ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದ್ದಕ್ಕೆ ಗೆಳತಿಗ್ಯಾಕೆ ಈ ಶಿಕ್ಷೆ?
ಮಂಡ್ಯ, ಡಿಸೆಂಬರ್ 19: ಗೆಳತಿಯ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿ ನಿಂತು ಮದುವೆ ನೋಂದಣಿ ಪತ್ರಕ್ಕೆ ಸಹಿ ಹಾಕಿದ ಕಾರಣಕ್ಕೆ ಯುವತಿಯ ಕುಟುಂಬದವರ ಮೇಲೆ ಹುಡುಗಿ ಮನೆಯವರು ಹಲ್ಲೆ ನಡೆಸಿರುವ ಘಟನೆ ಮದ್ದೂರಲ್ಲಿ ನಡೆದಿದೆ.
ಮದ್ದೂರು ತಾಲೂಕು ಮರಳಿಗ ಗ್ರಾಮದ ಹರೀಶ ಮತ್ತು ಶಶಿಕಲಾ ಎಂಬುವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಡೆದ ಮದುವೆಯ ನೋಂದಣಿ ಪತ್ರಕ್ಕೆ ಶಶಿಕಲಾ ಸ್ನೇಹಿತೆ ಸಹನಾ ಸಾಕ್ಷಿಯಾಗಿ ಸಹಿ ಹಾಕಿದ್ದರು. ಇದರಿಂದ ಕೋಪಗೊಂಡ ಶಶಿಕಲಾ ತಂದೆ, ಚಿಕ್ಕಪ್ಪ, ಚಿಕ್ಕಮ್ಮ, ಸೋದರಮಾವ ಹಾಗೂ ತಮ್ಮ ಸೇರಿಕೊಂಡು ಸಹನಾ ಅವರ ಸಹೋದರರ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಬಿರಿಯಾನಿ ಮಾರುತ್ತಿದ್ದ ದಲಿತ ವ್ಯಾಪಾರಿ ಮೇಲೆ ಹಲ್ಲೆ
ಶಶಿಕಲಾ ಮತ್ತು ಹರೀಶ ಬಾಲ್ಯ ಸ್ನೇಹಿತರಾಗಿದ್ದು, ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಮನೆಯಲ್ಲಿ ತೀವ್ರ ವಿರೋಧವಿತ್ತು. ಇವರ ವಿರೋಧವನ್ನೂ ಲೆಕ್ಕಿಸದೆ ಡಿಸೆಂಬರ್ 1ರಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಶಶಿಕಲಾ ಸ್ನೇಹಿತೆಯಾಗಿದ್ದ ಸಹನಾ ಮದುವೆ ನೋಂದಣಿ ಸಮಯದಲ್ಲಿ ಸಾಕ್ಷಿಯಾಗಿ ನಿಂತು ಸಹಿ ಹಾಕಿದ್ದರು. ಆ ನಂತರ ದಂಪತಿ, ಗಲಾಟೆಯಾಗಬಹುದೆಂದು ಹೆದರಿ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಡಿ.15ರಂದು ಬೆಸಗರಹಳ್ಳಿ ಪೊಲೀಸರು ಶಶಿಕಲಾ ಮತ್ತು ಹರೀಶ್ ಎದುರು ಮನೆಯವರನ್ನು ಕರೆಸಿ ರಾಜಿ ತೀರ್ಮಾನ ಮಾಡಿಸಿದ್ದರು. ಆ ನಂತರದಲ್ಲಿ ಇಬ್ಬರೂ ಬೆಂಗಳೂರಿಗೆ ಬಂದು ನೆಲೆಸಿದ್ದರು.
ಆದರೆ ಡಿ.15ರಂದು ಸಂಜೆ ಸಹನಾ ಮನೆ ಬಳಿ ಬಂದ ಶಶಿಕಲಾ ಕುಟುಂಬದವರು ಗಲಾಟೆ ಮಾಡಿದ್ದು, ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಹನಾ ಅವರು ತಮಗೆ ಜೀವ ಭಯವಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.