ಭಕ್ತರಿಗೆ ತಿಂಗಳ ನಂತರ ಬಾಗಿಲು ತೆರೆದ ಅರ್ಕೇಶ್ವರ ದೇವಸ್ಥಾನ
ಮಂಡ್ಯ, ಅಕ್ಟೋಬರ್ 12: ಮೂವರು ಅರ್ಚಕರ ಕೊಲೆ ಪ್ರಕರಣ ನಡೆದ ತಿಂಗಳ ನಂತರ ಮಂಡ್ಯದ ಅರ್ಕೇಶ್ವರ ದೇಗುಲ ಭಕ್ತರಿಗೆ ಬಾಗಿಲು ತೆರೆದಿದೆ.
ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಅರ್ಕೇಶ್ವರ ಸ್ವಾಮಿ ದೇವಾಲಯದಲ್ಲಿ ಸೆ.10ರ ರಾತ್ರಿ ಹುಂಡಿ ಹಣ ಕದಿಯಲು ಬಂದಿದ್ದ ದುಷ್ಕರ್ಮಿಗಳು ಮೂವರು ಅರ್ಚಕರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಂದಿದ್ದರು. ಈ ಘಟನೆಯಿಂದ ಇಡೀ ಜಿಲ್ಲೆಯಲ್ಲಿ ತಲ್ಲಣ ಉಂಟಾಗಿತ್ತು. ಆ ನಂತರ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಅರ್ಕೇಶ್ವರ ದೇಗುಲದಲ್ಲಿ ತ್ರಿವಳಿ ಕೊಲೆ ಪ್ರಕರಣ; ಕೂಲಿಗಾಗಿ ಬಂದು ಕೊಲೆ ಮಾಡಿದರು
ದೇವಸ್ಥಾನದ ಹುಂಡಿಯನ್ನು ಕದಿಯುವ ಉದ್ದೇಶದಿಂದ ದೇವಸ್ಥಾನದಲ್ಲಿ ಮಲಗಿದ್ದ ಆನಂದ್, ಗಣೇಶ್, ಪ್ರಕಾಶ್ ಎಂಬ ಮೂವರು ಅರ್ಚಕ/ಕಾವಲುಗಾರರನ್ನು ಬರ್ಬರವಾಗಿ ಕೊಲ್ಲಲಾಗಿತ್ತು. ಈ ಕುರಿತು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮಂಡ್ಯ ಡಿವೈಎಸ್ ಪಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಐದು ತನಿಖಾ ತಂಡಗಳನ್ನು ನೇಮಿಸಲಾಗಿತ್ತು. ಈ ಕೃತ್ಯ ಎಸಗಿದ್ದ ಐದು ಮಂದಿಯನ್ನು ಪೊಲೀಸರು ಮೂರು ದಿನದ ಒಳಗೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು, ಕಾರ್ಯಾಚರಣೆ ವೇಳೆ ಶೂಟೌಟ್ ಕೂಡ ನಡೆದಿತ್ತು.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 14ರಂದು ಶ್ರೀರಂಗಪಟ್ಟಣದ ಅಭಿ (22), ರಘು (20)ಆಂಧ್ರ ಮೂಲದ ವಿಜಿ (25), ಮದ್ದೂರಿನ ಅರೆಕಲ್ ದೊಡ್ಡಿಯ ಗಾಂಧಿ (28), ತೊಪ್ಪನಹಳ್ಳಿಯ ಮಂಜು (30) ಎಂಬುವರನ್ನು ಬಂಧಿಸಿದ್ದರು.
Recommended Video
ಇಂದಿನಿಂದ ಅರ್ಕೇಶ್ವರಸ್ವಾಮಿ ದೇಗುಲವನ್ನು ತೆರೆಯಲಾಗಿದ್ದು, ದೇವರಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದರ ಜೊತೆಗೆ ಭಕ್ತರಿಗೂ ದರ್ಶನದ ಅವಕಾಶ ಮಾಡಿಕೊಡಲಾಗಿದೆ. ದೇವಸ್ಥಾನದ ಬಾಗಿಲು ತೆರೆದು ದೇವಸ್ಥಾನವನ್ನು ಶುದ್ಧಿಗೊಳಿಸಿ ಪೂಜೆ ಸಲ್ಲಿಸಲಾಗಿದೆ.