ಮಂಡ್ಯ; ರಿಷಿ ಕುಮಾರ ಸ್ವಾಮೀಜಿ, ಮುತಾಲಿಕ್ ವಿರುದ್ಧ ಆಕ್ರೋಶ
ಮಂಡ್ಯ, ಮೇ 18; ಮಂಡ್ಯ ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಲಾಗಿದೆ. ರಿಷಿಕುಮಾರ ಸ್ವಾಮೀಜಿ ಮತ್ತು ಪ್ರಮೋದ್ ಮುತಾಲಿಕ್ ಜಿಲ್ಲೆಗೆ ಭೇಟಿ ನೀಡದಂತೆ ಶಾಶ್ವತ ನಿರ್ಬಂಧ ಹೇರುವಂತೆ ಒತ್ತಾಯಿಸಲಾಗಿದೆ.
ಬುಧವಾರ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ವೇದಿಕೆ ಕಾಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾಯಕರ್ತರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಇಲ್ಲಿನ ಜನತೆ ರೈತರು, ದಲಿತರು, ಮುಸಲ್ಮಾನರು, ಬೌದ್ಧರು ಮತ್ತು ಕ್ರೈಸ್ತರು ಎಂಬ ಬೇಧ ಭಾವವಿಲ್ಲದೆ ಸಹೋದರರಂತೆ ಬದುಕುತ್ತಿರುವುದು ಈ ನೆಲದ ಸಂಸ್ಕೃತಿಯಾಗಿದೆ. ಈ ಗುಣ ಇತರ ಜಿಲ್ಲೆಗಳಿಗೂ ಮಾದರಿಯಾಗಿದೆ.
ಎಲ್ಲ ಸಂಘಟನೆಗಳು ಭಾತೃತ್ವದ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಸದಾ ಕಾಪಾಡಿಕೊಂಡು ಬಂದಿರುವುದು ವಿಶೇಷ. ಹಾಗಾಗಿ ಜಿಲ್ಲೆಯಲ್ಲಿ 70ರ ದಶಕದ ನಂತರ ಯಾವುದೇ ಕೋಮು ಗಲಭೆಗಳು ಈವರೆಗೆ ನಡೆಯಲು ಸಾಧ್ಯವಾಗಿಲ್ಲ. ಹಾಗೆಯೇ ಜಾತಿ ಗಲಭೆಗಳನ್ನೂ ನಿಗ್ರಹಿಸಿ ತಡೆಗಟ್ಟುವಲ್ಲಿ ಇಲ್ಲಿನ ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಮುಖಂಡರು ಜಾಗೃತಿ ವಹಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಹೊರಗಿನ ವ್ಯಕ್ತಿಗಳಾದ ಕಾಳಿಮಠದ ರಿಷಿಕುಮಾರಸ್ವಾಮಿ ಎಂಬಾತ ಮತ್ತು ಹುಬ್ಬಳ್ಳಿಯ ಆನಂದ ನಗರದ ನಿವಾಸಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಮತ್ತಿತರರು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಐತಿಹಾಸಿಕ ಜುಮ್ಮಾ ಮಸೀದಿಯ ಕುರಿತಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೇಳಿಕೆಗೆ ಖಂಡನೆ; ಶ್ರೀರಂಗಪಟ್ಟಣದಲ್ಲಿ ಮಸೀದಿ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ಮಂಡ್ಯ ಜಿಲ್ಲೆಯ ಪೋಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ ರಿಷಿಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಮೂಲಕ ಹೋಗಿ ಮಸೀದಿ ಇರುವ ಜಾಗದಲ್ಲಿ ಶ್ರೀ ಆಂಜನೇಯ ದೇವಾಲಯ ನಿರ್ಮಿಸುತ್ತೇನೆ ಎಂದು ಹೇಳಿಕೆ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಕೋಮು ಸಂಘರ್ಷವನ್ನುಂಟುಮಾಡುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಹಾಳುವ ಮಾಡುವ ಹಾಗೂ ಕೋಮು ಸಂಘರ್ಷವನ್ನು ಕದಡುವ ವ್ಯಕ್ತಿಗಳನ್ನು ಭಾರತೀಯ ದಂಡ ಸಂಹಿತೆ ಪ್ರಕಾರ ಮೊಕದ್ದಮೆ ಹಾಕುವುದರ ಮೂಲಕ ಇವರನ್ನು ಶಾಶ್ವತವಾಗಿ ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಸುನಂದಾ ಜಯರಾಂ, ಜಗದೀಶ್ ಕೊಪ್ಪ, ವೈ. ಪಿ. ಮಂಜುನಾಥ, ಎ. ಎಸ್. ಶ್ರೀಕಂಠ, ಟಿ. ಯಶವಂತ, ಸಿ. ಕುಮಾರಿ, ಇಂಡುವಾಳು ಚಂದ್ರಶೇಖರ್ ಮುಂತಾದವರು ಪಾಲ್ಗೊಂಡಿದ್ದರು.