ಕೆಆರ್ ಎಸ್ ಗೆ ಸುತ್ತಿಕೊಂಡ ಗಣಿಗಾರಿಕೆಯ ಪರ-ವಿರೋಧ ಹೋರಾಟ
ಮಂಡ್ಯ, ಡಿಸೆಂಬರ್ 27 : ಜಿಲ್ಲೆಯ ಕೆಆರ್ ಎಸ್ ಜಲಾಶಯ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಬಾರದೆಂಬುದು ಒಂದು ಕಡೆಯಾದರೆ, ಕಲ್ಲುಗಣಿಗಾರಿಕೆಯನ್ನು ಸ್ಥಗಿತಗೊಳಿಸದೆ ಮುಂದುವರೆಸಿ ಎಂಬ ಹೋರಾಟ ಮತ್ತೊಂದೆಡೆ ನಡೆಯುತ್ತಿದೆ.
ಒಟ್ಟಾರೆ ಈಗ ಮಂಡ್ಯ ಜಿಲ್ಲೆಯಲ್ಲಿ ಕಲ್ಲುಗಣಿಗಾರಿಕೆ ಕುರಿತಂತೆ ಪರ-ವಿರೋಧ ಹೋರಾಟಗಳು ಹುಟ್ಟಿಕೊಂಡಿದ್ದು, ಇದು ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದು ಮಾತ್ರ ತಿಳಿಯದಾಗಿದೆ. ಕೆಆರ್ ಎಸ್ ಜಲಾಶಯ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವಾಗ ಹೊರಬರುವ ಸ್ಫೋಟದಿಂದ ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಹಾನಿಯಾಗುವ ಸಾಧ್ಯತೆಯಿದ್ದು, ಈ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸದಂತೆ ನಿಷೇಧ ಹೇರಬೇಕೆನ್ನುವುದು ಕೆಲವರ ಆಗ್ರಹವಾಗಿದೆ.
'ಗಣಿಯೊಳಗೆ ಸಿಲುಕಿ ಕಾರ್ಮಿಕರು ಪರದಾಡ್ತಿದ್ದಾರೆ, ಮೋದಿ ಕ್ಯಾಮೆರಾಗೆ ಪೋಸು ಕೊಡ್ತಿದ್ದಾರೆ'
ಈಗಾಗಲೇ ಜಿಲ್ಲಾಡಳಿತ ಈ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸದಂತೆ ತಡೆಯೊಡ್ಡಿದೆ. ಆದರೆ ನಾವು ಕಾನೂನುಬದ್ಧವಾಗಿಯೇ ಕ್ವಾರೆ ಕ್ರಷರ್ ಗಳನ್ನು ನಡೆಸುತ್ತಿದ್ದೇವೆ ಹೊರತು ಯಾವುದೇ ಅಕ್ರಮ ನಡೆಸಿಲ್ಲ ಎನ್ನುವುದು ಕ್ರಷರ್, ಕ್ವಾರೆ ಮಾಲೀಕರ ಸಂಘದ ಸಮಜಾಯಿಷಿಕೆಯಾಗಿದೆ.
ಅಷ್ಟೇ ಅಲ್ಲದೆ ಕೆಆರ್ ಎಸ್ ಡ್ಯಾಂ ನಿರ್ಮಾಣದಲ್ಲಿ ಶ್ರಮಿಸಿದ ಜನರ ಬೇಡಿಕೆಯ ಮೇರೆಗೆ 1950ರಲ್ಲಿ ಮಹಾರಾಜರು ಬೇಬಿ ಬೆಟ್ಟದಲ್ಲಿ ಪ್ರದೇಶದಲ್ಲಿ ಸುಮಾರು 1626ಎಕರೆ ಸ್ವಂತ ಜಮೀನಿನಲ್ಲಿ ಡ್ಯಾಂ ನಿರ್ಮಾಣಕ್ಕೆ ಶ್ರಮಿಸಿದ ಭೋವಿ ಜನರಿಗೆ ಕ್ವಾರೆ ಕೆಲಸ ನಡೆಸಲು ಸುಮಾರು 327 ಎಕರೆ ಜಮೀನನ್ನು ನೋಂದಣಿ ಮಾಡಿಕೊಟ್ಟಿದ್ದಾರೆ.
ಬನ್ನೇರುಘಟ್ಟದಲ್ಲಿ ಗಣಿಗಾರಿಕೆ ನಿರ್ಬಂಧಿಸುವಂತೆ ರಾಜೀವ್ ಮನವಿ
ಬಳಿಕ ಮಹಾರಾಜರು 1954ರಲ್ಲಿ ಇದು ವ್ಯವಸಾಯಕ್ಕೆ ಯೋಗ್ಯಭೂಮಿಯಲ್ಲ ಎಂಬ ಕಾರಣಕ್ಕೆ 1626 ಎಕರೆಯನ್ನು ಸರಕಾರಕ್ಕೆ ಬರೆದುಕೊಡುತ್ತಾರೆ. ಮತ್ತೆ 1960ರಲ್ಲಿ ಅಧಿಕೃತವಾಗಿ ಸರಕಾರವೇ ಅದೇ ಭೋವಿ ಸಮಾಜದವರಿಗೆ ಲೀಸ್ ರೂಪದಲ್ಲಿ ಕೊಟ್ಟಿದ್ದಾರೆ. ಅಂದು ರಾಯಲ್ಟಿ ಪಡೆದುಕೊಂಡ ಸುಮಾರು 25 ಲೀಸ್ ಗಳಿವೆ.
