ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ: ಸಿದ್ದರಾಮಯ್ಯ
ಮಂಡ್ಯ, ಅಕ್ಟೋಬರ್ 24: ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೇವೆ. ಈ ಹಿಂದೆ ನಮ್ಮ ನಡುವೆ ಏನೇ ಆಗಿದ್ದರೂ ಅವುಗಳನ್ನು ಮರೆತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಡ್ಯದಲ್ಲಿ ಬುಧವಾರ ನಡೆದ ಸಂಧಾನ ಸಭೆಯಲ್ಲಿ ಅವರು ಮಾತನಾಡಿದರು.
ಮಂಡ್ಯದಲ್ಲಿ ಮುನಿದ ಕೈ ನಾಯಕರ ಮನವೊಲಿಸಲು ಸಿದ್ದು ಅಖಾಡಕ್ಕೆ
ಇದು ಅಪವಿತ್ರ ಮೈತ್ರಿ ಎಂದು ಟೀಕಿಸಲು ಬಿಜೆಪಿಗೆ ನೈತಿಕತೆಯಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ನಂಟು ಹೊಂದಿರುವ ಪಕ್ಷ ಎಂದು ಪಿಡಿಪಿ ವಿರುದ್ಧ ಆರೋಪ ಮಾಡುತ್ತಿದ್ದ ಬಿಜೆಪಿ, ಬಳಿಕ ಅಲ್ಲಿ ಅವರೊಂದಿಗೇ ಮೈತ್ರಿ ಮಾಡಿಕೊಂಡಿತ್ತು.
ಬಿಹಾರದಲ್ಲಿಯೂ ಜೆಡಿಯು ಜತೆಗೆ ಇಂತಹ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಈಗ ನಮ್ಮ ಮೈತ್ರಿಯನ್ನು ಟೀಕಿಸುತ್ತಿದ್ದಾರೆ. ಕೋಮುವಾದಿ ಪಕ್ಷವನ್ನು ದೂರ ಇರಿಸುವ ಸಲುವಾಗಿ ಈ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.
ಭಿನ್ನಮತ ಸುಳ್ಳು
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯ ಪರ ಪ್ರಚಾರದಲ್ಲಿ ಭಾಗವಹಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕಾರಣಕ್ಕಾಗಿ ಉಭಯ ಪಕ್ಷಗಳ ಮುಖಂಡರ ಜತೆಗೆ ಅವರು ಮಾತುಕತೆ ನಡೆಸಿದರು. ಮಂಡ್ಯ ಕಾಂಗ್ರೆಸ್ನಲ್ಲಿ ಭಿನ್ನಮತ ಇದೆ ಎನ್ನುವುದು ಸುಳ್ಳು. ಈ ಸಭೆಗೆ ಎಲ್ಲ ನಾಯಕರೂ ಬಂದಿದ್ದಾರೆ. ರಾಜ್ಯದ ಎಲ್ಲ ಐದು ಕ್ಷೇತ್ರಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದರು.
ಸೈದ್ಧಾಂತಿಕ ರಾಜಿ ಇಲ್ಲ
ಜೆಡಿಎಸ್ಗೆ ಬೆಂಬಲ ನೀಡಿದ ತಕ್ಷಣ ನಾವು ಸ್ವಾಭಿಮಾನ ಬಿಟ್ಟಿದ್ದೇವೆ ಎಂದರ್ಥವಲ್ಲ. ನಾವೆಲ್ಲರೂ ಸ್ವಾಭಿಮಾನಿಗಳೇ. ರಾಜಕಾರಣ ನಿಂತ ನೀರಲ್ಲ. ಕರ್ನಾಟಕದಲ್ಲಿ ಈ ಬಾರಿ ಮೈತ್ರಿ ನಡೆಯುತ್ತಿದೆ. ಆದರೆ, ಸೈದ್ಧಾಂತಿಕವಾಗಿ ಕಾಂಗ್ರೆಸ್ ರಾಜಿ ಮಾಡಿಕೊಂಡಿಲ್ಲ. ಮೈತ್ರಿ ಮಾಡಿಕೊಂಡಾಕ್ಷಣ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎನ್ನುವುದು ಸುಳ್ಳು. ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಅಸ್ತಿತ್ವ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಬಂಡಾಯ ಶಾಸಕರ ಬಗ್ಗೆ ಜಮೀರ್ ಭಾವನಾತ್ಮಕ ಮಾತುಗಳು!
ಬಿಜೆಪಿಯವ್ರು ಸರಿಯಾಗಿದ್ದಾರಾ?
2013ರಲ್ಲಿ ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ, ನಮ್ಮಪ್ಪನಾಣೆ ನಾನು ಬಿಜೆಪಿ ಹೋಗೊಲ್ಲ ಎಂದಿದ್ದರು. 2013ರಲ್ಲಿ ಶ್ರೀರಾಮುಲು ಎಲ್ಲಿದ್ದ? ಯಡಿಯೂರಪ್ಪ ಬಿಜೆಪಿ ಬಿಟ್ಟ ಬಳಿಕ ಪಕ್ಷ ಶುದ್ಧವಾಗಿದೆ ಎಂದು ಹೇಳಿಕೆ ನೀಡಿರಲಿಲ್ಲವೇ? ಬಿಜೆಪಿಯವರು ಸರಿಯಾಗಿದ್ದಾರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಾಲಿಗೆ ತಲೆನೋವಾದ ಮಂಡ್ಯ ಲೋಕಸಭೆ ಉಪ ಚುನಾವಣೆ
ಶಿವರಾಮೇಗೌಡ ಗೆಲ್ತಾರೆ
ಮಂಡ್ಯ ಉಪ ಚುನಾವಣೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಅವರು ನೂರಕ್ಕೆ ನೂರರಷ್ಟು ಗೆಲ್ಲುವುದು ಖಚಿತ. ಆದರೆ, ಅವರಿಗೆ ಕಾಂಗ್ರೆಸ್ ಬೆಂಬಲ ನೀಡುವುದಿಲ್ಲ ಎಂಬ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಹೈಕಮಾಂಡ್ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು. ಸಭೆಗೆ ಕಾಂಗ್ರೆಸ್ನ ಬಹುತೇಕ ಎಲ್ಲ ನಾಯಕರೂ ಬಂದಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಅವರನ್ನು ಗೆಲ್ಲಿಸಲಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು.