ಕಣ್ತುಂಬಿಕೊಳ್ಳಿ ಭರಚುಕ್ಕಿ- ಗಗನಚುಕ್ಕಿಗಳ ನೃತ್ಯವೈಭವ!
ಮೈಸೂರು, ಸೆಪ್ಟೆಂಬರ್ 18: ಒಂದೆಡೆ ಮಳೆ ಸುರಿಯುತ್ತಿದೆ. ಮತ್ತೊಂದೆಡೆ ಜಲಾಶಯ ಭರ್ತಿಯಾಗದಿದ್ದರೂ ಕಬಿನಿ, ಕೆಆರ್ ಎಸ್ ಜಲಾಶಯದಿಂದ ನೀರು ಹರಿದು ಹೋಗುತ್ತಿದೆ. ಹೀಗಾಗಿ ಕಾವೇರಿ ನದಿಯಿಂದ ನಿರ್ಮಾಣವಾಗಿರುವ ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿಯಲ್ಲೀಗ ಜಲವೈಭವ ಆರಂಭವಾಗಿದೆ.
ಮಖಾ ಮಳೆಯ ಆರ್ಭಟಕ್ಕೆ ಮೈಯದುಂಬಿದೆ ಅಬ್ಬಿ ಜಲಪಾತ
ಮುಂಗಾರಲ್ಲೂ ಮೈಕೈ ತುಂಬಿಕೊಳ್ಳದೆ ಸೊರಗಿ ಹೋಗಿದ್ದ ಈ ಜಲಧಾರೆಗಳು ಇದೀಗ ಮೈಕೈ ತುಂಬಿಕೊಂಡ ಚೆಲುವೆಯರಂತೆ ಬಳುಕುತ್ತಾ ಬಾಗುತ್ತಾ ಬೀಗುತ್ತಾ ಥಕಥೈ ಎನ್ನುತ್ತಿವೆ. ಇದನ್ನು ನೋಡುವ ಸಲುವಾಗಿ ದೂರದಿಂದ ಪ್ರವಾಸಿಗರ ದಂಡು ಇತ್ತ ಸುಳಿಯತೊಡಗಿದೆ.
ಹುಷಾರು, ಪ್ರಾಣ ತೆಗೆಯುತ್ತವೆ ಕೊಡಗಿನ ಜಲಪಾತಗಳು!
ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ ಉಪ ನದಿಗಳೊಂದಿಗೆ ಸಂಗಮಗೊಂಡು ಕೆಆರ್ ಎಸ್ ತಲುಪುತ್ತಾಳೆ. ಬಳಿಕ ಟಿ.ನರಸೀಪುರ ಬಳಿ ಕಬಿನಿ ಇತರೆ ಉಪನದಿಗಳು ಸಂಗಮವಾಗುತ್ತವೆ. ಈ ಸಂದರ್ಭ ಕಾವೇರಿ ರೌದ್ರತೆಯನ್ನು ತಾಳುತ್ತಾಳೆ. ಬೆಟ್ಟಗುಡ್ಡ, ಕಾಡುಮೇಡುಗಳನ್ನೆಲ್ಲಾ ಕ್ರಮಿಸುತ್ತಾ ಶಿವನಸಮುದ್ರ ತಲುಪುತ್ತಿದ್ದಂತೆಯೇ ಗಗನದೆತ್ತರದಿಂದ ಧುಮುಕಿ ಗಗನಚುಕ್ಕಿಯಾಗಿ, ಬಳಿಕ ಭರದಿಂದ ಹರಿದು ಭರಚುಕ್ಕಿಯಾಗಿ ಗಮನಸೆಳೆಯುತ್ತಾಳೆ.
ಎರಡು ಜಿಲ್ಲೆಯ ಎರಡು ಚುಕ್ಕಿಗಳು
ಶಿವನಸಮುದ್ರದಲ್ಲಿರುವ ಎರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದರೂ ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿವೆ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಈ ಜಲಧಾರೆಗಳು ನಯನಮನೋಹರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ, ಕೊಳ್ಳೆಗಾಲ ಮೂಲಕವೂ ಬರಬಹುದು.
