ಮಾದೇಗೌಡರು-ಪುಟ್ಟರಾಜು ಮಧ್ಯೆ ನಡೆದ ಹಣಕಾಸಿನ ಸಂಭಾಷಣೆ ಏನು?
ಮಂಡ್ಯ, ಏಪ್ರಿಲ್ 7: ಮಂಡ್ಯ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ಜಿದ್ದಾಜಿದ್ದಿ ತಾರಕಕ್ಕೆ ಏರಿರುವಾಗಲೇ ಕಾಂಗ್ರೆಸ್ ನ ಹಿರಿಯ ನಾಯಕ ಜಿ.ಮಾದೇಗೌಡ ಹಾಗೂ ಸಚಿವ- ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಮಧ್ಯೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ಭಾರೀ ಸದ್ದು ಮಾಡುತ್ತಿದೆ. ಚುನಾವಣೆಗಾಗಿ ಹಣ ಬೇಕು. ಅದಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಮಾದೇಗೌಡರು ಪುಟ್ಟರಾಜು ಅವರನ್ನು ಕೇಳಿದ್ದಾರೆ.
ದುಡ್ಡು ಕೇಳಿರುವುದು ಹೌದು ಎಂಬುದನ್ನು ಮಾದೇಗೌಡರು ಹಾಗೂ ಪುಟ್ಟರಾಜು ಇಬ್ಬರೂ ಒಪ್ಪಿಕೊಂಡಿದ್ದಾರೆ. ದುಡ್ಡೇ ಖರ್ಚು ಮಾಡದೆ ಚುನಾವಣೆ ಮಾಡಲು ಎಲ್ಲಿ ಸಾಧ್ಯ? ನಾನೇನೂ ಲಂಚ ಕೇಳಿಲ್ಲ. ಪ್ರಚಾರಕ್ಕೆ ಬರುವ ಹುಡುಗರಿಗೆ ಕಾಫಿ-ತಿಂಡಿ ಕೊಡಿಸಲು ಹಣ ಬೇಕು ಎಂದಿದ್ದಾರೆ. ಮಾದೇಗೌಡರ ಮಗ ಮದ್ದೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ.
ನಿಖಿಲ್ಗೆ ಬೆಂಬಲ : ಮಂಡ್ಯ ಕಾಂಗ್ರೆಸ್ನಲ್ಲಿ ಇನ್ನೂ ಬಿಕ್ಕಟ್ಟು!
ಈ ಮಧ್ಯೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗೆ ಖರ್ಚು ಮಾಡಲು ಎಪ್ಪತ್ತು ಲಕ್ಷದ ಮಿತಿ ವಿಧಿಸಲಾಗಿದೆ. ಅದರೊಳಗೆ ಖರ್ಚು ಮಾಡಿದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ. ಅಂದಹಾಗೆ ಜಿ.ಮಾದೇಗೌಡ ಹಾಗೂ ಸಿ.ಎಸ್.ಪುಟ್ಟರಾಜು ಮಧ್ಯೆ ನಡೆದ ಸಂಭಾಷಣೆ ಏನು ಎಂಬ ವಿವರ ಇಲ್ಲಿದೆ.
ಪುಟ್ಟರಾಜು: ಓ ಅಪ್ಪಾಜಿ, ನಮಸ್ಕಾರ ನಮಸ್ಕಾರ ಅಪ್ಪಾಜಿ.
ಜಿ.ಮಾದೇಗೌಡ: ಯಾಕೆ ನಮ್ಮ ಫೋನೇ ಎತ್ತಾ ಇಲ್ವಲ್ಲಾ ನೀವು?
ಪುಟ್ಟರಾಜು: ಹೇ ಇಲ್ಲ ಇಲ್ಲ ಅಪ್ಪಾಜಿ. ರಾತ್ರಿ ಎಲ್ಲೋ ಫಂಕ್ಷನ್ ನಲ್ಲಿ ಸಿಕ್ಕಾಕೊಂಡು ಬಿಟ್ಟಿದ್ದೆ. ರಾತ್ರಿ ಹತ್ತೂವರೆಗೆ ನೋಡಿದೆ. ಬೆಳಗ್ಗೆ ತಿರುಗಾ ಟ್ರೈ ಮಾಡಿದೆ, ಸಿಗಲಿಲ್ಲ.
ಮಾದೇಗೌಡ: ಈಗ ಎಲೆಕ್ಷನ್ ಬಂದೈತೆ, ಬಂದೈತೆ.
ಪುಟ್ಟರಾಜು: ಅಪ್ಪಾಜಿ, ಅಪ್ಪಾಜಿ.
ಮಾದೇಗೌಡ: ಜನ ಎಲ್ಲಾ ದುಡ್ಡು ಕೇಳ್ತಾರೆ.
ಪುಟ್ಟರಾಜು: ಸರಿ ಅಪ್ಪಾಜಿ.
ಮಾದೇಗೌಡ: ನನ್ನ ಮಗ ಬಸುಗೆ ಹೇಳಿದ್ದೇನೆ. ಜನ ದುಡ್ಡು ಕೇಳ್ತಾರೆ ದುಡ್ಡು.
