ಕಾವೇರಿಯಲ್ಲಿ ಪುಷ್ಕರ ಸಂಭ್ರಮ, ತೀರ್ಥ ಸ್ನಾನ ಮಾಡಿದ ಆಂಧ್ರ ಸಚಿವ
ಮಂಡ್ಯ, ಸೆಪ್ಟೆಂಬರ್ 22: ಆಂಧ್ರ ಪ್ರದೇಶದ ಮುಜರಾಯಿ ಸಚಿವ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ನಡೆದ ಮಹಾಪುಷ್ಕರದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕಾವೇರಿ ದಡದಲ್ಲಿ ಪುಷ್ಕರ ಸಂಭ್ರಮ, ತೀರ್ಥ ಸ್ನಾನ ಮಾಡಿದ ಭಕ್ತರು
ಶುಕ್ರವಾರ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಆಂಧ್ರ ಪ್ರದೇಶದ ಮುಜರಾಯಿ ಸಚಿವ ಮಾಣಿಕ್ಯ ರಾವ್ ಹಾಗೂ ತಿರುಪತಿ ವಿಧಾನಸಭಾ ಕ್ಷೇತ್ರದ ಶಾಸಕಿ ಸುಗುಣಂ ಅವರು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಬಳಿಕ ಪಿಂಡ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, "ಮೈಸೂರು ದಸರಾ ಸಂದರ್ಭದಲ್ಲಿ ಕಾವೇರಿ ಪುಷ್ಕರ ನಡೆಯುತ್ತಿರುವುದು ವಿಶೇಷವಾಗಿದ್ದು, ಬರುವ ಭಕ್ತರು, ಕಾವೇರಿ ನದಿಯಲ್ಲಿ ಸ್ನಾನ ಮಾಡಿ, ಚಾಮುಂಡೇಶ್ವರಿ, ಶ್ರೀ ರಂಗನಾಥಸ್ವಾಮಿ ದರ್ಶನ ಮಾಡಿದರೆ ಒಳ್ಳೆಯದಾಗಲಿದೆ. ಹಾಗೂ ಕಾವೇರಿಯಲ್ಲಿ ಸ್ನಾನ ಮಾಡಿರುವುದು ನೆಮ್ಮದಿ ತಂದಿದೆ ಎಲ್ಲರಿಗೂ ಒಳ್ಳೆಯದಾಗಲೆಂದು ಪ್ರಾರ್ಥಿಸಿರುವುದಾಗಿ ಅವರು ಹೇಳಿದರು.
ತಿರುಪತಿ ಕ್ಷೇತ್ರದ ಶಾಸಕಿ ಸುಗುಣಂ ಮಾತನಾಡಿ, ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ ಅವರ ಕಾರ್ಯವನ್ನು ಶ್ಲಾಘಿಸಿದರು. ಈ ಕಾರ್ಯದಿಂದಾಗಿ ದಕ್ಷಿಣ ಭಾರತದ ಅನೇಕ ಸಾಧು, ಸಂತರು ಸೇರಿದಂತೆ ಕರ್ನಾಟಕ, ಆಂದ್ರಪ್ರಧೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳಾ ರಾಜ್ಯದಿಂದ ಲಕ್ಷಾಂತ ಭಕ್ತರು ಇಲ್ಲಿಗೆ ಆಗಮಿಸಿ ಕಾವೇರಿ ನದಿಯಲ್ಲಿ ಸ್ನಾನಮಾಡಿ ವಿಶೇಷ ಪೂಜೆ ಕೈಂಕರ್ಯಗಳಲ್ಲಿ ಭಾಗವಹಿಸಲು ಅನುಕೂಲವಾಗಿದೆ ಎಂದು ಹೇಳಿದರು.
ಈಗಾಗಲೇ ತಮಿಳುನಾಡು, ಆಂಧ್ರ ಸೇರಿದಂತೆ ಹಲವಡೆಗಳಿಂದ ಭಕ್ತರು ಆಗಮಿಸುತ್ತಿದ್ದು ಕಾವೇರಿಯಲ್ಲಿ ಸ್ನಾನಾಧಿಕಾರ್ಯಗಳನ್ನು ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.