ಆಟೋ ಚಾಲಕ ದರ್ಶನ್ ಫೋಟೋ ಹಾಕಿದ್ದೇ ತಪ್ಪಾಯ್ತಾ?
Recommended Video
ಮಂಡ್ಯ, ಮಾರ್ಚ್ 26:ಮಂಡ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ದ್ವೇಷಗಳು ಕೂಡ ಬೇರೆ ಬೇರೆಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಚಿತ್ರನಟ ದರ್ಶನ್ ಮತ್ತು ಯಶ್ ಬೆಂಬಲ ನೀಡಿದರು ಎಂಬ ಒಂದೇ ಕಾರಣಕ್ಕೆ ಅವರನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿದ್ದು, ಎದುರಾಳಿಗಳಿಂದ ವಾಗ್ಬಾಣಗಳು ಒಂದರ ಮೇಲೊಂದರಂತೆ ತೂರಿ ಬರುತ್ತಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುಮಲತಾ ಅವರು ನಾಮಪತ್ರ ಸಲ್ಲಿಸುವ ವೇಳೆ ಜಮಾಯಿಸಿದ್ದ ಅಭಿಮಾನಿಗಳನ್ನು ನೋಡಿದ ದಳಪತಿಗಳು ಅವರಿಗಿಂತ ಹೆಚ್ಚಿನ ಜನರನ್ನು ಸೇರಿಸುವ ಮೂಲಕ ತಾವೇನು ಕಡಿಮೆಯಿಲ್ಲ ಎಂಬುದನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಭಾಷಣದುದ್ದಕ್ಕೂ ದರ್ಶನ್ ಮತ್ತು ಯಶ್ ಅವರನ್ನು ಹಿಯಾಳಿಸಿ ಸೇಡು ತೀರಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ಸುಮಲತಾ ದೂರು
ರಾಜಕೀಯ ಲಾಭಕ್ಕಾಗಿ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯಬೇಕಾ ಎಂದು ಜನ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ನಾಯಕರ ವರ್ತನೆಗಳು ಕಾಣಸಿಗುತ್ತಿದೆ. ದರ್ಶನ್ ಮತ್ತು ಯಶ್ ಜೋಡೆತ್ತುಗಳಲ್ಲ ಅವು ಕಳ್ಳ ಎತ್ತುಗಳು. ಉಳುವೆ ಮಾಡುವ ಎತ್ತುಗಳಲ್ಲ ಉಳುಮೆ ಮಾಡಿ ಫಸಲು ಬಂದ ಬೆಳೆಯನ್ನು ರಾತ್ರೋರಾತ್ರಿ ಬಂದು ತಿಂದು ಹೋಗುವ ಕಳ್ಳ ಎತ್ತುಗಳು ಎನ್ನುವ ಮೂಲಕ ಮುಖ್ಯಮಂತ್ರಿಗಳೇ ವ್ಯಂಗ್ಯವಾಡಿದ್ದು, ಜತೆಗೆ ತಮ್ಮ ಪುತ್ರನಿಗೆ ಎದುರಾಳಿಯಾಗಿ ಸ್ಪರ್ಧಿಸಿರುವುದು ಒಬ್ಬ ಪ್ರಬುದ್ಧ ಮಹಿಳೆ ಎಂಬುದನ್ನು ಮರೆತು ಕೀಳು ಮಟ್ಟದಿಂದ ಮಾತನಾಡಲು ಮುಂದಾಗುತ್ತಿರುವುದು ಪಕ್ಷಕ್ಕೆ ಮತ್ತು ನಾಯಕರಿಗೆ ಶೋಭೆ ತರುತ್ತಾ ಎಂಬ ಮಾತುಗಳು ಜನವಲಯದಲ್ಲಿ ಕೇಳಿ ಬರುತ್ತಿದೆ.
ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತಿದೆ
ಮಂಡ್ಯದಲ್ಲಿ ಕೆಲವು ನಾಯಕರು ಆಡುತ್ತಿರುವ ಮಾತುಗಳು ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತಿದೆ. ಅದು ಎಷ್ಟರ ಮಟ್ಟಿಗೆ ಕಿಚ್ಚನ್ನು ಹಬ್ಬಿಸಿದೆ ಎಂಬುದಕ್ಕೆ ಆಟೋದ ಹಿಂಭಾಗದಲ್ಲಿ ದರ್ಶನ್ ಫೋಟೋ ಹಾಕಿದ್ದಾರೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಆ ಆಟೋದ ಎರಡು ಚಕ್ರಗಳನ್ನು ಬಿಚ್ಚಿಕೊಂಡು ಹೋಗಿರುವ ಘಟನೆಯೇ ಸಾಕ್ಷಿಯಾಗಿದೆ.