ಸ್ಪಷ್ಟನೆ ಕೊಟ್ಟ ಸಂಘ
ಇವತ್ತು ಕೂಡ ಸರಕಾರಕ್ಕೆ ರಾಜಧನವನ್ನು ಕಟ್ಟಿಕೊಂಡು ಕ್ವಾರೆ ನಡೆಸುತ್ತಿದ್ದಾರೆ. ಅಲ್ಲಿಯ ರೈತರು ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಕ್ವಾರೆ ನಡೆಸಲು ಸರಕಾರದಿಂದ ರಾಯಲ್ಟಿ ಪಡೆದು ರಾಜಧನ ಪಾವತಿಸಿಕೊಂಡು ಈ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಾವು ಯಾವುದೇ ಅಕ್ರಮ ನಡೆಸುತ್ತಿಲ್ಲ ಎನ್ನುವ ಸ್ಪಷ್ಟನೆಯನ್ನು ಕ್ರಷರ್, ಕ್ವಾರೆ ಮಾಲೀಕರ ಸಂಘವು ಸಾರ್ವಜನಿಕರ ಮುಂದಿಡುತ್ತಿದೆ.
ನಮ್ಮ ಬದುಕನ್ನು ಉಳಿಸಿ ಎಂಬ ಬೇಡಿಕೆ
ಇನ್ನೊಂದೆಡೆ ಕಲ್ಲುಗಣಿಗಾರಿಕೆ ನಿಷೇಧ ಮಾಡಿದ್ದೇ ಆದರೆ ಅದನ್ನು ನಂಬಿ ಬದುಕುವವರು ಬೀದಿಗೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಪಾಂಡವಪುರ ತಾಲೂಕು ಕಲ್ಲುಕ್ವಾರಿ ಮಾಲೀಕರು, ಕೂಲಿ ಕಾರ್ಮಿಕರು, ಲಾರಿ, ಟ್ರ್ಯಾಕ್ಟರ್ ಹಾಗೂ ಕ್ರಷರ್ ಮಾಲೀಕರು, ಕಾರ್ಮಿಕರ ಸಂಘ, ಕಲ್ಲುಕುಟಿಕರ ಸಂಘ, ಲಾರಿ ಚಾಲಕರ ಸಂಘ, ಭೋವಿ ಸಂಘ ಸೇರಿದಂತೆ ಕ್ವಾರಿ ಕೆಲಸವನ್ನೇ ಅವಲಂಬಿತಗೊಂಡಿರುವ ಹಲವಾರು ಸಂಘ ಸಂಸ್ಥೆಗಳು ಇದೀಗ ಕೆಆರ್ ಎಸ್ ಅಣೆಕಟ್ಟೆಯನ್ನು ಉಳಿಸಿ ಜತೆಗೆ ನಮ್ಮ ಬದುಕನ್ನು ಉಳಿಸಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಹೋರಾಟಕ್ಕಿಳಿದಿವೆ.
ನಿಗೂಢ ಗಣಿಯಲ್ಲಿ 13 ಕಾರ್ಮಿಕರ ನಾಪತ್ತೆ, 2 ದಿನವಾದರೂ ಸುದ್ದಿಯಿಲ್ಲ!
ಪ್ರತಿಭಟನೆ, ಪಾದಯಾತ್ರೆ
ಈಗಾಗಲೇ ಹಲವು ಸಂಘಟನೆಗಳು ಕಲ್ಲುಗಣಿಗಾರಿಕೆ ನಿಲ್ಲಿಸಿ ಕೆಆರ್ ಎಸ್ ಉಳಿಸಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ಪಾದಯಾತ್ರೆಗಳನ್ನು ನಡೆಸಿವೆ. ಇದೀಗ ಕ್ರಷರ್, ಕ್ವಾರೆ ಮಾಲೀಕರ ಸಂಘವು ಇತರೆ ಬೆಂಬಲಿತರೊಂದಿಗೆ ಹೋರಾಟಕ್ಕಿಳಿದಿವೆ.
ಸಮಸ್ಯೆಗೆ ಹಾದಿ
ಇದು ಹೀಗೆ ಮುಂದುವರೆದರೆ ಸಂಘರ್ಷಕ್ಕೆ ಎಡೆ ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ಇದಕ್ಕೊಂದು ಶಾಶ್ವತ ಪರಿಹಾರವನ್ನು ನೀಡದೆ ಹೋದರೆ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಪರ-ವಿರೋಧದ ಸಮರ ಸಮಸ್ಯೆಗೆ ಹಾದಿ ಮಾಡಿಕೊಡುವುದಂತು ನಿಜ.