ಪುಟ್ಟರಾಜು: ಸರಿ ಅಪ್ಪಾಜಿ ನಾನು ಅರೇಂಜ್ ಮಾಡ್ತೀನಿ.
ಮಾದೇಗೌಡ: ಬೇಗ ಚೀಫ್ ಮಿನಿಸ್ಟರ್ ಹತ್ತಿರ ಮಾತಾಡಿ.
ಪುಟ್ಟರಾಜು ಸರಿ ಅಪ್ಪಾಜಿ ಈಗಲೇ ಹೇಳ್ತೀನಿ.
ಮಾದೇಗೌಡ: ಗೊತ್ತಲ್ಲ, ತಮ್ಮಣ್ಣಂದೇ ಒಂದು ಗುಂಪದೆ. ನಮ್ಮದೇ ಒಂದು ಗುಂಪದೆ.
ಪುಟ್ಟರಾಜು: ಹಾಂ, ಮಾಡಿಸ್ತೀನಿ ಅಪ್ಪಾಜಿ. ನಾನು ಮಾಡಿಸ್ತೀನಿ.
ಮಾದೇಗೌಡ: ಆಗಲೇ ಅವನು ದುಡ್ಡು ಕೊಟ್ಟು ಎಲ್ಲರನ್ನೂ ಕರ್ಕೊಂಡು ಹೋಗ್ತಾನೆ. ನಮ್ಮೋರೆಲ್ಲ ದುಡ್ಡು ಕೇಳ್ತಾರೆ.
ಏ.13ರಂದು ಮಂಡ್ಯದಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಪುಟ್ಟರಾಜು: ನಾನು ಮಾಡಿಸ್ತೀನಿ ಅಪ್ಪಾಜಿ.
ಮಾದೇಗೌಡ: ನನ್ನ ಕೈಯಲ್ಲಿ ಓಡಾಡೋಕೆ ಆಗೊಲ್ಲ. ನನ್ನ ಮಗನಿಗೆ ಹೇಳಿದ್ದೀನಿ.
ಪುಟ್ಟರಾಜು: ಸರಿ ಅಪ್ಪಾಜಿ ಮಾಡಿಸ್ತೀನಿ.
ಮಾದೇಗೌಡ: ಸರಿ ಅವನಿಗೆ ದುಡ್ಡು ಕೊಟ್ಟು ಬಿಡಿ. ಅವನು ಓಯ್ತಾವ್ನೆ ಕ್ಯಾನ್ ವಾಸ್ ಗೆ. ದಯವಿಟ್ಟು ಆದಷ್ಟು ಬೇಗ ಮಾಡಿಸಿಕೊಡಬೇಕು.
ಪುಟ್ಟರಾಜು: ಸರಿ ಅಪ್ಪಾಜಿ
ಮಾದೇಗೌಡ: ನೀವು ಒಂದಿನ ಬಂದು ಹೋಗಬೇಕು.
ಪುಟ್ಟರಾಜು: ಸರಿ ಅಪ್ಪಾಜಿ, ನಾನು ಬರ್ತೀನಿ. ಅರೇಂಜ್ ಮಾಡ್ತೀನಿ ನಾನೀಗ.
ಮಾದೇಗೌಡ: ಮದ್ದೂರಲ್ಲಿ ಒಂದು ಫಂಕ್ಷನ್ ಮಾಡ್ತೀವು. ನೀವು ಬಂದು ಹೋಗಬೇಕು.
ಪುಟ್ಟರಾಜು: ಓಕೆ ಅಪ್ಪಾಜಿ.
ಮಾದೇಗೌಡ: ಇದನ್ನು ತಕ್ಷಣ ಮಾಡಿ. ಟೈಮ್ ಇಲ್ಲ. ಅದ್ಯಾರು ಹೇಳಿ, ನಾನೇ ಹೇಳ್ತೀನಿ.
ಪುಟ್ಟರಾಜು: ನಾನು ಅಲ್ಲೇ ಬೆಂಗಳೂರಲ್ಲಿ ಅರೇಂಜ್ ಮಾಡ್ತೀನಿ. ನಾನು ಫೋನ್ ಮಾಡ್ತೀನಿ ಅಪ್ಪಾಜಿ.
ಮಾದೇಗೌಡ: ಅಲ್ಲ, ಯಾರು ಕೊಡ್ತಾರಲ್ಲ ಅವರ ಹತ್ತಿರ ನಾನೇ ಮಾತಾಡ್ತೀನಿ.
ಪುಟ್ಟರಾಜು: ಹಾಂ, ಅಪ್ಪಾಜಿ ನಾನು ಅರೇಂಜ್ ಮಾಡ್ತೀನಿ.
ಮಾದೇಗೌಡ: ದಯವಿಟ್ಟು ನಾಳೆ, ನಾಡಿದ್ದರಾಗೆ ಮಾಡಪ್ಪ.
ಪುಟ್ಟರಾಜು: ಅಯ್ತು ಅಪ್ಪಾಜಿ.