ನಿಖಿಲ್ ಕುಮಾರಸ್ವಾಮಿ ಗೆದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ: ಡಿಕೆಶಿ
ಡಿ ಬಾಸ್ ಎಂದು ಬರೆಸಿಕೊಂಡಿದ್ದರು
ದರ್ಶನ್ ಅಭಿಮಾನಿಯಾಗಿರುವ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ನಿವಾಸಿ ಸಂತೋಷ್ ತನ್ನ ಆಟೋ ಹಿಂಭಾಗದಲ್ಲಿ ದರ್ಶನ್ ಚಿತ್ರ ಹಾಕಿ ಡಿ ಬಾಸ್ ಎಂದು ಬರೆಸಿಕೊಂಡಿದ್ದರು. ಇದನ್ನು ನೋಡಿದ ಯಾರೋ ಕಿಡಿಗೇಡಿಗಳು ಚಾಲಕ ರಾತ್ರಿ ಆಟೋವನ್ನು ನಿಲ್ಲಿಸಿ ಹೋಗಿದ್ದ ವೇಳೆ ಸಮಯ ಸಾಧಿಸಿ ಅದರ ಎರಡು ಟಯರ್ ಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಆಟೋದ ಹಿಂಭಾಗದ ಎರಡು ಟಯರ್ ಗಳು ಇಲ್ಲದಿರುವುದು ಕಂಡು ಕಂಗಾಲಾಗಿದ್ದಾರೆ.
ಪೊಲೀಸರ ವಿರುದ್ಧ ಕೇಳಿ ಬಂದ ಆರೋಪ
ಟಯರ್ ಬಿಚ್ಚಿಕೊಂಡು ಹೋಗಿರುವ ಸಂಬಂಧ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಎನ್.ವಾಸುದೇವ್ ನೇತೃತ್ವದಲ್ಲಿ ಐವತ್ತಕೂ ಹೆಚ್ಚು ಸದಸ್ಯರು ಠಾಣೆಯ ಮುಂಭಾಗ ಜಮಾಯಿಸಿ ಆರೋಪಿಗಳನ್ನು ಬಂಧಿಸಿ ಎಂದು ಒತ್ತಾಯಿಸಿ ಮನವಿ ಸಲ್ಲಿಸಲು ಮುಂದಾದಾಗ ಪೊಲೀಸ್ ಅಧಿಕಾರಿಗಳು ಮನವಿಯನ್ನು ಸ್ವೀಕರಿಸುವುದಿಲ್ಲ. ಈಗ ತಾಲೂಕಿನಲ್ಲಿ ರಾಜಕೀಯ ತಿರುವು ಪಡೆದುಕೊಂಡರೆ ನಮಗೆ ತೊಂದರೆಯಾಗುತ್ತದೆ. ನೀವು ಒಂದು ವೇಳೆ ಮನವಿಯನ್ನು ಸ್ವೀಕರಿಸಲು ಒತ್ತಾಯಮಾಡಿದರೆ ನಿಮ್ಮ ಆಟೋಗಳ ವಿರುದ್ಧ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಪೊಲೀಸರ ವಿರುದ್ಧ ಕೇಳಿ ಬಂದಿದೆ.
ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನ
ಇದೀಗ ಪೊಲೀಸ್ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಮತ್ತು ಚಕ್ರಗಳನ್ನು ಬಿಚ್ಚಿಟ್ಟುಕೊಂಡು ಹೋಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಬುಧವಾರ ಕೆ.ಆರ್.ಪೇಟೆ ಪಟ್ಟಣದಲ್ಲಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಚುನಾವಣೆ ಮುಗಿಯುವ ವೇಳೆಗೆ ಮಂಡ್ಯದಲ್ಲಿ ಇನ್ನೇನೆಲ್ಲ ಘಟನೆಗಳು ನಡೆಯುತ್ತವೆಯೋ ಗೊತ್ತಿಲ್ಲ. ರಾಜಕೀಯವನ್ನು ರಾಜಕೀಯವಾಗಿಯೇ ತೆಗೆದುಕೊಳ್ಳದೆ ನಾಯಕರು ಜನರಲ್ಲಿ ರಾಜಕೀಯ ವಿಷಬೀಜವನ್ನು ಬಿತ್ತಿ ಲಾಭಪಡೆದುಕೊಳ್ಳಲು ಹೋದರೆ ಅದು ಇಂತಹ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತದೆ ಎಂದರೆ ತಪ್ಪಾಗಲಾರದು.