ಮಂಡ್ಯದಿಂದ ಪ್ರಚಾರ ಆರಂಭಿಸಿದ ರಿಯಲ್ ಸ್ಟಾರ್ ಉಪೇಂದ್ರ
ಮಂಡ್ಯ, ಏಪ್ರಿಲ್ 1: ಮಂಡ್ಯದಲ್ಲಿ ಇಂದು ಸ್ಟಾರ್ ನಟರು ಬೀಡುಬಿಟ್ಟಂತೆ ಕಾಣುತ್ತಿದೆ. ಒಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲವೆಡೆ ಪ್ರಚಾರಕ್ಕಿಳಿದರೆ, ಮತ್ತೊಂದೆಡೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ನಟ ಉಪೇಂದ್ರ ಮಂಡ್ಯದಿಂದ ತಮ್ಮ ಪ್ರಚಾರ ಆರಂಭಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ ಅವರು, ಇತ್ತೀಚೆಗೆ ರಾಜಕಾರಣ ವ್ಯಾಪಾರವಾಗಿಬಿಟ್ಟಿದೆ. ರಾಜಕಾರಣ ತೊಲಗಿಸಿ, ಪ್ರಜಾಕಾರಣ ತರುವ ಉದ್ದೇಶ ನಮ್ಮದು. ಜನರಿಗೆ ಕೆಲಸ ಮಾಡುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್ ನೀಡಿದ್ದೇವೆ ಎಂದರು.
ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ಉಪೇಂದ್ರ
ಇನ್ನೂ 14 ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಆಗಬೇಕಿದೆ. ರೋಡ್ ಶೋಗಳ ಮೇಲೆ ನಮಗೆ ನಂಬಿಕೆ ಇಲ್ಲ. ಮುಂದಿನ ಪೀಳಿಗೆಗಾದರೂ ಪ್ರಜಾಕಾರಣ ಬೇಕು. ವಿಚಾರವೇ ಪ್ರಚಾರವಾಗಬೇಕು. ಪ್ರಸ್ತುತ ರಾಜಕಾರಣ ಬಲಿಷ್ಠವಾದ ಜನರ ಕೈಯ್ಯಲ್ಲಿದೆ. ಜಾತಿ, ಹಣ ರಾಜಕೀಯ ಹೋಗಲಾಡಿಸುವ ಪ್ರಯತ್ನ ನಮ್ಮದು ಎಂದು ಉಪೇಂದ್ರ ತಿಳಿಸಿದರು.
ಹಣ, ಹೆಸರು, ಮಸಲ್ ಪವರ್ ಇರುವವರ ಬಳಿ ಅಧಿಕಾರ ಸಿಕ್ಕಿ ಹಾಕಿಕೊಂಡಿದೆ ಎಂದ ಉಪೇಂದ್ರ ಜ್ಞಾನ, ಶ್ರಮದ ಮೂಲಕ ಅಧಿಕಾರ ಶಾಹಿಗಳ ವಿರುದ್ಧ ಚುನಾವಣೆ ನಡೆಸಬಹುದು. ಸಿನಿಮಾ ಹಾಗೂ ಪಕ್ಷದ ಮೂಲಕ ಜನರ ಮನಃಪರಿವರ್ತನೆ ಮಾಡುವುದಕ್ಕೆ ಹೋಗುತ್ತಿದ್ದೇನೆ. ಜನರ ಜಾಗೃತಿ ನಿರಂತರವಾಗಿಸಲೂ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಮೈಸೂರಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಸಮಾಜ ಸೇವೆ ಅನ್ನೋದು ಇನ್ವೆಸ್ಟ್ ಮೆಂಟ್ ಆಗಿದೆ. ಲಕ್ಷಾಂತರ ಜನ ಸೇರಿಸಿ ಸಮಾರಂಭ ಮಾಡಿದರೆ ನಾನು ಭ್ರಷ್ಟನಾಗುತ್ತೇನೆ. ನಮ್ಮ ಕನಸ್ಸನ್ನು ಈಡೇರಿಸಲು ಈಗಾಗಲೇ ಪ್ರಯತ್ನ ಮಾಡುತ್ತಿದ್ದೇನೆ. ಹಳ್ಳಿ ಭಾಗಕ್ಕೂ ರೀಚ್ ಮಾಡೋಕೆ ಮುಂದಿನ ದಿನಗಳಲ್ಲಿ ಪ್ರಯತ್ನ ನಡೆಸುತ್ತೇವೆ ಎಂದು ಉಪೇಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.