ಮಂಡ್ಯದಲ್ಲಿ ಮನೆಗೆ ಬರಲು ಸಜ್ಜಾಗಿದ್ದಾನೆ "ಆಯುರ್ವೇದ ಗಣಪ"
ಮಂಡ್ಯ, ಆಗಸ್ಟ್ 20: ಕೊರೊನಾ ಸೋಂಕಿನ ಭೀತಿಯಿಂದಾಗಿ ಈ ಬಾರಿ ಅದ್ಧೂರಿ ಗಣಪತಿ ಹಬ್ಬದ ಆಚರಣೆಗೆ ಬ್ರೇಕ್ ಬಿದ್ದಿದೆ. ಆದರೆ ಗಣೇಶ ಹಬ್ಬವನ್ನು ಸರಳವಾಗಿ, ಅರ್ಥಗರ್ಭಿತವಾಗಿಯೂ ಆಚರಿಸಬಹುದೆಂದು ತೋರಿಸಿಕೊಡಲು ಮಂಡ್ಯದ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಮುಂದಾಗಿದೆ.
ಈ ಬಾರಿ ಜೇಡಿ ಮಣ್ಣಿನ ಆಯುರ್ವೇದ ಗಣಪನನ್ನು ಕೃಷಿ ಇಲಾಖೆ, ಜಿಲ್ಲಾಡಳಿತ ಹಾಗೂ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ ಜೊತೆಗೂಡಿ ಪರಿಚಯಿಸಿವೆ. ಈ ಮೂಲಕ ಈ ಬಾರಿ ಭಿನ್ನವಾಗಿ ಪರಿಸರಸ್ನೇಹಿ ಗಣಪನ ಹಬ್ಬದಾಚರಣೆಗೆ ಪ್ರೋತ್ಸಾಹಿಸಿವೆ.
ಕುದೂರು ಗಣೇಶ ಮೂರ್ತಿ ತಯಾರಕರ ಸಂಭ್ರಮ ಕಸಿಯಿತೇ ಕೊರೊನಾ?
ಆಯುರ್ವೇದ ಗಣಪ ಹೇಗೆ?: ಜೇಡಿಮಣ್ಣಿನಿಂದ ಗಣಪನ ಮೂರ್ತಿಯನ್ನು ತಯಾರಿಸಲಾಗಿದ್ದು, ಮೂರ್ತಿಯ ಜೊತೆ ಪಾಟ್ ಹಾಗೂ ಔಷಧೀಯ ಗಿಡಗಳ ಬೀಜಗಳನ್ನು ನೀಡಲಾಗುವುದು. ಗಣಪನ ಪೂಜೆಯ ನಂತರ ಪಾಟ್ ನಲ್ಲಿ ಮೂರ್ತಿಯನ್ನು ವಿಸರ್ಜಿಸಬೇಕು. ಮೂರ್ತಿ ಸಂಪೂರ್ಣ ಕರಗಿದ ಬಳಿಕ ಆ ಬೀಜವನ್ನು ಪಾಟ್ ಗೆ ಹಾಕಿ ನೀರು ಹಾಕಬೇಕು. ಇದರಿಂದ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರ ಜೊತೆಗೆ ಔಷಧ ಗುಣಗಳುಳ್ಳ ಗಿಡವನ್ನು ಮನೆಯಲ್ಲೇ ಬೆಳೆದಂತಾಗುತ್ತದೆ ಎಂಬುದು ಜಿಲ್ಲಾಡಳಿತದ ಉದ್ದೇಶ.
ಕರ್ನಾಟಕದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಈ ನಿಯಮ ಪಾಲನೆ ಕಡ್ಡಾಯ
ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಮಂಡ್ಯದ ವಿ.ಸಿ.ಫಾರಂನಲ್ಲಿರುವ ಆರಾಧ್ಯ ಆಗ್ರೋ ಫುಡ್ ಅಂಡ್ ಬೇವರೇಜ್ ಪರಿಸರಕ್ಕೆ ಪೂರಕವಾಗಿರುವ ಜೇಡಿ ಮಣ್ಣಿನ ಗಣಪನನ್ನು ಸಿದ್ಧಪಡಿಸಿದ್ದಾರೆ. ಅದೂ ಅತ್ಯಂತ ಕಡಿಮೆ ಬೆಲೆ, ಅಂದರೆ 120 ರೂಪಾಯಿಗೆ. ಜೊತೆಗೆ ಗೌರಿಯೂ ಇರಲಿದ್ದಾಳೆ. ಪರಿಸರಸ್ನೇಹಿ ಗಣೇಶ ಪ್ರತಿಷ್ಠಾಪಿಸುವ ಪ್ರಾತ್ಯಕ್ಷಿಕೆಯನ್ನು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆಸಲಾಯಿತು.