ಜೆಡಿಎಸ್ ಭದ್ರಕೋಟೆ ಮಂಡ್ಯದ ಮೇಲೆ ಬಿಜೆಪಿ ಕಣ್ಣಿಟ್ಟಿದೆಯಾ?
Recommended Video
ಮಂಡ್ಯ, ಏಪ್ರಿಲ್ 26: ಮಂಡ್ಯ ಲೋಕಸಭಾ ಚುನಾವಣಾ ವೇಳೆ ಮತ್ತು ನಂತರದ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿ ನಾಯಕರು ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ನಲ್ಲಿ ಆಗಿರುವ ಒಂದಷ್ಟು ಬದಲಾವಣೆಗಳನ್ನು ಬಳಸಿಕೊಂಡು ತಮ್ಮ ಅಸ್ತಿತ್ವ ಕಂಡುಕೊಳ್ಳುವ ಮತ್ತು ಆ ಮೂಲಕ ಜೆಡಿಎಸ್ ಕೋಟೆಯನ್ನು ಛಿದ್ರ ಮಾಡಲು ಮುಂದಾಗುವ ಎಲ್ಲ ಲಕ್ಷಣಗಳು ಕಾಣತೊಡಗಿದೆ.
ಮಂಡ್ಯ ಲೋಕಸಭಾ ಚುನಾವಣೆ ಬಳಿಕ ಮಂಡ್ಯದ ರಾಜಕೀಯದಲ್ಲಿ ಒಂದಷ್ಟು ಬದಲಾವಣೆಗಳಾಗಿರುವುದನ್ನು ತಳ್ಳಿಹಾಕುವಂತಿಲ್ಲ. ಇಲ್ಲಿ ರೈತಸಂಘ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರನ್ನು ಒಂದು ವೇದಿಕೆಯಡಿ ಒಂದುಗೂಡಿಸುವಲ್ಲಿ ಸುಮಲತಾ ಯಶಸ್ವಿಯಾಗಿದ್ದರು.
ಚುನಾವಣೆ ಮುಗಿದರೂ ಮಂಡ್ಯದಲ್ಲಿ ರಾಜಕೀಯ ಕಾವು ಇನ್ನೂ ಆರಿಲ್ಲ
ಪಕ್ಷ ಬೇಧ ಮರೆತು ಸುಮಲತಾ ಅವರಿಗಾಗಿ ಕೆಲಸ ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ನ ರಾಜ್ಯ ನಾಯಕರ ಯಾವುದೇ ಸೂಚನೆಗೂ ಸೊಪ್ಪು ಹಾಕದೆ ಮತ್ತು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಬೆಂಬಲಿಸುವಂತೆ ಫರ್ಮಾನು ಹೊರಡಿಸಿದ್ದರೂ ಅದನ್ನು ಲೆಕ್ಕಿಸದೆ ಸುಮಲತಾ ಪರ ಪ್ರಚಾರ ನಡೆಸಿದ್ದರು.
ಇದರಿಂದಾಗಿ ಕೆಲವರು ಪಕ್ಷದಿಂದ ಅಮಾನತಿನ ಶಿಕ್ಷೆಯನ್ನು ಅನುಭವಿಸುವಂತಾಗಿದೆ. ಈಗ ಇಂತಹ ಮುಖಂಡರು ಮತ್ತು ಕಾರ್ಯಕರ್ತರಿಗೆ ಅತ್ತ ಕಾಂಗ್ರೆಸ್ನಲ್ಲಿಯೂ ಇರಲಾಗದೆ, ಜೆಡಿಎಸ್ ನತ್ತವೂ ಮುಖ ಮಾಡಲಾಗದೆ ತಟಸ್ಥವಾಗಿಯೂ ಉಳಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಗಿ ನಿಗಿ ಕೆಂಡವಾದ ಮಂಡ್ಯ ರಣಾಂಗಣದಲ್ಲಿ ಗೆಲ್ಲೋರು ಯಾರು?
ಹೀಗಾಗಿ ಇವರೆಲ್ಲರೂ ಸುಮಲತಾ ಅವರೊಂದಿಗೆ ಈಗ ನಿಂತರೂ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಎಲ್ಲವೂ ಹೀಗೆಯೇ ಇರುತ್ತದೆ ಎನ್ನಲಾಗುವುದಿಲ್ಲ. ಹೀಗಾಗಿ ರಾಜಕೀಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಬೇರೆ ಪಕ್ಷದತ್ತ ಮುಖ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಇಂತಹವರಿಗೆ ಬಾಗಿಲು ತೆರೆದು ನಿಂತಿರುವುದು ಬಿಜೆಪಿ ಪಕ್ಷ ಮಾತ್ರ.
ಈ ಬೆಳವಣಿಗೆ ಬಿಜೆಪಿಗೆ ವರದಾನವಾಗಿದೆ
ಹೇಗಾದರೂ ಮಾಡಿ ಹಳೇ ಮೈಸೂರು ವ್ಯಾಪ್ತಿಯಲ್ಲಿ ಅದರಲ್ಲೂ ಮಂಡ್ಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲೇಬೇಕೆಂಬ ಹಠವೂ ಬಿಜೆಪಿ ನಾಯಕರಲ್ಲಿದೆ. ಈ ಬಾರಿಯ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಆದ ಬೆಳವಣಿಗೆ ಬಿಜೆಪಿಗೆ ವರದಾನವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಪ್ರತಿಯೊಂದು ಬೆಳವಣಿಗೆಯನ್ನು ಕಾದು ನೋಡುತ್ತಿರುವ ನಾಯಕರು ಅದನ್ನು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಬಳಸಿಕೊಂಡರೆ ಅದರಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ.
