ಮುತ್ತತ್ತಿ ನದಿಯಲ್ಲಿ ಮುಳುಗಿ ಆಂಧ್ರ ಮೂಲದ ಯುವಕ ಸಾವು
ಮಂಡ್ಯ, ಜನವರಿ 21: ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜುವ ವೇಳೆ ಮುಳುಗಿ ಸಾವನ್ನಪ್ಪುವ ಪ್ರಕರಣ ಮೇಲಿಂದ ಮೇಲೆ ನಡೆಯುತ್ತಿದ್ದರೂ ಜನ ಎಚ್ಚೆತ್ತುಕೊಳ್ಳದ ಕಾರಣ ಅವಘಡಗಳು ಮುಂದುವರೆಯುತ್ತಲೇ ಇವೆ. ಇಂದು ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜುವ ವೇಳೆ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೂಲತಃ ಆಂಧ್ರಪ್ರದೇಶದ ಕಡಪಾ ಪಟ್ಟಣದ ಮನೋಜ್ ಕುಮಾರ್ (30) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿ. ಈತ ಬೆಂಗಳೂರಿನಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಗಳವಾರ ಮುತ್ತತ್ತಿಯನ್ನು ನೋಡುವ ಸಲುವಾಗಿ ತನ್ನ ಸ್ನೇಹಿತರೊಂದಿಗೆ ಬಂದಿದ್ದನು.
ಕೆರೆಗಳು ತುಂಬಿವೆ... ಈಜಲು ಹೋಗುವವರೇ ಎಚ್ಚರ
ಇಲ್ಲಿನ ಕಾವೇರಿ ದಡದಲ್ಲಿರುವ ಮುತ್ತತ್ತಿರಾಯನ ದರ್ಶನ ಪಡೆದ ಬಳಿಕ ಕಾವೇರಿ ನದಿಯತ್ತ ತೆರಳಿ ಈಜಲು ನೀರಿಗಿಳಿದಿದ್ದಾನೆ. ಈ ವೇಳೆ ಸುಳಿಗೆ ಸಿಲುಕಿ ಮುಳುಗಿದ್ದಾನೆ. ಇದನ್ನು ನೋಡಿದ ಸ್ಥಳೀಯರು ತಕ್ಷಣ ನೀರಿಗೆ ಹಾರಿ ಆತನನ್ನು ನೀರಿಂದ ಹೊರಕ್ಕೆ ಎಳೆದು ದಡಕ್ಕೆ ತಂದಿದ್ದಾರೆ. ಆದರೆ ಆತ ಅದಾಗಲೇ ಅಸ್ವಸ್ಥಗೊಂಡಿದ್ದ. ಆತನನ್ನು ಕೂಡಲೇ ಕನಕಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ನಿಡುವ ಪ್ರಯತ್ನ ನಡೆಸಲಾಯಿತಾದರೂ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸ್ನೇಹಿತರ ಜೊತೆ ಈಜಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಶವಪರೀಕ್ಷೆ ನಂತರ ಮೃತದೇಹವನ್ನು ಸಂಬಂಧಿಕರಿಗೆ ನೀಡಲಾಗಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.