ಸಮೀಪದ ಪ್ರೇಕ್ಷಣೀಯ ಸ್ಥಳ
ಶಿವನಸಮುದ್ರಕ್ಕೆ ತೆರಳಿದರೆ ಸುತ್ತಮುತ್ತಲಿರುವ ತಲಕಾಡು, ಸೋಮನಾಥಪುರ ಮುಂತಾದ ಪ್ರವಾಸಿ ತಾಣಗಳಿಗೂ ಭೇಟಿ ನೀಡಿ ಬರಬಹುದಾಗಿದೆ. ಇಲ್ಲಿಗೆ ತೆರಳಲು ಹೆಚ್ಚಿನ ಬಸ್ ಸಂಪರ್ಕ ಇಲ್ಲದಿರುವುದರಿಂದ ಬಾಡಿಗೆ ಅಥವಾ ಸ್ವಂತ ವಾಹನಗಳಲ್ಲಿ ತೆರಳಬೇಕಾಗುತ್ತದೆ.
ಸೊಬಗಷ್ಟೇ ಅಲ್ಲ, ಅಪಾಯಕಾರಿಯೂ ಹೌದು!
ಶಿವನಸಮುದ್ರಕ್ಕೆ ತೆರಳುವ ಪ್ರವಾಸಿಗರು ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ದೂರದಿಂದ ನೋಡಿ ಹಿಂತಿರುಗಿದರೆ ಕ್ಷೇಮ. ಅದು ಬಿಟ್ಟು ಜಲಧಾರೆಯ ಸೌಂದರ್ಯಕ್ಕೆ ಮನಸೋತು ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇಲ್ಲಿ ಪ್ರಾಣಕಳೆದುಕೊಂಡವರ ದೊಡ್ಡಪಟ್ಟಿಯೇ ಇದೆ.
ಉಳಿದುಕೊಳ್ಳುವುದಕ್ಕೆ ಸೌಲಭ್ಯವಿಲ್ಲ
ಶಿವನಸಮುದ್ರದಲ್ಲಿ ಮಾರಮ್ಮನ ದೇವಾಲಯವಿದೆ. ಇನ್ನು ಇಲ್ಲಿ ಐತಿಹಾಸಿಕ ದರ್ಗಾವೂ ಇದೆ. ದೂರದಿಂದ ತೆರಳುವ ಪ್ರವಾಸಿಗರಿಗೆ ಅಲ್ಲಿ ಉಳಿದುಕೊಳ್ಳಲು ಯಾವುದೇ ಸೌಲಭ್ಯವಿಲ್ಲ ಹಾಗಾಗಿ ಸಮೀಪದ ಪಟ್ಟಣಗಳಾದ ಕೊಳ್ಳೇಗಾಲ ಅಥವಾ ಮಳವಳ್ಳಿಗೆ ಹೋಗಬೇಕಾಗುತ್ತದೆ.
ಪ್ರವಾಸೋದ್ಯಮ ಇಲಾಖೆಯ ವೈಫಲ್ಯ
ಇಲ್ಲಿ ಪ್ರವಾಸೋದ್ಯಮ ಇಲಾಖೆಯು ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಇಲ್ಲಿ ಕಂಡುಬರುವ ನೋಟಗಳು ಸಾಕ್ಷಿಯಾಗಿವೆ.
ಪ್ರವೇಶ ಉಚಿತ ಎಂಬುದೇ ಸಮಸ್ಯೆ!
ಈ ತಾಣಗಳಿಗೆ ಪ್ರವೇಶ ಉಚಿತವಾಗಿರುವುದರಿಂದ ಯುವಕರು ಬೇಕಾಬಿಟ್ಟಿಯಾಗಿ ಬರುತ್ತಿದ್ದು, ಸ್ವೇಚ್ಛೆಯಿಂದ ನಡೆದುಕೊಂಡು ಇತರರಿಗೆ ತೊಂದರೆ ನೀಡುವುದಲ್ಲದೆ ತಮ್ಮ ಜೀವಕ್ಕೂ ಅಪಾಯ ತಂದುಕೊಳ್ಳುತ್ತಾರೆ. ಇದಕ್ಕೆ ಆಗಾಗ್ಗೆ ಇಲ್ಲಿ ಮುಳುಗಿ ಸಾಯುವ ಪ್ರಕರಣಗಳು ಸಾಕ್ಷಿಯಾಗಿವೆ.