ಬಂಡಾಯ ನಾಯಕರಿಗೆ ಬಿಸಿ ಮುಟ್ಟಿಸಿದ್ದ ಎಚ್ ಡಿಡಿ
ಜೆಡಿಎಸ್ ವರಿಷ್ಠರ ನಿಲುವುಗಳ ವಿರುದ್ಧ ಸಿಡಿದು ಪಕ್ಷ ತೊರೆದಿರುವ ಮಾಜಿ ಶಾಸಕರಾದ ಎನ್. ಚಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ನ ಮುಂದೆ ಮಂಡಿಯೂರಿದ್ದರು. ಜೆಡಿಎಸ್ನಲ್ಲಿನ ಕುಟುಂಬ ರಾಜಕಾರಣ ಮತ್ತು ನಾಯಕರ ಮೇಲಿನ ಆಕ್ರೋಶದಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ ವಿದಾನಸಭಾ ಚುನಾವಣೆ ಬಳಿಕ ತಾವಿದ್ದ ಪಕ್ಷದ ನಾಯಕರೊಂದಿಗೆ ಸೇರಿ ಸರ್ಕಾರ ರಚನೆ ಮಾಡುವ ಮೂಲಕ ತಮ್ಮನ್ನು ವಿರೋಧಿಸಿ ಹೊರಗೆ ಹೋದ ಬಂಡಾಯ ನಾಯಕರಿಗೆ ದೇವೇಗೌಡರು ಬಿಸಿ ಮುಟ್ಟಿಸಿದ್ದರು.
ಗೆದ್ದರೂ, ಸೋತರೂ ಮಂಡ್ಯದಲ್ಲೇ ಇರುವೆ : ನಿಖಿಲ್
ಜೆಡಿಎಸ್ ಶಾಸಕರನ್ನು ಕಾಡುತ್ತಿರುವ ವಿಷಯ
ಇದೀಗ ಮಂಡ್ಯವನ್ನು ಸಂಪೂರ್ಣ ತಮ್ಮ ಹಿಡಿತಕ್ಕೆ ತೆಗೆದುಕೊಂಡ ದೇವೇಗೌಡರ ಕುಟುಂಬ ಇಲ್ಲಿನ ಪಕ್ಷದ ಶಾಸಕರನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ದೇವೇಗೌಡರ ಪುತ್ರಿ ಅನಸೂಯ ಅವರಿಗೆ ನೀಡಿದರೇ ಹೊರತು ಸ್ಥಳೀಯ ಶಾಸಕರಿಗೆ ಕಿಮ್ಮತ್ತು ನೀಡಲಿಲ್ಲ. ಜತೆಗೆ ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ನೆಲೆಯೂರಿದರೆ ತಮ್ಮ ಅಸ್ತಿತ್ವಕ್ಕೆ ಕೊಡಲಿಯೇಟು ಬೀಳುವ ಆತಂಕವೂ ಜೆಡಿಎಸ್ನ ಕೆಲವು ಶಾಸಕರನ್ನು ಕಾಡುತ್ತಿದೆ. ಜತೆಗೆ ಲೋಕಸಭಾ ಚುನಾವಣೆಯಲ್ಲಿ ಎದುರಾಳಿ ಸುಮಲತಾ ಅವರ ಮುಂದೆ ಸಿಎಂ ಸೇರಿದಂತೆ ಜೆಡಿಎಸ್ ನಾಯಕರು ನಡೆದುಕೊಂಡ ರೀತಿ, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭಾರೀ ಹೊಡೆತ ನೀಡಬಹುದು ಎಂಬ ಆತಂಕವೂ ಶುರುವಾಗಿದೆ.
ನಾರಾಯಣಗೌಡ ನಡೆಯ ಬಗ್ಗೆಯೇ ಸಂಶಯ
ಹೀಗಾಗಿ ಒಂದಷ್ಟು ಜೆಡಿಎಸ್ ನಾಯಕರು ಬಿಜೆಪಿಯತ್ತ ಮುಖ ಮಾಡುತ್ತಾರೆ ಎಂಬ ಗಾಳಿಸುದ್ದಿಗಳು ಹರಡುತ್ತಿವೆ. ಅದರಲ್ಲೂ ಕೆ.ಆರ್. ಪೇಟೆ ಶಾಸಕ ಕೆ.ಸಿ. ನಾರಾಯಣಗೌಡ ಅವರ ನಡೆಯ ಬಗ್ಗೆಯೇ ಸಂಶಯ ವ್ಯಕ್ತವಾಗತೊಡಗಿದೆ. ಅವರು ಈ ಹಿಂದೆ ಬಜೆಟ್ ಅಧಿವೇಶನಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕ್ಷೇತ್ರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಅತೃಪ್ತಿಯನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.
ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ನಡೆಯಲಿರುವ ರಾಜಕೀಯ ವಿದ್ಯಮಾನಗಳು ಏನೆಲ್ಲ ಬದಲಾವಣೆಯನ್ನು ಮಾಡಬಹುದು? ಮಂಡ್ಯದಲ್ಲಿ ಆಗುವ ಒಂದಷ್ಟು ಬದಲಾವಣೆಗಳನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳಬಹುದು? ಎಂಬಿತ್ಯಾದಿ ಪ್ರಶ್ನೆಗಳು ಮತ್ತು ಆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಈಗ ಆರಂಭವಾಗಿವೆ. ಏನಾಗುತ್ತದೆಯೋ ಎಂಬುದನ್ನು ನಾವು ಕಾದು ನೋಡಬೇಕಿದೆ.