್ಲಾಕಿಂಗ್ ದಂಧೆ ವಿಚಾರವಾಗಿ ಕೆಲವರನ್ನ ಬಂಧಿಸಲಾಗಿದೆ. ಬಂಧಿತರು ಎನ್ಜಿಓ ನಡೆಸುತ್ತಿದ್ದರು ಎಂಬ ಮಾಹಿತಿ ಇದೆ. ಇವರಿಗೆ ಬೆಡ್ ಅಲರ್ಟ್ ಮಾಡಲು ಜವಾಬ್ದಾರಿ ಕೊಟ್ಟವರು ಯಾರು" ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಸಂಸದರು 8 ವಾರ್ ರೂಂಗಳ ಪೈಕಿ ಕೇವಲ ಒಂದಕ್ಕೆ ಹೋಗಿ ನೋಡಿದ್ದಾರೆ
"ಸಂಸದರು 8 ವಾರ್ ರೂಂಗಳ ಪೈಕಿ ಕೇವಲ ಒಂದಕ್ಕೆ ಹೋಗಿ ನೋಡಿದ್ದಾರೆ. ಕಂಪ್ಯೂಟರ್ ನಲ್ಲಿರುವ ಮಾಹಿತಿಗಿಂತ ಆಸ್ಪತ್ರೆಗೆ ತೆರಳಿ ವಾಸ್ತವತೆ ನೋಡಬೇಕು. ಡ್ರಗ್ ದಂಧೆಯಲ್ಲಿ ಒಂದೆರಡು ಹೆಣ್ಣುಮಕ್ಕಳನ್ನು ಜೈಲಿಗೆ ಹಾಕಿದ್ದು ಬಿಟ್ಟರೆ ನಿಮ್ಮ ಸಾಧನೆ ಏನು? ಸಿಡಿ ವಿಚಾರ ಏನಾಯ್ತು, ಚಾಮರಾಜನಗರ, ಬೆಡ್ ಬ್ಕಾಕಿಂಗ್ ದಂಧೆ ಬಗ್ಗೆ ತನಿಖೆ ಮಾಡಿ ಏನು ಮಾಡುತ್ತೀರಿ. ಇವೆಲ್ಲವೂ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಆಗಿದೆ" ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
ಬೆಡ್ ಬ್ಕಾಕಿಂಗ್ ಕೇಸನ್ನು ಸಿಸಿಬಿಗೆ ವಹಿಸಿದ್ದೀರಿ, ಇದು ಸರೀನಾ
"ಬೆಡ್ ಬ್ಕಾಕಿಂಗ್ ಕೇಸನ್ನು ಸಿಸಿಬಿಗೆ ವಹಿಸಿದ್ದೀರಿ. ಪೊಲೀಸರು ವಾರ್ ರೂಂಗೆ ತೆರಳಿ ತನಿಖೆ ಮಾಡಿದರೆ, ನಾಳೆಯಿಂದ ಅಲ್ಲಿ ಯಾರು ಕೆಲಸ ಮಾಡುತ್ತಾರೆ. ಜನರಿಗೆ ಬೆಡ್ ಕೊಡುವವರು ಯಾರು? ಕೊವಿಡ್ ವಾರಿಯರ್ಸ್ ಪೈಕಿ 5-6% ಜನ ದುಡ್ಡು ಮಾಡಲು ಇರಬಹುದು" ಎಂದು ಕುಮಾರಸ್ವಾಮಿ ಹೇಳಿದರು.
ಹಣ ಪಡೆದು ಹಾಕಿದ್ದೀರಿ. ಈಗ ಆತ ದುಡ್ಡು ಮಾಡಲು ಹೊರಟಿದ್ದಾನೆ
ಯಾಕೆಂದರೆ ನೀವು ಪೊಸ್ಟಿಂಗ್ ಹಾಕಬೇಕಾದರೆ ಹಣ ಪಡೆದು ಹಾಕಿದ್ದೀರಿ. ಈಗ ಆತ ದುಡ್ಡು ಮಾಡಲು ಹೊರಟಿದ್ದಾನೆ. ನಿಮ್ಮಲ್ಲಿ ಲೂಪ್ ಹೋಲ್ಸ್ ಇಟ್ಟು ಕೊಂಡು ಜನರ ಹಾದಿ ತಪ್ಪಿಸಬೇಡಿ. ಜನರು ಬೀದಿಯಲ್ಲಿ ಸಾಯುತ್ತಿದ್ದರೆ ನೀವು ಹುಡುಗಾಟ ಆಡುತ್ತಿದ್ದೀರಾ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.