ಮಂಡ್ಯದಲ್ಲಿ ಎಚ್ಡಿಕೆ ನೀಡಿದ್ದ ಅನುದಾನಕ್ಕೆ ಬಿಜೆಪಿ ಸರ್ಕಾರ ತಡೆಯೊಡ್ಡುತ್ತಿದೆಯೇ?
ಮಂಡ್ಯ, ಜನವರಿ 8: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಡ್ಯ ಜಿಲ್ಲೆಯತ್ತ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಹೆಚ್ಚಿನ ಒಲವು ಹೊಂದಿದ್ದರು. ಹೀಗಾಗಿ ನೂರಾರು ಕೋಟಿ ಯೋಜನೆಗಳಿಗೆ ಅನುದಾನವನ್ನು ಪ್ರಕಟಿಸಿದ್ದರು. ಅದು ರಾಜಕೀಯ ರೂಪ ಪಡೆದುಕೊಳ್ಳುವುದರೊಂದಿಗೆ ಪ್ರತಿಪಕ್ಷದ ಟೀಕೆಗಳಿಗೂ ಕಾರಣವಾಗಿತ್ತು.
ಅವರ ಅಧಿಕಾರದ ಅವಧಿಯಲ್ಲಿ ಮಳವಳ್ಳಿ ಕ್ಷೇತ್ರಕ್ಕೆ ಸುಮಾರು 1300 ಕೋಟಿ ರೂ.ಗಳ ಅನುದಾನ ನೀಡಲಾಗಿತ್ತು ಎನ್ನಲಾಗಿದ್ದು, ಈ ಪೈಕಿ 300 ರಿಂದ 400 ಕೋಟಿ ರೂ. ಹಣದವರೆಗೆ ಬಿಜೆಪಿ ಸರ್ಕಾರ ತಡೆಯೊಡ್ಡಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.
ನೆರೆ ಪರಿಹಾರದ ಹಣವನ್ನು ಪಾಕಿಸ್ತಾನದ ಬಳಿ ಕೇಳಬೇಕೇ?: ಎಚ್ಡಿಕೆ ಪ್ರಶ್ನೆ
ಈ ಬಗ್ಗೆ ಕ್ಷೇತ್ರದ ಶಾಸಕ ಡಾ.ಕೆ.ಅನ್ನದಾನಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಕ್ಷೇತ್ರದಲ್ಲಿ ಹನಿ ನೀರಾವರಿ ಯೋಜನೆಯ 200 ಕೋಟಿ ರೂ. ಭಾರೀ ನೀರಾವರಿ ಯೋಜನೆಗೆ ಸೇರಿದ 20 ಕೋಟಿ ರೂ., ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ 10 ಕೋಟಿ ರೂ. ಹಣವನ್ನು ತಡೆಹಿಡಿಯಲಾಗಿದೆ. ಗ್ರಾಮೀಣಾಭಿವೃದ್ಧಿಗೆ ನೀಡಲಾಗಿದ್ದ 10 ಕೋಟಿ ರೂ. ಹಣವನ್ನು ತಡೆಹಿಡಿದಿರುವುದಕ್ಕೆ ಸಚಿವ ಈಶ್ವರಪ್ಪನವರನ್ನು ಪ್ರಶ್ನಿಸಿದಾಗ 3 ಕೋಟಿ ರೂ.ಕೊಟ್ಟು ಕೈ ತೊಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ನೀರಾವರಿ ಇಲಾಖೆ ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಮಗ್ರ ಯೋಜನಾ ವರದಿಯನ್ನು ರೂಪಿಸಿಕೊಡದೆ ವಿಳಂಬ ಮಾಡುತ್ತಿದ್ದಾರೆ. ವಿರೋಧ ಪಕ್ಷಕ್ಕೆ ಸೇರಿದವನೆಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದ್ದಾರೆ. ಶಾಸಕನಾಗಿ ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದಿರುವ ಅವರು, ವಿಶ್ವೇಶ್ವರಯ್ಯ ನಾಲೆ, ಸಂಪರ್ಕ ನಾಲೆಗಳ ಆಧುನೀಕರಣ, ಹೆಬ್ಬಕವಾಡಿ ಅಚ್ಚುಕಟ್ಟು ಬೈಪಾಸ್ ನಾಲೆ ಅಭಿವೃದ್ಧಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಕೆಲವೊಂದು ಸಮಗ್ರ ಯೋಜನಾ ವರದಿ ತಯಾರಿಕಾ ಹಂತದಲ್ಲಿವೆ. ಮತ್ತೆ ಕೆಲವು ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಬಿಡುಗಡೆಯಾದ ಹಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದರು.
ಕೇಂದ್ರದ ಚಂದಮಾಮನನ್ನು ತೋರಿಸಿ'ಅನರ್ಹ ಸರ್ಕಾರ' ರಚಿಸಿದ್ದಾರೆ:ಎಚ್ಡಿಕೆ
2018-19ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಬಿಡುಗಡೆಯಾದ 1.50 ಕೋಟಿ ರೂ. ಅನುದಾನಕ್ಕೆ ಕಾಮಗಾರಿಗಳನ್ನು ಗುರುತಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಯಾವುದೇ ಹಣವನ್ನು ನಿಧಿಯಲ್ಲಿ ಉಳಿಸಿಕೊಂಡಿಲ್ಲ. 2019-20ನೇ ಸಾಲಿನಲ್ಲಿ ಬಿಡುಗಡೆಯಾಗಿರುವ 50 ಲಕ್ಷ ರೂ. ಅನುದಾನ ಬಳಕೆಯಲ್ಲಿ ಸ್ವಲ್ಪ ವಿಳಂಬವಾಗಿರುವುದು ಸತ್ಯ. ಈ ಅನುದಾನದಲ್ಲಿ ಶ್ರೀರಾಮ ಒಕ್ಕಲಿಗರ ಭವನ, ಪ್ರಯಾಣಿಕರ ತಂಗುದಾಣ, ಕನಕ ಭವನ, ಅಂಬೇಡ್ಕರ್ ಭವನಗಳಿಗೆ ಹಣ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಕೊಟ್ಟಿದ್ದೇನೆ. ಮುಂದಿನ ಹದಿನೈದು ದಿನಗಳೊಳಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ಕಾಮಗಾರಿಗಳಿಗೆ ಗುರುತಿಸಿ ಕ್ರಿಯಾಯೋಜನೆಗೆ ಸಲ್ಲಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.