ಕುಟುಂಬದಲ್ಲಿ ಮೂಡದ ಸಾಮರಸ್ಯ; ಬಲಿಯಾಯ್ತು ಪುಟ್ಟ ಕಂದಮ್ಮ
ಮಂಡ್ಯ, ನವೆಂಬರ್ 15: ಮಹಿಳೆಯೊಬ್ಬರು ತಾನೂ ವಿಷ ಸೇವಿಸಿ ತನ್ನಿಬ್ಬರು ಮಕ್ಕಳಿಗೂ ವಿಷ ಉಣಿಸಿ ಆತ್ಮಹತ್ಯೆಗೆ ಯತ್ನಿಸಿ, ಒಂದು ಮಗು ಸಾವನ್ನಪ್ಪಿರುವ ಘಟನೆ ನವೆಂಬರ್ 14ರ ಗುರುವಾರ ಜಿಲ್ಲೆಯ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿಷ ಬೆರೆತ ಕಾಳು ತಿಂದು ಯೋಧನ ಇಬ್ಬರು ಮಕ್ಕಳ ಸಾವು
ಶಿವಪ್ಪರವರ ಪತ್ನಿ ಸೌಜನ್ಯಾ (24) ತನ್ನ ಎರಡು ಮಕ್ಕಳಿಗೆ ವಿಷ ಉಣಿಸಿದಾಕೆ. ಕುಟುಂಬದಲ್ಲಿ ಸಾಮರಸ್ಯ ಇಲ್ಲದಿರುವುದೇ ಆತ್ಮಹತ್ಯೆಗೆ ಕಾರಣ ಎಂಬುದು ತಿಳಿದುಬಂದಿದೆ.
ಬುಧವಾರ ಅತ್ತೆ ಮುದ್ದಮ್ಮ ಅವರು ಮೊಮ್ಮಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಅದಕ್ಕೆ ಕೋಪಗೊಂಡಿದ್ದ ಸೌಜನ್ಯಾ, ಅಲ್ಲಿಂದ ಬಂದ ನಂತರ ಮಕ್ಕಳಾದ ಪುನೀತ್ (3) ಲೋಹಿತ್ (1)ಗೆ ಮನೆಯಲ್ಲಿಟ್ಟಿದ್ದ ಕಳೆನಾಶಕವನ್ನು ನೀರಿಗೆ ಸೇರಿಸಿ ಕುಡಿಸಿ, ತಾನೂ ಸೇವಿಸಿದ್ದಾಳೆ. ಮನೆಗೆ ಬಂದ ಗಂಡ ಶಿವಪ್ಪ ಏನೋ ವಾಸನೆ ಬರುತ್ತಿದೆ ಎಂದು ಗಮನಿಸಿದಾಗ ವಿಷ ಸೇವಿಸಿರುವುದು ಪತ್ತೆಯಾಗಿದೆ. ತಕ್ಷಣ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಕಿರಿಯ ಮಗು ಲೋಹಿತ್ ಸಾವನ್ನಪ್ಪಿದೆ. ಮತ್ತೊಬ್ಬ ಮಗ ಪುನೀತ್ ಮತ್ತು ಸೌಜನ್ಯಾ ಅವರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿದ್ದು ಮಂಡ್ಯದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.