ಅರ್ಕೇಶ್ವರ ದೇಗುಲದಲ್ಲಿ ತ್ರಿವಳಿ ಕೊಲೆ ಪ್ರಕರಣ; ಕೂಲಿಗಾಗಿ ಬಂದು ಕೊಲೆ ಮಾಡಿದರು
ಮಂಡ್ಯ, ಸೆಪ್ಟೆಂಬರ್ 15: ಜಿಲ್ಲೆಯ ಗುತ್ತಲಿನ ಅರ್ಕೇಶ್ವರ ದೇವಸ್ಥಾನದಲ್ಲಿ ಈಚೆಗೆ ನಡೆದ ಮೂವರ ಬರ್ಬರ ಹತ್ಯೆ ಇಡೀ ಜಿಲ್ಲೆಯಲ್ಲೇ ತಲ್ಲಣ ಸೃಷ್ಟಿಸಿತ್ತು. ರಾತ್ರೋರಾತ್ರಿ ಮಲಗಿದ್ದವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಹುಂಡಿ ಹಣ ಕದ್ದೊಯ್ದ ಸಂಗತಿ ಜಿಲ್ಲೆಯ ಜನರು ಬೆಚ್ಚಿಬೀಳುವಂತೆ ಮಾಡಿತ್ತು.
ಮೂರು ದಿನಗಳ ಒಳಗೇ ಪೊಲೀಸರು ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಸುಮಾರು 9 ಮಂದಿ ಭಾಗಿಯಾಗಿದ್ದು, ಐದು ಮಂದಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಉಳಿದವರಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ. ಆದರೆ ಈ ಆರೋಪಿಗಳ ವಯಸ್ಸು, ಅವರು ಮಾಡುತ್ತಿದ್ದ ಕೆಲಸ, ಜೊತೆಗೆ ಕಳ್ಳತನಕ್ಕೆ ರೂಪಿಸಿದ ಸಂಚು ಮಾತ್ರ ಆತಂಕವನ್ನೂ ತಂದಿದೆ. ಜಿಲ್ಲೆಯ ಮದ್ದೂರು, ಹೊನ್ನಲಗೆರೆ, ಭಾರತೀ ನಗರದಲ್ಲಿ ಕೂಲಿಗೆಂದು ಬಂದಿದ್ದ ಈ ಆರೋಪಿಗಳು ಕಳ್ಳತನದ ಸಂಚು ರೂಪಿಸಿ ಮೂವರು ಅಮಾಯಕರ ಕೊಲೆಯನ್ನೂ ಮಾಡಿದರು.
ಸೆಪ್ಟೆಂಬರ್ 11ರಂದು ನಡೆದಿದ್ದ ಕೊಲೆ
ಸೆಪ್ಟೆಂಬರ್ 11ರಂದು ರಾತ್ರಿ ಗುತ್ತಲಿನ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು, ಅಲ್ಲಿ ಮಲಗಿದ್ದ ಒಬ್ಬರು ಅರ್ಚಕ ಹಾಗೂ ಇಬ್ಬರು ಕಾವಲುಗಾರರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ದೇಗುಲದ ಹುಂಡಿಯ ಹಣವನ್ನು ಕಳ್ಳತನ ಮಾಡಿದ್ದರು. ಈ ಕುರಿತು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಡ್ಯ ಡಿವೈಎಸ್ ಪಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಐದು ತನಿಖಾ ತಂಡಗಳನ್ನು ನೇಮಿಸಲಾಗಿತ್ತು.
ಮಂಡ್ಯದ ದೇವಸ್ಥಾನದಲ್ಲಿ ಮೂವರ ಬರ್ಬರ ಹತ್ಯೆ!
ಬಂಧನದ ವೇಳೆ ಶೂಟೌಟ್
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 14ರಂದು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣದ ಅಭಿ (22), ರಘು (20)ಆಂಧ್ರ ಮೂಲದ ವಿಜಿ (25), ಮದ್ದೂರಿನ ಅರೆಕಲ್ ದೊಡ್ಡಿಯ ಗಾಂಧಿ (28), ತೊಪ್ಪನಹಳ್ಳಿಯ ಮಂಜು (30) ಎಂಬುವರನ್ನು ಬಂಧಿಸಿದ್ದಾರೆ. ಮೊದಲು ಅಭಿ ಮತ್ತು ರಘು ಎಂಬುವನ್ನು ಬಂಧಿಸಿದ್ದ ಪೊಲೀಸರು ಅವರಿಂದ 1,75,000ರೂಗಳ ಹುಂಡಿ ಹಣವನ್ನು ವಶಕ್ಕೆ ಪಡೆದಿದ್ದರು. ಉಳಿದ ಮೂವರನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆದು, ಮೂವರು ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿತ್ತು. ಈ ಸಂದರ್ಭ ಪೊಲೀಸರಿಗೂ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೇರೆ ಬೇರೆ ದೇಗುಲಗಳಲ್ಲೂ ಹುಂಡಿ ಕಳ್ಳತನ
ಇದೀಗ ಬಂಧಿತರಾಗಿರುವ ಆರೋಪಿಗಳೆಲ್ಲರೂ 30 ವಯಸ್ಸಿನ ಒಳಗಿರುವವರು. ಈ ಆರೋಪಿಗಳು ಬೇರೆ ಬೇರೆ ದೇವಸ್ಥಾನಗಳಲ್ಲೂ ಈ ರೀತಿ ಹುಂಡಿ ಕಳವು ಮಾಡಿರುವುದಾಗಿ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಡೆದಿರುವ ಹುಂಡಿ ಕಳವು ಪ್ರಕರಣಗಳನ್ನೂ ಪರಿಶೀಲಿಸಲಾಗುತ್ತಿದೆ. ಕುಡಿತದ ಚಟಕ್ಕೆ ಬಿದ್ದಿದ್ದ ಈ ಯುವಕರು ಈ ಅಡ್ಡಹಾದಿಯನ್ನು ಹಿಡಿದಿದ್ದರು ಎಂಬುದು ತಿಳಿದುಬಂದಿದೆ.
ಮಂಡ್ಯ ತ್ರಿವಳಿ ಕೊಲೆ ಪ್ರಕರಣ; ಬಲೆಗೆ ಬಿದ್ದ ಐವರು ಆರೋಪಿಗಳು
Recommended Video
ಕೂಲಿಗಾಗಿ ಬಂದು ಕೊಲೆ ಮಾಡಿದರು
ಕೂಲಿಗೆಂದು ಮಂಡ್ಯ ಜಿಲ್ಲೆಗೆ ಸೇರಿದ ಈ ಆರೋಪಿಗಳು ಸುಲಭವಾಗಿ ಹಣ ಮಾಡುವ ಸಂಚು ರೂಪಿಸಿ ದೇಗುಲಗಳಲ್ಲಿ ಕಳ್ಳತನಕ್ಕೆ ಇಳಿದಿದ್ದಾರೆ. ಗಾರೆ, ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ವಿಜಿ, ಶೆಡ್ ನಲ್ಲಿದ್ದ ಮಂಜು, ಗಾಂಧಿ, ಶ್ರೀರಂಗಪಟ್ಟಣದ ಸಂತೆಮಾಳದ ನಿವಾಸಿಗಳಾದ ಅಭಿ ಹಾಗೂ ರಘು ಇವರೆಲ್ಲರೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವರು. ಇವರೆಲ್ಲ ಸೇರಿ ಇನ್ನಷ್ಟು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತಗೊಂಡಿದ್ದು, ವಿಚಾರಣೆ ಮುಂದುವರೆದಿದೆ.