ಮಂಡ್ಯ: ಅಂಗನವಾಡಿ ಚುಚ್ಚುಮದ್ದಿನಿಂದ 2 ಮಕ್ಕಳು ಸಾವು
ಮಂಡ್ಯ, ಫೆಬ್ರವರಿ 10: ಅಂಗನವಾಡಿಯಲ್ಲಿ ನೀಡಿದ ಚುಚ್ಚುಮದ್ದಿನಿಂದ ಎರಡು ಮಕ್ಕಳು ಸಾವನ್ನಪ್ಪಿದ್ದು, 7 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ತಾಲೂಕಿನ ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಚನ್ನಗಿರಿ ಗ್ರಾಮದ ಪ್ರೀತಮ್(2) ಮತ್ತು ಭುವನ್(2) ಮೃತಪಟ್ಟಿರುವ ಮಕ್ಕಳು. ಫೆ.9 ರಂದು ಗ್ರಾಮದ ಅಂಗನವಾಡಿಯಲ್ಲಿ 9 ಮಕ್ಕಳಿಗೆ ಚುಚ್ಚುಮದ್ದು ಲಸಿಕೆ ನೀಡಲಾಗಿತ್ತು ಎನ್ನಲಾಗಿದೆ. ಈ ಚುಚ್ಚುಮದ್ದಿನಿಂದ ಎರಡು ಮಕ್ಕಳ ಸಾವು ಮತ್ತು ಹಲವು ಮಕ್ಕಳ ಅಸ್ವಸ್ಥ ಸುದ್ದಿ ತಿಳಿದು ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ.
7 ಅಸ್ವಸ್ಥ ಮಕ್ಕಳಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟು 2500 ಮಕ್ಕಳಿಗೆ ಇದೇ ಚುಚ್ಚುಮದ್ದು ಹಾಕಿಸಲಾಗಿತ್ತು ಆದರೆ ಯಾರಿಗೂ ಏನೂ ತೊಂದರೆಯಾಗಿಲ್ಲ ಕೆಲವೇ ಕೆಲವು ಮಕ್ಕಳು ಮಾತ್ರ ಅಸ್ವಸ್ಥರಾಗಿದ್ದಾರೆ. ಈ ಬಗ್ಗೆ ಕಾರಣ ಹುಡುಕಲು ತಜ್ಞರ ಸಮಿತಿ ರಚಿಸಲಾಗಿದೆ ಎಂದು ಮಂಡ್ಯ ಆರೋಗ್ಯಾಧಿಕಾರಿ ಮೋಹನ್ ಹೇಳಿಕೆ ನೀಡಿದ್ದಾರೆ.